ಗೇರು ಬೆಳೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ : ಯು.ಟಿ.ಖಾದರ್

ಮಂಗಳೂರು : ʼಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಗೇರು ಬೆಳೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ʼಗೇರು ಮೇಳʼ ಮಹತ್ವದ ಕಾರ್ಯಕ್ರಮವಾಗಿದೆʼ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಶನಿವಾರ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಗೇರು ಮೇಳದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಗೇರು ಉದ್ಯಮ ಸಾಕಷ್ಟು ಕುಟುಂಬಗಳಿಗೆ ಆಧಾರವಾಗಿತ್ತು. ಬೆಳೆ ಕುಂಠಿತವಾದ ಕಾರಣ ದಕ್ಷಿಣ ಆಫ್ರೀಕಾದಿಂದ ಕಚ್ಚಾ ಗೇರು ಇಲ್ಲಿನ ಕಾರ್ಖಾನೆಗಳಿಗೆ ಆಮದಾಗುತ್ತಿದೆ. ಸಂಸ್ಕರಿತವಾದ ಗೇರು ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗೇರು ಮೇಳವನ್ನು ನಿಗಮದಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮೇ17, 18ರಂದು ʼಗೇರು ಮೇಳʼ :
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ರಾಜ್ಯ ಮಟ್ಟದ ಗೇರು ಮೇಳ ಮತ್ತು ಕಾರ್ಯಾಗಾರ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗ ದಲ್ಲಿ ಮೇ17, 18ರಂದು ನಗರದ ಕದ್ರಿ ಪಾರ್ಕ್ ನಲ್ಲಿ ನಡೆಯಲಿದೆ. ಈ ಮೇಳದಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ರೈತರು ಮನೆಗೆ ಹೋಗುವಾಗ ಹೊಸ ಜ್ಞಾನ, ಸುಧಾರಿತ ತಳಿಯ ಸಸಿಗಳು ಮತ್ತು ಮಾರುಕಟ್ಟೆಯ ಭರವಸೆಯೊಂದಿಗೆ ಹೋಗುವಂತಿರಬೇಕು ಎಂಬ ಉದ್ದೇಶದೊಂದಿಗೆ ಈ ಮೇಳ ಉಚಿತ ಪ್ರವೇಶದೊಂದಿಗೆ ಜನರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಗೇರು ಉತ್ಪಾದನೆಯ ಪ್ರಸ್ತುತ ಸನ್ನಿವೇಶದ ಬಗ್ಗೆ ಕಾರ್ಯಾಗಾರ, ಸಸಿ ವಿತರಣೆ, ಮೌಲ್ಯವರ್ಧನೆ ಕಾರ್ಯಾಗಾರ, ಗೇರು ಹಣ್ಣಿನಿಂದ ರಸ, ಜ್ಯಾಮ್ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ. ಪ್ರಗತಿಪರ ರೈತರಿಗೆ ಸನ್ಮಾನ, ಖರೀದಿದಾರ- ಮಾರಾಟಗಾರರ ಸಮಾವೇಶ ನಡೆಯಲಿದೆ. ಗೇರು ಕೃಷಿಕರು ಹಾಗೂ ಸ್ವಸಹಾಯ ಗುಂಪುಗಳ ಮಳಿಗೆ, ಗೋಡಂಬಿ ಪ್ರದರ್ಶನ ಇರುತ್ತದೆ ಎಂದು ಮಮತಾ ಗಟ್ಟಿ ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕಮಲ ಕರಿಕಾಲನ್ ಮಾತನಾಡುತ್ತಾ, ಮನೆಗೊಂದು ಗೇರು ಗಿಡ ಬೆಳೆಸುವ ಯೋಜನೆ ನಿಗಮ ಹೊಂದಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕಾಲನ್ ಉಪಸ್ಥಿತರಿದ್ದರು.






