ದೇವೇಂದ್ರನೇ ನಾಚುವ ಆಳ್ವಾಸ್ ವಿರಾಸತ್: ಡಾ.ಮೈಸೂರು ಮಂಜುನಾಥ್ ಬಣ್ಣನೆ
'ಆಳ್ವಾಸ್ ವಿರಾಸತ್' ರಾಷ್ಟ್ರೀಯ ಸಾಂಸ್ಕ್ರತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ

ಮೂಡುಬಿದಿರೆ(ವಿದ್ಯಾಗಿರಿ), ಡಿ.17: ಸಂಗೀತ ಲೋಕದ ದಿಗ್ಗಜರಾದ ಖ್ಯಾತ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ ,ಭಾರತದ ಹಿಂದೂಸ್ತಾನಿ ಕೊಳಲು ವಾದಕ ಡಾ.ಪ್ರವೀಣ್ ಗೋಡ್ಖಿಂಡಿ ಮತ್ತು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ 2023ನೇ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ರವಿವಾರ ಸಂಜೆ ಪ್ರದಾನ ಮಾಡಲಾಯಿತು.
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ(ಜೈ ಹೋ) ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯುವುದರ ಮೂಲಕ ಗೌರವಿಸಲಾಯಿತು.
ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರದ ಜೊತೆಗೆ 1 ಲಕ್ಷ ರೂಪಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪನ್ನೀರು, ತಿಲಕ, ಪುಷ್ಪಾರ್ಚನೆ ಹಾಗೂ ಆರತಿ ಮೂಲಕ ಅಭಿನಂದಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡವು ' ಸ್ವರ ಗಾನದ ಆರತಿ' ಗಾನಸುಧೆ ಹರಿಸಿತು.
ಪ್ರಶಸ್ತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಡಾ.ಮೈಸೂರು ಮಂಜುನಾಥ್ ಅವರು ದೇವೇಂದ್ರ ಲೋಕ ನಾಚುವ ವೈಭವ ಆಳ್ವಾಸ್ ವಿರಾಸತ್ ಮೂಲಕ ಮೂಡಬಿದಿರೆಯಲ್ಲಿ ನಿರ್ಮಾಣವಾಗಿದೆ. ಸಣ್ಣ ಊರಾಗಿರುವ ಮೂಡಬಿದಿರೆಯನ್ನು ವಿರಾಸತ್ ಮೂಲಕ ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಡಾ.ಎಂ.ಮೋಹನ್ ಆಳ್ವರು ಮಾಡಿದ್ದಾರೆ ಎಂದು ಮಂಜುನಾಥ್ ಅವರು ಶ್ಲಾಘಿಸಿದರು 'ನನ್ನ ಲೋಕದ ಸಮಸ್ತ ಸಂಭ್ರಮ ಮೂಡುಬಿದಿರೆಗೆ ಆಳ್ವರು ತಂದಿದ್ದಾರೆ. ಅವರು ಕೇವಲ ವೈಭವ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ.
ಕಲೆಗೆ ಗೌರವ ಹಾಗೂ ವೈಭವವನ್ನು ತಿಳಿಯಲು ಜಗತ್ತಿಗೆ ಇಂದು ಮೂಡುಬಿದಿರೆ ಮಾಪಕವಾಗಿದೆ. ಇಲ್ಲಿ ಪಾಲ್ಗೊಳ್ಳಲು ಬಯಸಿದ ಕಲಾವಿದರ ಸಂಖ್ಯೆ ಬಹು ದೊಡ್ಡದಿದೆ. ಇಲ್ಲಿ ಇಲ್ಲದಿರುವುದು ಏನು? ಎಂದು ಭಾವುಕರಾದರು.
ಕಲೆಯ ಮೂಲ ಉದ್ದೇಶವೇ ಸೌಂದರ್ಯ ಅರಿತು ಆಸ್ವಾದಿಸುವುದು. ಅದನ್ನು ಆಳ್ವರು ಮಾಡುತ್ತಿದ್ದು, ಇಲ್ಲಿ ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಾರೆ ಎಂದರು.
ಆಳ್ವರು ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆತಮಗೆ ನೀಡಿರುವ ವಿರಾಸತ್ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಗೂ ಮಿಗಿಲು ಎಂದು ವಿನಮ್ರತೆ ವ್ಯಕ್ತ ಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾ ಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲ ಇದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀಗೂ ಮಿಗಿಲಾದುದು ಎಂದು ಬಣ್ಣಿಸಿದರು.
ಅತಿಥಿಗಳನ್ನು ಸ್ವಾಗತಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಆಳ್ವಾಸ್ ವಿರಾಸತ್ ಕೇವಲ ಮನೋರಂಜನಾ ಕಾರ್ಯಕ್ರಮ ಅಲ್ಲ, ದೇಶದ ಕಲೆಯನ್ನು ಗೌರವಿಸುವ ಹಬ್ಬ. ನಾಡಿನಲ್ಲಿ ಕಲೆ ಗೌರವಿಸುವ ಸಂಘಟಕ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗ ಬೇಕು. ಭ್ರಷ್ಟತೆ ಎಲ್ಲಿಯೂ ಸೋಂಕ ಬಾರದು ಎಂದರು.
ಕೃಷಿಕ, ಯೋಧ, ಕಲಾವಿದರನ್ನು ಗೌರವಿಸುವ ಆಳ್ವಾಸ್ ನಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ 7 ಮೇಳಗಳನ್ನು ಈ ಬಾರಿ ಸಂಘಟಿಸಲಾಗಿದೆ ಎಂದರು. ನಮ್ಮ ಮನೆಯ ಶ್ರೇಷ್ಠ ಕಲಾವಿದರನ್ನು ಗೌರವಿಸುತ್ತಿದ್ದೇವೆ ಎಂದು ಧನ್ಯತೆ ವ್ಯಕ್ತಪಡಿಸಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಶಾಸಕ ವೇದವ್ಯಾಸ ಕಾಮತ್, ಮೂಡಬಿದಿರೆಯ ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ.ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.
ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







