ಎಸ್ಐಆರ್ : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್

ಹರೇಕಳ ಹಾಜಬ್ಬ
ಮಂಗಳೂರು : ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಲ್ಪಟ್ಟಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಎಸ್ಐಆರ್ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.
2002ರ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬರ ಹೆಸರು ಹಾಜಬ್ಬ ಎಂದು ನಮೂದಾಗಿತ್ತು. ಇದೀಗ ಹಾಜಬ್ಬರ ಎಲ್ಲಾ ದಾಖಲೆಗಳಲ್ಲಿ ಅದರಲ್ಲೂ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿಯಲ್ಲಿ ಹರೇಕಳ ಹಾಜಬ್ಬ ಎಂದು ನಮೂದಾಗಿದೆ.
ಎಸ್ಐಆರ್ ಪ್ರಕ್ರಿಯೆಯ ವೇಳೆ ಹೆಸರು ತಾಳೆಯಾಗದ ಕಾರಣ ಸಹಜವಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಾರ್ತಾಭಾರತಿಗೆ ಪ್ರತಿಕ್ರಿಯೆ ನೀಡಿರುವ ಹರೇಕಳ ಹಾಜಬ್ಬ ಇಂದು ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ನನಗೆ ನೋಟಿಸ್ ನೀಡಿ ಸೆ.11ರ ಶುಕ್ರವಾರ ಎಲ್ಲಾ ದಾಖಲೆಯೊಂದಿಗೆ ಗ್ರಾಮ ಪಂಚಾಯತ್ಗೆ ಬರಲು ಸೂಚನೆ ನೀಡಿದ್ದಾರೆ. ಅದರಂತೆ ತಾನು ಅಂದು ಗ್ರಾಮ ಪಂಚಾಯತ್ಗೆ ಹೋಗಿ ದಾಖಲೆಪತ್ರ ಸಲ್ಲಿಸುವೆ. ಆ ಬಳಿಕ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.




