ಫೇಸ್ಬುಕ್ ಪೋಸ್ಟ್ನಲ್ಲಿ ಪ್ರಧಾನಿ ಅವಹೇಳನ ಆರೋಪ: ಪುತ್ತೂರು ಪುಡಾ ಅಧ್ಯಕ್ಷರಿಂದ ಪ್ರತಿದೂರು

ಪುತ್ತೂರು: ಫೇಸ್ಬುಕ್ ಪೋಸ್ಟ್ನಲ್ಲಿ ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪುತ್ತೂರು ನಗರಯೋಜನಾ ಪ್ರಾಧಿಕಾರ(ಪುಡಾ)ಅಧ್ಯಕ್ಷರ ವಿರುದ್ದ ದೂರು ನೀಡಿದ ಬೆನ್ನಲ್ಲೇ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪ್ರತಿದೂರು ನೀಡಿ ಫೇಸ್ ಬುಕ್ ಪೋಸ್ಟ್ನಲ್ಲಿ ಹಾಕಿರುವ ವಿಚಾರವನ್ನು ತಿರುಚಿ ಬಿಜೆಪಿಯವರು ಪ್ರಧಾನ ಮಂತ್ರಿ ಹಾಗೂ ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರತಿದೂರು ನೀಡಿರುವ ಅಮಳ ರಾಮಚಂದ್ರ ಅವರು ಮೇ. 13ರಂದು ನನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಕೆಲವು ವ್ಯಂಗ್ಯಚಿತ್ರಗಳನ್ನು ತಿರುಚಿರುವುದಾಗಿ ದೂರಿದ್ದಾರೆ. ನನ್ನ ಮತ್ತು ದೇಶದ ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡಿದ ಪುತ್ತೂರು ಬಿ.ಜೆ.ಪಿ. ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಮತ್ತು ಪುತ್ತೂರು ಬಿ.ಜೆ.ಪಿ. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಸಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಜೊತೆಗಿದ್ದರು.





