ರಾಜ್ಯದಲ್ಲಿ ಪಶು ವೈದ್ಯರ ಕೊರತೆ ನೀಗಿಸಲು ಚಿಂತನೆ : ದಿನೇಶ್ ಗುಂಡೂರಾವ್

ಮಂಗಳೂರು: ರಾಜ್ಯದಲ್ಲಿ ಪಶು ವೈದ್ಯರ ಕೊರತೆ ನೀಗಿಸಲು ಚಿಂತನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತು ವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೊಡಿಯಾಲ್ಬೈಲ್ನ ಜೈಲು ರಸ್ತೆಯಲ್ಲಿ ಮಂಗಳವಾರ ರಾತ್ರಿ ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಂಗಳೂರು ಕಾರ್ಯಾಲಯದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಪಶು ವೈದ್ಯರ ಕೊರತೆ ರಾಜ್ಯದಲ್ಲಿ ಬಹಳಷ್ಟಿದೆ. ಈ ಸಮಸ್ಯೆ ನೀಗಿಸಲು ಸರಕಾರ ಮಟ್ಟದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಕೂಡಾ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲು ಸಲಹೆ ನೀಡಿದ್ದಾರೆ ಎಂದರು.
ಪ್ರಪಂಚದಲ್ಲಿ ಇರುವ ಎಲ್ಲ ಪ್ರಾಣಿಗಳ ಪೈಕಿ ಮನುಷ್ಯರು ಶೇ.34ರಷ್ಟಿದ್ದರೆ, ಹಸು, ಕುರಿ ಇತ್ಯಾದಿ ಜಾನುವಾರುಗಳು ಶೇ.62ರಷ್ಟಿವೆ. ಉಳಿದ ಪ್ರಾಣಿಗಳು ಇರೋದು ಕೇವಲ ಶೇ.4 ಮಾತ್ರ. ಈಗಿನ ಕಾಲಘಟ್ಟದಲ್ಲಿ ಮನುಷ್ಯನು ಎಲ್ಲವನ್ನೂ ಹಿಡಿತಕ್ಕೆ ತೆಗೆದುಕೊಂಡಿರುವುದರಿಂದ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಗುಂಡೂರಾವ್ ಹೇಳಿದರು.
ನೂತನ ಕಟ್ಟಡದ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಅವರು ಸೂಚಿಸಿದರು.
ಖಾಸಗಿ ಪಶುವೈದ್ಯಕೀಯ ಕಾಲೇಜುಗಳ ಪ್ರಾರಂಭ ಅಗತ್ಯ: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಪ್ರಸ್ತುತ ಪಶು ವೈದ್ಯಕೀಯ ಕಾಲೇಜುಗಳ ಕೊರತೆಯಿದೆ. ಹಾಗಾಗಿ ವೈದ್ಯರ ಕೊರತೆಯೂ ಕಾಡುತ್ತಿದೆ. ನಮ್ಮಲ್ಲಿ ಪಶುವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾದವರು ಇಲ್ಲಿ ಉದ್ಯೋಗವನ್ನು ಕೈಗೊಳ್ಳದೆ ವಿದೇಶಕ್ಕೆ ತೆರಳುತ್ತಿದ್ದಾರೆ. ಇದು ಗಂಭೀರ ವಿಚಾರವಾಗಿದೆ.
ವೈದ್ಯರ ಕೊರತೆ ನೀಗಿಸಲು ಖಾಸಗಿ ಪಶುವೈದ್ಯಕೀಯ ಕಾಲೇಜು ತೆರೆಯಲು ಅನುಮತಿ ನೀಡುವ ನಿಟ್ಟಿನಲ್ಲಿ ಸರಕಾರ ಆಲೋಚನೆ ಮಾಡುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಿದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ಚಂದ್ರ ಆಳ್ವ, ಕಾರ್ಪೊರೇಟರ್ ಗಳಾದ ಎ.ಸಿ. ವಿನಯರಾಜ್, ಅನಿಲ್ ಕುಮಾರ್, ಭಾಸ್ಕರ ಮೊಯ್ಲಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಆನಂದ್ ಕೆ, ಮೀನುಗಾರಿಕಾ ಇಲಾಖೆಯ ವಿವಿ ಡೀನ್ ಡಾ.ಆಂಜನಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಆನಂದ್, ಶಿಕ್ಷಣ ತಜ್ಞ ಪ್ರೊ. ರಾಧಾಕೃಷ್ಣ ಉಪಸ್ಥಿತರಿದ್ದರು.
ಕಟ್ಟಡದ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರ ಜಲೀಲ್ ಮತ್ತು ಹಾಗೂ ಕೊರೋನ ಸಂದರ್ಭದಲ್ಲಿ ಪ್ರಾಣಿಗಳಿಗೆ ಆಹಾರ ಒದಗಿಸಿದ್ದ ಜೆ.ಅನೀಲ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ದ.ಕ.ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಆಡಳಿತ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಪ್ರಾಣಿಗಳ ಆರೋಗ್ಯ ನೋಡುವ ಇಲಾಖೆ ಸಚಿವರು ಬಂದಿಲ್ಲ: ಯು.ಟಿ. ಖಾದರ್
ಪಶುಸಂಗೋಪನಾ ಇಲಾಖೆ ಅತ್ಯಂತ ಪ್ರಮುಖ ಇಲಾಖೆಯಾಗಿದೆ. ಆದರೆ ಇಲಾಖೆಯ ಕಟ್ಟಡದ ಶಿಲಾನ್ಯಾಸ ಸಮಾರಂಭಕ್ಕೆ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಗೈರುಹಾಜರಾಗಿದ್ದಾರೆ. ಮನುಷ್ಯರ ಆರೋಗ್ಯ ನೋಡಿಕೊಳ್ಳುವ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಬಂದಿದ್ದಾರೆ ಎಂದು ಸ್ಪೀಕರ್ ಯು.ಟಿ. ಖಾದರ್ ಹಾಸ್ಯ ಚಟಾಕಿ ಹಾರಿಸಿದರು.







