ಮಂಗಳೂರಿನಲ್ಲಿ ʼನಮೋ ಚೆಸ್ ಟೂರ್ನಮೆಂಟ್ʼ

ಮಂಗಳೂರು, ನ.23: ಸಂಸದ್ ಖೇಲ್ ಮಹೋತ್ಸವದ ಪ್ರಯುಕ್ತ ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ‘ನಮೋ ಚೆಸ್ ಟೂರ್ನಮೆಂಟ್’ ನಡೆಯಿತು.
ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಇನ್ನು ಪ್ರತೀ ವಾರವು ಸಂಸದ್ ಖೇಲ್ ಮಹೋತ್ಸವದ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬಡ್ಡಿ, ಹಗ್ಗ-ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟ ಆಯೋಜಿಸಲಾಗುವುದು. ಜಿಲ್ಲೆಯ ಕ್ರೀಡಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಸಂಸದ ಕ್ಯಾ.ಚೌಟರೊಂದಿಗೆ ಸಾಂಕೇತಿಕವಾಗಿ ಚೆಸ್ ಆಟವಾಡಿ ಗಮನಸೆಳೆದರು.
10 ವರ್ಷದೊಳಗಿನ ಸಬ್ ಜ್ಯೂನಿಯರ್, 15 ವರ್ಷದೊಳಗಿನ ಜ್ಯೂನಿಯರ್ ಹಾಗೂ ಓಪನ್ ಕೆಟಗರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ 500ಕ್ಕೂ ಅಧಿಕ ಚೆಸ್ಪಟುಗಳು ಪಾಲ್ಗೊಂಡಿದ್ದರು.
ಶಾಸಕ ವೇದವ್ಯಾಸ್ ಕಾಮತ್, ರಾಜ್ಯ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ರಮೇಶ್ ಕೋಟೆ, ದ.ಕ. ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನೀಲ್ ಅಚಾರ್, ಜಿಲ್ಲಾಧ್ಯಕ್ಷೆ ಅಮರಶ್ರೀ ಶೆಟ್ಟಿ ಭಾಗವಹಿಸಿದ್ದರು.







