ಸುರತ್ಕಲ್ | ಮನೆಗೆ ನುಗ್ಗಿ ನಗ-ನಗದು ಕಳವು ಪ್ರಕರಣ : ಮೂವರು ಆರೋಪಿಗಳ ಬಂಧನ

ಸುರತ್ಕಲ್, ಡಿ.15: ಇಲ್ಲಿನ ಮುಕ್ಕ ಮಿತ್ರಪಟ್ನದ ವೃದ್ಧೆ ಜಲಜಾ ಎಂಬವರ ಮನೆಗೆ ಡಿ.3ರಂದು ನುಗ್ಗಿ ಚಿನ್ನಾಭರಣ, ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಗುಡ್ಡೆಕೊಪ್ಲ ಶ್ರೀ ರಾಮ ಭಜನಾ ಮಂದಿರ ಬಳಿಯ ನಿವಾಸಿ ಶೈನ್ ಎಚ್. ಪುತ್ರನ್ ಯಾನೆ ಶಯನ್ ಯಾನೆ ಶೈನ್ (21), ಬೆಂಗಳೂರು ಎಳಚನಹಳ್ಳಿ, ಕಾಶಿನಗರ 5ನೇ ಕ್ರಾಸ್ ನಿವಾಸಿ ವಿನೋದ್ ಯಾನೆ ಕೋತಿ ಯಾನೆ ವಿನೋದ್ ಕುಮಾರ್ (33), ಬೆಂಗಳೂರು ಉಡಿಪಾಳ್ಯ ಕನಕಪುರ ಮುಖ್ಯ ರಸ್ತೆ ನಿವಾಸಿ ಗಿರೀಶ್ ಯಾನೆ ಸೈಕಲ್ ಗಿರಿ (28) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 4.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್, 3 ಮೊಬೈಲ್ ಫೋನ್ ಹಾಗೂ 3 ಸಾವಿರ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಳಿಕ ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘು ನಾಯ್ಕ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿ, ಕಳವು ಕೃತ್ಯ ನಡೆದಿದ್ದ ಮನೆಯ ಸಮೀಪದ ಎಲ್ಲಾ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಶೈನ್ ಎಚ್. ಪುತ್ರನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ಜೈಸನ್ ಯಾನೆ ಲೆನ್ಸನ್ ಎಂಬಾತನೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದು, ಕಳವುಗೈದ ಚಿನ್ನಾಭರಣವನ್ನು ಬೆಂಗಳೂರಿನ ವಿನೋದ್ ಕುಮಾರ್ಗೆ ಮಾರಾಟ ಮಾಡಿರುವುದಾಗಿ ಬಾಯಿಬಿಟ್ಟಿದ್ದ.
ಇದೇ ಜಾಡು ಹಿಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ನೇರ ಭಾಗಿಯಾಗಿದ್ದ ಇನ್ನೋರ್ವ ಆರೋಪಿ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಆರೋಪಿಗಳ ಪೈಕಿ ಶೈನ್ ಎಚ್. ಪುತ್ರನ್ ಯಾನೆ ಶಯನ್ ಯಾನೆ ಶೈನ್ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆಯ 1 ಪ್ರಕರಣ, ವಿನೋದ್ ಯಾನೆ ಕೋತಿ ಯಾನೆ ವಿನೋದ್ ಕುಮಾರ್ ಮೇಲೆ ಬೆಂಗಳೂರಿನ ಕೆ.ಎಸ್.ಆರ್.ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು, ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, 4 ದರೋಡೆ, 1 ಬೆದರಿಕೆ, 1 ಗಾಂಜಾ ಮಾರಾಟ, 1 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಗಿರೀಶ್ ಯಾನೆ ಸೈಕಲ್ ಗಿರಿ ಎಂಬಾತನ ಮೇಲೆ ಬೆಂಗಳೂರಿನ
ಕಗ್ಗಲಿಪುರ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 5 ಕೊಲೆಯತ್ನ, 1 ದರೋಡೆ, 3 ಹಲ್ಲೆ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







