ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದು ಇಂದಿನ ತುರ್ತು ಅಗತ್ಯ: ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ

ಮಂಗಳೂರು: ನೆರೆಯವರು, ಸಹೋದ್ಯೋಗಿಗಳು ಹಾಗೂ ತಮ್ಮ ಅಧೀನದಲ್ಲಿ ಕೆಲಸ ಮಾಡುವವರನ್ನು ನಿಸ್ವಾರ್ಥ ಭಾವನೆಯಿಂದ ಎಲ್ಲರೂ ಕಾಣಬೇಕು. ಎಲ್ಲಡೆ ಪ್ರೀತಿಯನ್ನು ಹಂಚುವ ಮೂಲಕ ದ್ವೇಷವನ್ನು ದೂರ ಮಾಡಿ, ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೊಸದಿಲ್ಲಿಯ ಮರ್ಕಝಿ ಜಮೀಯತೇ ಅಹ್ಲೆ ಹದೀಸ್ ಹಿಂದ್ ಅಧ್ಯಕ್ಷ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ ಕರೆ ನೀಡಿದ್ದಾರೆ.
ಜಮೀಯತೇ ಅಹ್ಲೆ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಶ್ರಯದಲ್ಲಿ ‘ಕೆಡುಕು ಅಳಿಯಲಿ ಒಳಿತು ಹರಡಲಿ’ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ರವಿವಾರ ನಡೆದ ಎರಡು ದಿನಗಳ ಅಹ್ಲೆ ಹದೀಸ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಸಂದೇಶ ನೀಡಿದರು.
ಪ್ರತಿಯೊಬ್ಬರೊಡನೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುವ ಮೂಲಕ ಸೌಹಾರ್ದತೆಯನ್ನು ವೃದ್ಧಿಸಬೇಕು. ಸಮಾಜದಲ್ಲಿ ಯಾವುದೇ ಕಾರಣಕ್ಕೂ ಸಂಘರ್ಷಗಳು ಉಂಟಾಗದಂತೆ ಗರಿಷ್ಠ ಮಟ್ಟದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಶಾಂತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಈಗಿನ ಜಾಗತಿಕ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬರೂ ಇಸ್ಲಾಮಿನ ಮೂಲ ಬೋಧನೆ ಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾ ಬದುಕುವ ಅವಶ್ಯಕತೆಯಿದೆ ಎಂದು ಅವರು ನುಡಿದರು.
*ಚಾರಿತ್ರಿಕ ಸಮ್ಮೇಳನ: ಜಮೀಯತೇ ಅಹ್ಲೆ ಹದೀಸ್ ಕರ್ನಾಟಕ - ಗೋವಾ ಘಟಕದ ಅಧ್ಯಕ್ಷ ಶೇಖ್ ಅಬ್ದುಲ್ ವಹ್ಹಾಬ್ ಜಾಮಈ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಚಾರಿತ್ರಿಕ ಸಮ್ಮೇಳನವಾಗಿದೆ. ಒಂದು ವೇದಿಕೆಯಲ್ಲಿ ದೇಶದ ಅತ್ಯುನ್ನತ ಉಲಮಾಗಳನ್ನು ಸೇರಿಸಿ ಸಹಸ್ರಾರು ಧಾರ್ಮಿಕ ಪ್ರವಚನದ ವ್ಯವಸ್ಥೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಜಮೀಯತೇ ಅಹ್ಲೆ ಹದೀಸ್ ಕರ್ನಾಟಕ-ಗೋವಾ ದ ಪ್ರಧಾನ ಕಾರ್ಯದರ್ಶಿ ಅಸ್ಲಮ್ ಖಾನ್ ಹಫಿಝಹುಲ್ಲಾಹ್ ಮತ್ತು ಖಜಾಂಚಿ ಕೆ.ಜೆ.ಮನ್ಸೂರ್ ಅಹ್ಮದ್ ಖುರೈಷಿ ಹಫಿಝಹುಲ್ಲಾಹ್ ಮುಖ್ಯ ಅತಿಥಿಯಾಗಿದ್ದರು.
ಸಮ್ಮೇಳನದಲ್ಲಿ ಶೇಖ್ ಅಬ್ದುಲ್ ಅಝೀಮ್ ಮದನಿ, ಶೇಖ್ ಮೆಅರಾಜ್ ರಬ್ಬಾನಿ ಮದನಿ, ಶೇಖ್ ಅಬ್ದುಸ್ಸಲಾಮ್ ಸಲಫಿ, ಶೇಖ್ ಅಬೂ ಉಮರ್ ಪರ್ವೇಝ್ ಮದನಿ, ಶೇಖ್ ಅಬ್ದುಲ್ ಹಸೀಬ್ ಮದನಿ, ಶೇಖ್ ಅಬೂ ರಿಝ್ವಾನ್ ಮುಹಮ್ಮದಿ, ಶೇಖ್ ಅಬೂ ಝೈದ್ ಝಮೀರ್, ಶೇಖ್ ಅಬ್ದುಲ್ ಖದೀರ್ ಉಮ್ರಿ, ಶೇಖ್ ಅಬ್ದುಲ್ ವಾರಿಸ್ ಮದನಿ, ಶೇಖ್ ತ್ವಾರೀಕ್ ಸಫಿಉರ್ರಹ್ಮಾನ್ ಮದನಿ, ಶೇಖ್ ಹುಸೈನ್ ಮದನಿ, ಶೇಖ್ ಝುಬೈರ್ ಮದನಿ, ಶೇಖ್ ಇಝಾಝ್ ಅಹ್ಮದ್ ನದ್ವಿ, ಶೇಖ್ ಶಾ ವಲಿಯುಲ್ಲಾಹ್ ಉಮ್ರಿ, ಶೇಖ್ ಝಿಯಾವುರ್ರಹ್ಮಾನ್ ಸ್ವಲಾಹಿ, ಶೇಖ್ ಶಾಕಿರ್ ಉಳ್ಳಾಲ್, ಶೇಖ್ ಬದೀಉಝ್ಝಮ ಮದನಿ, ಶೇಖ್ ಶಾಕಿರ್ ಮದನಿ, ಶೇಖ್ ಹಬೀಬುರ್ರಹ್ಮಾನ್ ಸಲಫಿ ಮುಂತಾದ ಹಲವಾರು ವಿದ್ವಾಂಸರು ವಿವಿಧ ವಿಷಯಗಳ ಬಗ್ಗೆ ಪ್ರವಚನ ನೀಡಿದರು.
ಹಾಫಿಝ್ ಯಾಸೀನ್ ಕಿರಾಅತ್ ಪಠಿಸಿದರು.ಅಬ್ದುಸ್ಸಲಾಮ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಅಬ್ದುಸ್ಸಲಾಮ್ ಜಾಮಯಿ , ಮಖ್ಸೂದ್ ಅಹ್ಮದ್ ಉಮ್ರಿ , ಮುದಸ್ಸಿರ್ ಉಮ್ರಿ ಕಾರ್ಯಕ್ರಮ ನಿರೂಪಿಸಿದರು.






