ರಾಜ್ಯ ಕಾಂಗ್ರೆಸ್ ಸರಕಾರ ಸಂಘಿ ಅಜೆಂಡಾ ಜಾರಿಗೊಳಿಸುತ್ತಿದೆ: ಸುನೀಲ್ ಕುಮಾರ್ ಬಜಾಲ್ ಆರೋಪ

ಮಂಗಳೂರು, ನ.21: ರಾಜಕೀಯ ದುರುದ್ದೇಶದಿಂದ ಮುಚ್ಚಿರುವ ನಗರದ ಕುದ್ರೋಳಿಯಲ್ಲಿರುವ ಜಿಲ್ಲೆಯ ಏಕೈಕ ಅಧಿಕೃತ ಕಸಾಯಿಖಾನೆಯ ಬಡ ಮಾಂಸ ವ್ಯಾಪಾರಿಗಳ ಮೇಲೆ ಕೋಕ ಕಾಯ್ದೆ ಹಾಕಿ ರಾಜ್ಯ ಕಾಂಗ್ರೆಸ್ ಸರಕಾರ ಆರೆಸ್ಸೆಸ್ ನೀತಿಯನ್ನು ಪೊಲೀಸರ ಮೂಲಕ ಜಾರಿ ಮಾಡುತ್ತಿದೆ ಎಂದು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಡಿವೈಎಫ್ಐ ಮಂಗಳೂರು ನಗರ ಸಮಿತಿಯ ವತಿಯಿಂದ ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಲು ಒತ್ತಾಯಿಸಿ ಮತ್ತು ಸಂಸ್ಕರಿತ ಆಡು, ಕುರಿ, ದನದ ಮಾಂಸಾಹಾರಿಗಳಿಗೆ ಆಹಾರದ ಹಕ್ಕನ್ನು ನಿರಾಕರಿಸಿದ ಕ್ರಮವನ್ನು ಖಂಡಿಸಿ ಹಾಗೂ ದ.ಕ. ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಕುದ್ರೋಳಿ ಕಸಾಯಿಖಾನೆಯ ಮುಂದೆ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕುದ್ರೋಳಿಯ ಕಸಾಯಿಖಾನೆ ಮುಚ್ಚಿ ನಾಲ್ಕು ವರ್ಷ ಕಳೆದರೂ ಕಸಾಯಿಖಾನೆಯನ್ನು ಮಾಂಸ ನಿರ್ವಹಣೆಗೆ ನೀಡದೆ ಬಡ ಮಾಂಸ ವ್ಯಾಪಾರಿಗಳನ್ನು ಕೋಕ ಕಾಯ್ದೆಯಡಿ ಬಂಧಿಸಿ ಜೈಲಿಗೆ ಅಟ್ಟುತ್ತಿದೆ. ಬಡವರ ಮನೆಗಳನ್ನು ಮುಟ್ಟುಗೊಲು ಹಾಕುತ್ತಿದೆ. ಬಿಜೆಪಿ ಜಾರಿಗೆ ತಂದಿರುವ ಜಾನುವಾರು ಪ್ರತಿಬಂಧಕ ಕಾಯ್ದೆಯಲ್ಲಿರುವ ಕೋಮುವಾದಿ ಅಜೆಂಡಾವನ್ನು ಕಿತ್ತು ಹಾಕದೆ ಮುಂದುವರಿಸುತ್ತಿರುವುದು ಖೇದಕರ ಎಂದು ಸುನೀಲ್ ಕುಮಾರ್ ಬಜಾಲ್ ಟೀಕಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ದ.ಕ.ಜಿಲ್ಲಾಡಳಿತ ಸಂಘ ಪರಿವಾರದ ನಿಯಂತ್ರಣದಲ್ಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲೆಯ ಮಾಂಸಹಾರಿಗಳಿಗೆ ಸಂಸ್ಕರಿತ ಮಾಂಸ ಸರಬರಾಜು ಆಗಬೇಕಾದ ಅಧಿಕೃತ ಕಸಾಯಿಖಾನೆಯನ್ನು ಮುಚ್ಚಿರುವುದು ಕಾನೂನು ಬಾಹಿರವಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕುದ್ರೋಳಿ ಕಸಾಯಿಖಾನೆ ತೆರೆಯದಿದ್ದರೆ ʼನಗರ ಪಾಲಿಕೆ ಚಲೋ ಹೋರಾಟʼ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆಲಿ ಹಸನ್ ಕುದ್ರೋಳಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ನವೀನ್ ಕೊಂಚಾಡಿ, ಮಾಧುರಿ ಬೋಳಾರ, ಮನೋಜ್ ವಾಮಂಜೂರು, ಮನೋಜ್ ಕುಲಾಲ್, ಜಗದೀಶ್ ಬಜಾಲ್, ಬಿ.ಕೆ.ಮಸೂದ್, ಅಜ್ಮಲ್ ಅಹ್ಮದ್, ನೌಶಾದ್ ಬೆಂಗ್ರೆ, ಜಂಶೀರ್, ಮುವಾಝ್, ಅಶ್ರಫ್ ಬಂದರ್, ನೌಫಲ್, ನೌಶಾದ್ ಬಂದರ್, ರಫೀಕ್ ಹರೇಕಳ, ಅಶ್ರಫ್ ಹರೇಕಳ, ಸಾಮಾಜಿಕ ಮುಂದಾಳು ನಝೀರ್ ಕುದ್ರೋಳಿ, ಯಾಸೀರ್ ಬೈಕಂಪಾಡಿ, ಅಸೀಫ್ ಕಸಾಯಿಗಳ್ಳಿ, ಮಾಜಿ ಕಾರ್ಪೊರೇಟರ್ ಅಝಿಝ್ ಕುದ್ರೋಳಿ, ಮುನ್ನ ಕುದ್ರೋಳಿ, ಜನವಾದಿ ಮಹಿಳಾ ಸಂಘದ ನಾಯಕಿಯರಾದ ಯೋಗೀತಾ ಸುವರ್ಣ, ಅಸುಂತ ಡಿಸೋಜ, ಮಾಂಸ ವ್ಯಾಪಾರಸ್ಥರ ಸಂಘದ ಜೆ. ಅಬ್ದುಲ್ ಖಾದರ್ ಕುದ್ರೋಳಿ, ಮುಸ್ತಾಕ್ ಕುದ್ರೋಳಿ, ಎಂ.ಕೆ. ಬಶೀರ್, ಚೈಬಾವು ಬೈಕಂಪಾಡಿ, ಇಸ್ಮಾಯಿಲ್, ಫಾರೂಕ್, ಇಸುಬು ಹೈವೇ ಚೊಕ್ಕಬೆಟ್ಟು ಪಾಲ್ಗೊಂಡಿದ್ದರು.
ತಯ್ಯುಬ್ ಬೆಂಗ್ರೆ ಸ್ವಾಗತಿಸಿದರು. ರಿಝ್ವಾನ್ ಹರೇಕಳ ವಂದಿಸಿದರು.







