ದ.ಕ. ಜಿಲ್ಲಾಡಳಿತ ಮುಚ್ಚಲು ಆದೇಶಿಸಿದ್ದ ವಾಮಂಜೂರು ಅಣಬೆ ತಯಾರಿಕಾ ಘಟಕದಲ್ಲಿ ಅಣಬೆ ಉತ್ಪಾದನೆ: ಆರೋಪ
ಅಣಬೆ ತಯಾರಿಕೆಯ ಕಚ್ಚಾವಸ್ತು ಸಾಗಾಟದ ವಾಹನ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

ಬಜ್ಪೆ, ಜು.23: ಇಲ್ಲಿನ ವಾಮಂಜೂರು ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕದಲ್ಲಿ ಮತ್ತೆ ಅಣಬೆ ಉತ್ಪಾದನೆ ಮಾಡಲಾಗುತ್ತಿದೆ ಎಂದು ವೈಟ್ ಗ್ರೊ ಅಗ್ರಿ ಎಲ್ ಎಲ್ ಪಿ ಅಣಬೆ ತಯಾರಿಕಾ ಘಟಕ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.
ರವಿವಾರ ಅಣಬೆ ತಯಾರಿಕೆಗೆ ಬಳಸುವ ಕಚ್ಚಾವಸ್ತುವನ್ನು ಘಟಕಕ್ಕೆ ಸಾಗಾಟ ಮಾಡುತ್ತಿದ್ದ ವೇಳೆ ತಡೆದು ನಿಲ್ಲಿಸಿದ ಗ್ರಾಮಸ್ಥರು, ವಾಹನ ಚಾಲಕನನ್ನು ತರಾಟೆಗೆ ತೆಗೆದುಕೊಂಡು ವಾಹನವನ್ನು ಹಿಂದೆ ಕಳುಹಿಸಿರುವ ಘಟನೆ ನಡೆಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅಣಬೆ ತಯಾರಿಕಾ ಘಟಕದಿಂದ ದುರ್ನಾತ ಬೀರುತ್ತಿದ್ದು ಅದನ್ನು ಮುಚ್ಚುವಂತೆ ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಗ್ರಾಮಸ್ಥರ ಅಹವಾಲು ಆಲಿಸಿ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಿದ್ದರು. ಜೊತೆಗೆ ದುರ್ವಾಸನೆ ನಿಯಂತ್ರಣ ಪರಿಕರಗಳನ್ನು ಅಳವಡಿಸಿದ ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾಡಿದ್ದ ಸಮಿತಿಯ ವರದಿ ಆಧರಿಸಿ ಮುಂದಿನ ಆದೇಶ ನೀಡುವುದಾಗಿ ಹೇಳಿದ್ದರು.
ಜಿಲ್ಲಾಧಿಕಾರಿಯವರ ಆದೇಶದ ಬಳಿಕವೂ ಲಾರಿಗಳ ಮೂಲಕ ಕಚ್ಚಾವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಗ್ರಾಮಸ್ಥರು ತಡೆದು ಪ್ರತಿಭಟಿಸಿದ್ದೆವು. ಆದರೆ, ಇತ್ತೀಚೆಗೆ ಸಣ್ಣ ವಾಹನಗಳ ಮೂಲಕ ವಿವಿಧ ಕಾರಣಗಳನ್ನು ಹೇಳಿಕೊಂಡು ವಾಹನಗಳನ್ನು ಒಳಗೆ ಕಳುಹಿಸುತ್ತಿದ್ದರು. ರವಿವಾರ ಸಣ್ಣ ವಾಹನವೊಂದು ಘಟಕಕ್ಕೆ ತೆರಳುತ್ತಿದ್ದಾಗ ಅನುಮಾನಗೊಂಡು ತಡೆದು ಪರಿಶೀಲಿಸಿದಾಗ ಅದರಲ್ಲಿ ಅಣಬೆ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳು ಪತ್ತೆಯಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಕುರಿತು ವಾರ್ತಾಭಾರತಿ ಜೊತೆ ಮಾತನಾಡಿದ ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕ ವಿರೋಧಿ ಹೋರಾಟ ಸಮಿತಿ, ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಆದೇಶಿಸಿದ್ದರೂ ಸಂಸ್ಥೆಯವರು ಜಿಲ್ಲಾಡಳಿತದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದೆ ತಮ್ಮ ಘಟಕವನ್ನು ಮುನ್ನಡೆಸುತ್ತಾ ಗ್ರಾಮಸ್ಥರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಈ ಕುರಿತು ನಾವು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿಯವರೆಗೆ ಜಿಲ್ಲಾಡಳಿತದ ಆದೇಶಕ್ಕೆ ಬೆಲೆಕೊಟ್ಟು, ನಮಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಅದಾಗಿಯೂ ಘಟಕದಲ್ಲಿ ಅಣಬೆ ತಯಾರಿಕೆ ನಡೆಸಿದರೆ ಗ್ರಾಮಸ್ಥರು ಒಟ್ಟಾಗಿ ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕಕ್ಕೆ ನುಗ್ಗಿ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ. ಗ್ರಾಮಸ್ಥರು ಅಣಬೆ ತಯಾರಿಕಾ ಘಟಕದ ದುರ್ವಾಸನೆಗೆ ಉಸಿರುಗಟ್ಟಿ ಸಾಯುವುದಕ್ಕಿಂತ ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಘಟಕದಲ್ಲಿ ಅಹಿತಕರ ಘಟನೆಗಳಾದರೆ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬಾರದು ಎಂಬುದು ಗ್ರಾಮಸ್ಥರ ಆಗ್ರಹ ಎಂದು ಹೋರಾಟ ಸಮಿತಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
"ಅಣಬೆ ತಯಾರಿಕಾ ಘಟಕ ನಮ್ಮನ್ನು ಮೂರ್ಖರನ್ನಾಗಿಸುತ್ತಾ ಅಣಬೆ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಅಣಬೆ ತಯಾರಿಕಾ ಘಟಕ ಕಡ್ಡಾಯ ವಾಗಿ ವಾಮಂಜೂರು ಪರಿಸರಿದಿಂದ ತೆರವಾಗಬೇಕೆಂಬುದು ನಮ್ಮ ಆಗ್ರಹ. ವಾಸನೆ ನಿರ್ಯಂತ್ರಣಕ್ಕೆ ಬೇಕಾದ ಯಾವುದೇ ವ್ಯವಸ್ಥೆಯನ್ನು ಘಟಕ ಇನ್ನೂ ಮಡಿಕೊಂಡಿಲ್ಲ. ಈ ಘಟಕ ಇಲ್ಲಿಂದ ತೆರವಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ".
- ಹೇಮಲತಾ ರಘು ಸಾಲ್ಯಾನ್
ಮಹಾನಗರ ಪಾಲಿಕೆ ಸದಸ್ಯೆ ಮತ್ತು ಹೋರಾಟ ಸಮಿತಿಯ ಪದಾಧಿಕಾರಿ
"ಈ ಕುರಿತು ಸೋಮವಾರ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದೂರು ಸಲ್ಲಿಸಲಿದ್ದೇವೆ. ಜಿಲ್ಲಾಧಿಕಾರಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಲಿದ್ದೇವೆ. ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕ ತೆರವಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ".
ರಿಯಾಝ್ ವಾಮಂಜೂರು
ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ