ಸುಹಾಸ್ ಶೆಟ್ಟಿಯ ಕೊಲೆಯಲ್ಲಿ ಪೊಲೀಸರು ನೇರ ಭಾಗಿ: ಶಾಸಕ ಉಮಾನಾಥ ಕೋಟ್ಯಾನ್ ಆರೋಪ
‘ಪೊಲೀಸರ ತನಿಖೆಯಲ್ಲಿ ನನಗೆ ವಿಶ್ವಾಸವಿಲ್ಲ’

ಮಂಗಳೂರು: ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಪೊಲೀಸರು ನಡೆಸುವ ತನಿಖೆಯಲ್ಲಿ ನನಗೆ ವಿಶ್ವಾಸವಿಲ್ಲ. ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮುಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಕೊಲೆಗೆ, ಕೊಲೆಗಡುಕರಿಗೆ ಪೊಲೀಸರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅಪಾದಿಸಿದರು.
ಕೊಲೆ ವ್ಯವಸ್ಥಿತ ರೀತಿಯಲ್ಲಿ ನಡೆದಿದೆ. ಒಂದು ರೀತಿಯಲ್ಲಿ ಕೊಲೆಗಡುಕರು ಮತ್ತು ಪೊಲೀಸರ ನಡುವೆ ಒಡಂಬಡಿಕೆಯಾಗಿದೆ. ವಾಹನದಲ್ಲಿ ಆಯುಧ ಇಡಬಾರದು ಎಂದು ಸುಹಾಸ್ ಶೆಟ್ಟಿ ಆತ್ಮರಕ್ಷಣೆಗೆ ಕಾರಿನಲ್ಲಿಟ್ಟಿದ್ದ ಆಯುಧವನ್ನು ಎರಡು ದಿವಸಗಳ ಮೊದಲು ಪೊಲೀಸರು ತೆರವುಗೊಳಿಸಿದ್ದರು. ಕೊಲೆಯಾದ ದಿನ ಬೆಳಗ್ಗೆ ಸುಹಾಸ್ ಶೆಟ್ಟಿ ತನ್ನ ಕಾರನ್ನು ಸರ್ವಿಸ್ಗೆ ಇಡುವಾಗ ಇಬ್ಬರು ಆರೋಪಿಗಳು ಬಂದು ಆತನ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಸುಹಾಸ್ ಶೆಟ್ಟಿಯನ್ನು ಕೊಲೆಗೈಯಲು 4 ಮಂದಿಗೆ 20-25 ಮಂದಿ ಕೋಟೆ ಕಟ್ಟಿ ರಕ್ಷಣೆ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿಯನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಗಮನ ಹರಿಸಲಿಲ್ಲ ಎಂದು ಹೇಳಿದರು.
ಇಂತಹ ಆಯುಕ್ತರನ್ನು ನಾನು ನನ್ನ ಸರ್ವಿಸ್ನಲ್ಲಿ ನೋಡಿಲ್ಲ: ಪೊಲೀಸ್ ಇಲಾಖೆ ಕೊಲೆಯಲ್ಲಿ ಕೈಜೋಡಿ ಸಿದೆ. ದ.ಕ. ಜಿಲ್ಲೆಗೆ ಒಬ್ಬರು ಪೊಲೀಸ್ ಆಯುಕ್ತರು ಬಂದಿದ್ದಾರೆ. ಇಂತಹ ಆಯುಕ್ತರನ್ನು ನಾನು ನನ್ನ ಸರ್ವಿಸ್ನಲ್ಲಿ ನೋಡಿಲ್ಲ. ಆಯುಕ್ತರಿಂದ ಹಿಡಿದು ಪಿಸಿ ತನಕ ವಹಿವಾಟು ನಡೆಯುತ್ತಿದೆ. ಇಸ್ಪೆಟ್ , ಜುಗಾರಿ, ಅಕ್ರಮ ಮರಳುಗಾರಿಕೆ .. ಹೀಗೆ ಪ್ರತಿಯೊಂದು ವಿಚಾರದಲ್ಲೂ ಡೀಲಿಂಗ್ ನಡೆಯುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಮಧ್ಯಪ್ರವೇಶದಿಂದಾಗಿ ಮರಳುಗಾರಿಕೆ ನಿಂತಿದೆ. ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಕೋಟಿಗಟ್ಟಲೆ ಹಣ ಹರಿದು ಬಂದಿದೆ. ಇದರಲ್ಲಿ ಪೊಲೀಸರಿಗೆ ಎಷ್ಟು ಸಂದಾಯವಾಗಿದೆ ಎಂದು ಗೊತ್ತಿಲ್ಲ. ಪೊಲೀಸರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬೇಕಿದ್ದರೆ ಸ್ಥಳೀಯ ಪೊಲೀಸರ ಮೊಬೈಲ್ನ್ನು ಚೆಕ್ ಮಾಡಿದ್ದರೆ ಗೊತ್ತಾಗುತ್ತಾರೆ ಎಂದು ಹೇಳಿದರು.
ದುಡ್ಡು ಕೊಡದಿದ್ದರೆ ರೌಡಿಶೀಟರ್: ಹಣಕೊಡದಿದ್ದರೆ ಪೊಲೀಸರು ರೌಡಿ ಶೀಟರ್ ಪಟ್ಟ ಕಟ್ಟುತ್ತಾರೆ. ಸುಹಾಸ್ ಶೆಟ್ಟಿ ಮೇಲೂ ಅದೇ ರೀತಿ ಆಗಿದೆ. ದ.ಕ. ಜಿಲ್ಲೆಯಲ್ಲಿ ಹಣ ಇದ್ದರೆ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.
ಹರೀಶ್ ಪೂಂಜಾ ವಿರುದ್ಧ ಹಕ್ಕುಚ್ಯುತಿ ಮಾಡಿ ಮತ್ತೆ ನೋಡುವಾ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಾಧ್ಯವಿದ್ದರೆ ಹಕ್ಯುಚ್ಯುತಿ ಮಾಡಿ ಮತ್ತೆ ನೋಡುವಾ. ... ಸ್ಪೀಕರ್ ಖಾದರ್ ಅವರು ಕೊಲೆ ಆರೋಪಿ ಪರ ಮಾತನಾಡಿದ್ದಾರೆ. ಸ್ಪೀಕರ್ಗೆ ರಾಜಕೀಯ ಮಾಡಲು ಅವಕಾಶ ಇದೆಯೋ ? ರಾಜಕೀಯ ಮಾತನಾಡಲು ಅವಕಾಶ ಇಲ್ಲದಿದ್ದರೆ ಅವರನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಪೊಲೀಸರು ನಡೆಸುವ ತನಿಖೆಯಲ್ಲಿ ನನಗೆ ವಿಶ್ವಾಸವಿಲ್ಲ. ಆದ ಕಾರಣ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ದಿನೇಶ್ ಪುತ್ರನ್, ರಂಜಿತ್, ಅರುಣ್, ವಿಜಯ್, ವಸಂತ ಪೂಜಾರಿ, ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು.