ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ‘ನಿಜದ ಸೂಜಿಮೊನೆ’ ಪುಸ್ತಕ ಪರಿಚಯ ಕಾರ್ಯಕ್ರಮ

ಮಂಗಳೂರು: ದಿಟ್ಟ ಬರವಣಿಗೆಯೇ ಬಹುದೊಡ್ಡ ವಿಷಯವಾಗಿರುವಾಗ, ಇಂದಿನ ದುರಿತ ಕಾಲದಲ್ಲಿ ವಾಸ್ತವವನ್ನು ಧೈರ್ಯದಿಂದ ಬರೆದು ಸಮಾಜದ ಮುಂದೆ ಅಂಕಣ ಬರಹಗಳ ಮೂಲಕ ತೆರೆದಿಟ್ಟಿರುವ ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ಕಾರ್ಯ ಶ್ಲಾಘನೀಯ. ಅಂತಹ ನಿರ್ಭೀತ ಬರಹಗಳನ್ನು ನಿರಂತರ ಪ್ರಕಟಿಸುವ ಎದೆಗಾರಿಕೆಯನ್ನು ವಾರ್ತಾಭಾರತಿ ಪತ್ರಿಕೆ ತೋರಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ, ವಿಷನ್ ಕೊಂಕಣಿ ರುವಾರಿ ಮೈಕಲ್ ಡಿಸೋಝ ಅಭಿಪ್ರಾಯಿಸಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಸೋಮವಾರ ಅಂಕಣಕಾರ ಹಾಗು ತಮ್ಮ ಆಪ್ತಮಿತ್ರ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ‘ನಿಜದ ಸೂಜಿಮೊನೆ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂವಿಧಾನಕ್ಕೆ ವಿರುದ್ಧವಾದ ಶಕ್ತಿಗಳ ಹಲವು ಸವಾಲುಗಳ ನಡುವೆ ಇಂತಹ ಬರವಣಿಗೆ ಇಂದಿನ ಅಗತ್ಯ. ಇಂತಹ ಸತ್ಯ ವನ್ನು ಪ್ರಸ್ತುತ ಪಡಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು. ಆ ನಿಟ್ಟಿನಲ್ಲಿ ವಾರ್ತಾಭಾರತಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇಂದಿನ ದುರಿತ ಕಾಲದಲ್ಲಿ ಎರಡು ದಶಕಗಳಿಂದ ವಾರ್ತಾಭಾರತಿಯಂತಹ ಸತ್ಯ ಪರ, ನಿರ್ಭೀತ ದಿನಪತ್ರಿಕೆಯನ್ನು ನಡೆಸುವುದು ಬಹಳ ಸಾಹಸದ ಕೆಲಸ, ಅದಕ್ಕಾಗಿ ಇಡೀ ವಾರ್ತಾಭಾರತಿ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಮೈಕಲ್ ಡಿಸೋಝ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ವಂ. ಡೆಂಝಿಲ್ ಲೋಬೋ, ನಾಗರಿಕ ಸಮಾಜವಾಗಿ ನಾವು ನಮ್ಮ ಜವಾಬ್ಧಾರಿಯನ್ನು ನಿರ್ವಹಿಸುವಲ್ಲಿ ಯಾವತ್ತೂ ಹಿಂಜರಿಕೆ ತೋರಬಾರದು. ಅದರಲ್ಲಿಯೂ ಮಾಧ್ಯಮ ಸಮಾಜದ ವಾಸ್ತವತೆಯ ಕನ್ನಡಿಯಾಗಿ, ಕಾವಲು ನಾಯಿಗಳಾಗಿ ಕಾರ್ಯ ನಿರ್ವಹಿಸಬೇಕು. ಆಳುವವರಿಗೆ ಸತ್ಯ ಹೇಳುವ ವಿಷಯದಲ್ಲಿ ಮಾಧ್ಯಮಗಳು, ಲೇಖಕರು ಹಾಗು ಓದುಗರು ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರವಿದೆ. ಅಂತಹ ಪಾತ್ರವನ್ನು ವಾರ್ತಾಭಾರತಿ ಹಾಗು ಅದರಲ್ಲಿ ಬರೆಯುವ ಲೇಖಕರು ಮಾಡುತ್ತಿದ್ದಾರೆ ಎಂದರು.
ಕೊಂಕಣಿ ಸಾಹಿತಿ ಮತ್ತು ಸಂಘಟಕ ಹೆನ್ಸಿ ಮೆಂಡೋನ್ಸಾ ಪೆರ್ನಾಳ್ ಪುಸ್ತಕ ಪರಿಚಯ ನೀಡಿ, ಬರಹಗಳಲ್ಲಿ ರೂಪಕ, ಉಪಕತೆಗಳ ಮೂಲಕ ಕಂಜರ್ಪಣೆಯವರು ಓದುಗರಿಗೆ ಆಪ್ತವಾಗಿಸುವ ಕೌಶಲ್ಯವನ್ನು ಹೊಂದಿದ್ದಾರೆ, ಅವರ ಬರಹಗಳು ಭ್ರಮೆಯ ಬಲೂನುಗಳಿಗೆ ಚುಚ್ಚಿದ ನಿಜದ ಸೂಜಿಮೊನೆ ಎಂದರು.
ಕೃತಿಕಾರ ಬಾಲ ಸುಬ್ರಹ್ಮಣ್ಯ ಕಂಜರ್ಪಣೆಯವರು ತಮ್ಮದು ಓದಲೇಬೇಕಾದ ಕೃತಿ ಎಂದು ಯಾವುದೇ ಕಾರಣಕ್ಕೂ ಹೇಳಲಾರೆ. ಆದರೆ ಸಮಾಜದಲ್ಲಿ ನಡೆಯುವ ಬೆಳವಣಿಗೆಗಳನ್ನು ಮೌನವಾಗಿ ಸಹಿಸಲು ಸಾಧ್ಯವಾಗದೆ ಬರಹಗಳ ರೂಪದಲ್ಲಿ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದೇನೆ. ಇದು ತೃಪ್ತಿ ನೀಡಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರು ಬ್ಯುರೋ ಮುಖ್ಯಸ್ಥ ಪುಷ್ಪರಾಜ್ ಬಿ ಎನ್ , ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ ಅವರನ್ನು ಮೈಕಲ್ ಡಿಸೋಝ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಕಾಶನದ ಹಿರಿಯ ನಿರ್ದೇಶಕ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಎಚ್.ಎಂ. ಅಫ್ರೋಝ್ ಅಸಾದಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಹಿಸಿದ್ದರು. ಮೊಹಮ್ಮದ್ ಮುಸ್ಲಿಮ್ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಸುದ್ದಿ ಸಂಪಾದಕ ಬಿ ಎಂ ಬಶೀರ್, ಚಿಂತಕ ಶಿವಸುಂದರ್, ಲೇಖಕ ವಿಲ್ಸನ್ ಕಟೀಲ್, ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಬಿ ಎ ಮೊಹಮ್ಮದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.







