ಕದ್ರಿ ಪಾರ್ಕ್ನಲ್ಲಿ ಮಾವು ಹಣ್ಣುಗಳ ವೈವಿಧ್ಯ!
37 ತಳಿಯ ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವು

ಮಂಗಳೂರು, ಮೇ 16: ಮಾವಿನ ಹಣ್ಣಿನ ಈ ಋತುವಿನಲ್ಲಿ ವೈವಿಧ್ಯಮಯ ಹಣ್ಣುಗಳನ್ನು ನೋಡಬೇಕು, ಖರೀದಿಸಬೇಕೆಂದರೆ ಕದ್ರಿ ಪಾರ್ಕ್ಗೊಮ್ಮೆ ಭೇಟಿ ನೀಡಿ. ಇಂದಿನಿಂದ ಮೂರು ದಿನಗಳ ಕಾಲ (ಮೇ 18ರವರೆಗೆ) ನಡೆಯಲಿರುವ ‘ಮಾವು ಮೇಳ’ದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 37 ತಳಿಯ ಮಾವಿನ ಹಣ್ಣುಗಳು ವಿವಿಧ ಗಾತ್ರ, ಬಣ್ಣಗಳಲ್ಲಿ ಇಲ್ಲಿ ಲಭ್ಯವಿದೆ. ವಿಶೇಷವೆಂದರೆ, ರೈತರು ತಮ್ಮ ತೋಟಗಳಲ್ಲಿ ಬೆಳೆದು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಇಲ್ಲಿವೆ.
ವಿದೇಶಿ ತಳಿಯ ಮಾವುಗಳೂ ಲಭ್ಯ
ನ್ಯೂಜಿಲ್ಯಾಂಡ್ ಮೂಲದ ‘ಮಾಯ’, ಥೈಲ್ಯಾಂಡ್ ಮೂಲದ ‘ಬ್ರೂನಿ ಕಿಂಗ್’, ಆಸ್ಟ್ರೇಲಿಯಾ ಮೂಲದ ‘ಲಿಲಿ’ ಮಾವುಗಳ ಜತೆಗೆ ಬಾದಾಮಿ, ಅಲ್ಫಾನ್ಸೋ, ಬಂಗನಪಲ್ಲಿ, ಇಮಾಮ್ ಪಸಂದ್, ತೋತಾಪುರಿ, ರುಮಾನಿ, ಮುಂಡಪ್ಪ, ರಸಪೂರಿ, ಮಲ್ಗೋವಾ, ಹಾಮ್ಲೆಟ್, ಸಿಂಧೂರ, ಹನಿ ಡ್ಯೂ, ಕೇಸರ್, ಕಲಪಾಡಿ, ಕೊಂಕಣ್ ರುಚಿ, ಅಲ್ಫಾನ್ಸೋ, ಮಲ್ಲಿಕಾ, ಮೀಟಾ ಗೋಲಾ, ಸಾಸಿವೆ (ಸಕ್ಕರೆ ಗುಟ್ಲೆ- ಶುಗರ್ ಬೇಬಿ), ನ್ಯೂ ನಲ್ಲಿ ಹೀಗೆ ವೈವಿಧ್ಯಮಯ ಮಾವಿನ ಹಣ್ಣಿನ ಸಂಗ್ರಹ ಇಲ್ಲಿವೆ.
ತೋಟಗಾರಿಕಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ದ.ಕ. ಜಿಲ್ಲಾಡಳಿತ ಆಶ್ರಯದಲ್ಲಿ ನಡೆಯುತ್ತಿರುವ ಮಾವು ಮೇಳ ಮೂರು ದಿನಗಳ ಕಾಲ ನಡೆಯಲಿದೆ.
‘ಉತ್ತರ ಕರ್ನಾಟಕದಲ್ಲಿ ಮಾವು ಬೆಳೆಯುವ ರೈತರನ್ನು ಇಲ್ಲಿಗೆ ಬರಮಾಡಿಸಿಕೊಳ್ಳಲಾಗಿದ್ದು, ಮಿತ ದರದಲ್ಲಿ ಮಂಗಳೂರಿಗರಿಗೆ ವಿವಿಧ ತಳಿಯ ಮಾವಿನ ಹಣ್ಣು ಲಭ್ಯವಾಗುವಂತೆ ಮಾಡಲಾಗಿದೆ. ಅಲ್ಫಾನ್ಸೋ ಮಾವಿನ ಹಣ್ಣಿನ ಮಾರುಕಟ್ಟೆ ದರ 250 ರೂ. ರಾಮನಗರದಿಂದ ಹಣ್ಣು ತಂದಿರುವ ರೈತರು ಅದರ ಬೆಲೆ 200 ರೂ. ನಿಗದಿಪಡಿಸಿದ್ದರು. ಆದರೆ ಮಂಗಳೂರಿನ ಹಣ್ಣು ಪ್ರಿಯರಿಗೆ ನೈಸರ್ಗಿಕವಾಗಿ ಬೆಳೆದು ಹಣ್ಣು ಮಾಡಲಾದ ಮಾವು ಇನ್ನೂ ಕಡಿಮೆ ದರದಲ್ಲಿ ಸಿಗಬೇಕೆಂಬ ನಿಟ್ಟಿನಲ್ಲಿ ರೈತರ ಮನವೊಲಿಸಿ ಈ ಹಣ್ಣಿನ ದರವನ್ನು 180 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇತರ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಡಿ. ತಿಳಿಸಿದರು.
ಮಾವಿನ ಹಣ್ಣಿನ ಜತೆಗೆ ರಾಮನಗರದ ಗಮ್ಲೆಸ್ ಹಾಗೂ ಸ್ಥಳೀಯ ತಳಿಯ ಹಲಸಿನ ಹಣ್ಣು ಮಾರಾಟಕ್ಕಿವೆ. ಜತೆಗೆ ಮಾವು ಹಾಗೂ ಹಲಸು ಗಿಡಗಳನ್ನು ಮಾರಾಟಕ್ಕಿಡಲಾಗಿದೆ.
‘ಮಂಗಳೂರಿನಲ್ಲಿ ಮಾವು ಮತ್ತು ಹಲಸಿನ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ವ್ಯಾಪಾರವೂ ಉತ್ತಮವಾಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳುವರಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಮಾವಿನ ಹಣ್ಣಿನ ಋತುವಿನಲ್ಲಿ 3 ಬಾರಿ ಕಟಾವು ಮಾಡುತ್ತೇವೆ. ಈ ಬಾರಿ ಎರಡನೆ ಅವಧಿಯ ಕಟಾವಿನ ವೇಳೆ ಮಳೆ ಸುರಿ ಕಾರಣ ಸಾಕಷ್ಟು ಹಣ್ಣುಗಳು ಜೋನಿಯಿಂದಾಗಿ ಹಾಳಾಗಿವೆ. ಹಾಗಾಗಿ ದರವೂ ಹೆಚ್ಚಿದೆ’ ಎನ್ನುತ್ತಾರೆ ರಾಮನಗರದ ರೈ ನಂದೀಶ್.
ಅಂದಾಜು 2 ಕೆಜಿ ತೂಗುವ ‘ಬ್ರೂನಿ ಕಿಂಗ್’!
ಥೈಲ್ಯಾಂಡ್ ಮೂಲದ ತಳಿಯಾದ ಬ್ರೂನಿ ಕಿಂಗ್ ಹಣ್ಣೊಂದು ಒಂದೂವರೆ ಕೆಜಿಯಿಂದ 2 ಕೆಜಿಯವರೆಗೂ ತೂಕವಿರುತ್ತದೆ. ಇದರ ರುಚಿಯೂ ಉತ್ತಮವಾಗಿದ್ದು, 15 ದಿನಗಳ ಕಾಲ ಕೆಡದಂತೆ ಇಡಬಹುದಾಗಿದೆ. ಕೆಜಿಗೆ 50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಮೂರು ವರ್ಷದ ಹಿಂದೆ ಕಲ್ಕತ್ತಾದಿಂದ ಬ್ರೂನಿ ಕಿಂಗ್ ಗಿಡಗಳನ್ನು ತಂದು ನೆಟ್ಟಿದ್ದೆ. ಐದು ಗಿಡಗಳಲ್ಲಿ ಈ ಬಾರಿ ಸುಮಾರು 20ರಷ್ಟು ಹಣ್ಣುಗಳು ಬಂದಿವೆ. ನಮ್ಮ ತೋಟದಲ್ಲಿ 12 ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದೇನೆ’ ಎಂದು ರಾಮನಗರದ ಸಿದ್ದರಾಜು ಅಭಿಪ್ರಾಯಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಮಾವು ಮೇಳಕ್ಕೆ ಕದ್ರಿ ಪಾರ್ಕ್ನ ಆವರಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಕಳೆದ ವರ್ಷವೂ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಬಾರಿಯೂ ವಿವಿಧ ತಳಿಯ ಮಾವುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ವಿದೇಶದಲ್ಲಿ ಬೆಳೆಯುವ ಮಾವಿನ ಹಣ್ಣುಗಳನ್ನು ನಮ್ಮ ರೈತರು ಬೆಳೆದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ನೇರವಾಗಿ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಮನಗರ, ಚೆನ್ನಪಟ್ಟಣ, ಕೋಲಾರ, ಕನಕಪುರ, ಮಾಗಡಿ ಮೊದಲಾದ ಜಿಲ್ಲೆಗಳಿಂದ ರೈತರು ಬಂದಿದ್ದು, ಈ ಮೂಲಕ ಸಾವಯವ ಕೃಷಿ ಮಾಡುವ ರೈತರಿಗೂ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಮುಖಂಡರಾದ ಪ್ರವೀಣ್ ಚಂದ್ರ ಆಳ್ವ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.