ʼಅಗ್ನಿಪಥʼ ಕಾದಂಬರಿಯು ವಾಸ್ತವದ ಮುಖಾಮುಖಿ: ಹಿರಿಯ ಚಿಂತಕ ಶಿವಸುಂದರ್
ಬಿ.ಎಂ. ಬಶೀರ್ ಅವರ ಕಾದಂಬರಿ ಬಿಡುಗಡೆ ಸಮಾರಂಭ

ಮಂಗಳೂರು : ʼಅಗ್ನಿಪಥʼ ಎಂಬ ಈ ಕಾದಂಬರಿಯು ಭ್ರಮೆಗಳನ್ನು ಕಳಚಿಕೊಂಡು ವಾಸ್ತವಕ್ಕೆ ಮುಖಾಮುಖಿಯಾಗುತ್ತದೆ. ಇದರ ವಸ್ತು ಸಮಕಾಲೀನವೂ ಆಗಿದೆ. ಎಲ್ಲೋ ಆದ ಸಂಗತಿ ಅಲ್ಲ, ಇಲ್ಲೇ ಆದ ಸತ್ಯ ಘಟನೆಯಾಗಿದೆ. ಆದರೂ ಕಥಾ ವಸ್ತು ಸವಾಲಿನ ವಿಷಯವಾಗಿದೆ, ಎಂದು ಹಿರಿಯ ಚಿಂತಕ, ಅಂಕಣಕಾರ ಶಿವಸುಂದರ್ ಹೇಳಿದರು.
ಮೈಸೂರಿನ ಕವಿತಾ ಪ್ರಕಾಶನ ಪ್ರಕಟಿಸಿದ ಹಿರಿಯ ಪತ್ರಕರ್ತ, ಕತೆಗಾರ, ʼವಾರ್ತಾಭಾರತಿʼಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರ ಕಾದಂಬರಿ ’ಅಗ್ನಿಪಥ’ವನ್ನು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕನ್ನಡ ವಿಭಾಗದ ಸಹಯೋಗದಲ್ಲಿ ವಿವಿಯ ಸಹೋದಯ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಯುದ್ಧವು ಕೇವಲ ಸೇನೆಯ ಬದುಕು ಅಲ್ಲ, ಅದು ದೇಶದ ರಾಜಕೀಯ ಪ್ರತಿಫಲನವೂ ಆಗಿದೆ. ಸಮಕಾಲೀನ ಯುದ್ಧಗಳಿಂದ ಸತ್ಯವು ಸಾಯುತ್ತಿದೆ. ಯುದ್ಧಗಳು ಉನ್ಮಾದವನ್ನು ಸೃಷ್ಟಿಸುತ್ತವೆ. ದೊಡ್ಡ ಬೆಲೆಯನ್ನೂ ತೆರುವಂತೆಯೂ ಮಾಡುತ್ತದೆ. ಹಾಗಾಗಿ ಯುದ್ಧಗಳು ಉನ್ಮಾದವಾಗದಿರಲಿ. ಅದು ಅಂತಿಮ ಆಯ್ಕೆಯಾಗಲಿ. ಯುದ್ಧವು ನ್ಯಾಯದ ಬುನಾದಿಯ ಮೇಲೆ ಕಟ್ಟುವಂತಿರಬೇಕು. ಅದನ್ನು ಯಾವತ್ತೂ ಕೂಡ ಪ್ರಥಮ ಆಯ್ಕೆಯಾಗಿ ಮಾಡಬಾರದು ಎಂದು ಶಿವಸುಂದರ್ ಹೇಳಿದರು.
ಕೃತಿಯನ್ನು ಪರಿಚಯಿಸಿದ ಹಿರಿಯ ಲೇಖಕ ವಾಸುದೇವ ಬೆಳ್ಳೆ ಸತ್ಯ ಮತ್ತು ವಾಸ್ತವವನ್ನು ವಿಶ್ಲೇಷಿಸುವ ಎಚ್ಚರಿಕೆಯ ಕಾದಂಬರಿ ಇದಾಗಿದೆ. ಸದ್ಯದ ರಾಜಕೀಯ ಚಿತ್ರಣವು ಬರೆಯುವ ಶೈಲಿ, ವಿಷಯವನ್ನು ಬದಲಿಸುತ್ತಿದೆ. ಬಶೀರ್ ಅವರು ಈ ಕಾದಂಬರಿಯಲ್ಲಿ ಮನಸ್ಸನ್ನು ಹಿಡಿದಿಡುವ ಪಾತ್ರ ಸೃಷ್ಟಿಸಿದ್ದಾರೆ. ಮನುಷ್ಯ ಸಂಬಂಧಗಳನ್ನು ಒಡೆಯುವ ವಿಚಾರಧಾರೆಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಒಂದು ನಿರ್ದಿಷ್ಟ ಸಮುದಾಯದ ಪರ ನಿಲ್ಲದೆ ಸತ್ಯದ ಪರ ನಿಂತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ ಸುಳ್ಳು ಹೇಳುವವರ ಮಧ್ಯೆ ಸತ್ಯ ಹೇಳುವ ಧೈರ್ಯವನ್ನು ಕಾದಂಬರಿಕಾರ ಬಶೀರ್ ಮಾಡಿದ್ದಾರೆ. ಅವರ ಈ ಧೈರ್ಯವನ್ನು ಮೆಚ್ಚಲೇಬೇಕು. ಇದು ಕಾಲ್ಪನಿಕ ಕಾದಂಬರಿಯಲ್ಲ. ವಾಸ್ತವ ಚಿತ್ರಣವಾಗಿದೆ. ಮನುಷ್ಯ ಪ್ರೀತಿಯುಳ್ಳವರಿಗೆ ಮಾತ್ರ ಇದನ್ನು ಬರೆಯಲು ಸಾಧ್ಯ ಎಂದರು.
ಕಾದಂಬರಿಕಾರ ಬಿ.ಎಂ. ಬಶೀರ್ ಅನಿಸಿಕೆ ವ್ಯಕ್ತಪಡಿಸಿದರು. ಮಲ್ಲಿಕಾ ಶೆಟ್ಟಿ ಭಾವಗೀತೆ ಹಾಡಿದರು. ವೇದಿಕೆಯಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ದಿನೇಶ್ ನಾಯಕ್ ಉಪಸ್ಥಿತರಿದ್ದರು. ಕವಿತಾ ಪ್ರಕಾಶನದ ಗಣೇಶ ಅಮೀನಗಡ ಸ್ವಾಗತಿಸಿದರು. ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.













