ಪುತ್ತೂರು| ಬಲವಂತವಾಗಿ ಅಂಗಡಿ ಬಂದ್, ನಿಷೇಧಾಜ್ಞೆ ಉಲ್ಲಂಘನೆ: 30 ಮಂದಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಮೇ 2ರಂದು ನಿಷೇದಾಜ್ಞೆ ಜಾರಿಯಲ್ಲಿದ್ದ ಸಂದರ್ಭ ಪುತ್ತೂರು ಗಾಂಧಿಕಟ್ಟೆಯ ಬಳಿ ಸುಮಾರು 20 ರಿಂದ 30 ಮಂದಿ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿ ಮುಂಗಟ್ಟು ಗಳನ್ನು ಬಲವಂತವಾಗಿ ಮುಚ್ಚಿಸಿದ ಮತ್ತು ನಿಷೇದಾಜ್ಞೆ ಉಲ್ಲಂಘನೆ ಮಾಡಿರುವ ನಿಟ್ಟಿನಲ್ಲಿ 30 ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 1ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಮೇ 2 ರಿಂದ 5ರ ತನಕ ಜಿಲ್ಲಾಧಿಕಾರಿ ನಿಷೇದಾಜ್ಞೆ ಜಾರಿಗೊಳಿದ್ದರು.
ಆದರೆ ಮೇ 2ರಂದು ಪುತ್ತೂರು ಗಾಂಧಿಕಟ್ಟೆ ಜಂಕ್ಷನ್ ಬಳಿಯಲ್ಲಿ ಸುಮಾರು 20 ರಿಂದ 30 ಜನ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವಾಗ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ನಿಷೇದಾಜ್ಞೆ ಜಾರಿಯಲ್ಲಿರುವ ಕುರಿತು ಸೂಚನೆ ನೀಡಿದರೂ ಸೂಚನೆಗಳನ್ನು ಉಲ್ಲಂಘಿಸಿ ದೊಂಬಿ ನಡೆಸುವ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.





