ಬೆಳ್ತಂಗಡಿ ಶಾಸಕರ ದ್ವೇಷ ಭಾಷಣದ ವೀಡಿಯೊ ವೈರಲ್
ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರಿದ ಹರೀಶ್ ಪೂಂಜಾ

ಬೆಳ್ತಂಗಡಿ: ಸ್ಥಳೀಯ ಶಾಸಕ ಶಾಸಕ ಹರೀಶ್ ಪೂಂಜಾ ಅವರು ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರ್ಮಿಕ ಕಾರ್ಯಕ್ರಮದ ವೇದಿಕೆಯನ್ನು ಊರಿನ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಭಾಷಣಕ್ಕೆ ದುರ್ಬಳಕೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ನಡೆದಿದೆ. ಇದರಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, "ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ" ಎಂದು ಊರಿನ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿಯಾಗಿ ಮಾತನಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"ನೀವು ( ಹಿಂದುಗಳು) ಈ ತೆಕ್ಕಾರಿನಲ್ಲಿ ಇರುವುದು 150 ಮನೆಗಳು. 1,200 ಕುಟುಂಬಗಳಿರುವುದು ಮುಸ್ಲಿಮರದ್ದು. ಇನ್ನು ಒಂದು ಹತ್ತು ವರ್ಷ ಕಳೆದರೆ 1,200 ಇರುವ ಮುಸ್ಲಿಮರ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ. ಬದಲಿಗೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5,000ದಿಂದ 10,000 ಆಗುತ್ತದೆ. ಅವರ ಸಂಖ್ಯೆ ಎಷ್ಟೇ ಆದರೂ ನಾವು ಒಗ್ಗಟ್ಟಿನಿಂದ ಜಾತಿಗಳ ವಿಚಾರ ದೂರ ಇಟ್ಟು ದೇವಸ್ಥಾನವನ್ನು ಬೆಳೆಸಬೇಕಾಗಿದೆ" ಎಂದು ಶಾಸಕರು ಹೇಳಿದ್ದಾರೆ.
ತೆಕ್ಕಾರು ಗ್ರಾಮದ ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿರುವ ಶಾಸಕರು, ಮುಸ್ಲಿಮರ ನಡುವೆ 70ರಿಂದ 74 ಜಾತಿಗಳಿವೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
"ತೆಕ್ಕಾರಿನವರು ದೇವಸ್ಥಾನದ ಕಾರ್ಯಕ್ರಮದ ಆಮಂತ್ರಣವನ್ನು ಮುಸ್ಲಿಮರ ಮಸೀದಿಗಳಿಗೆ ಕೊಟ್ಟದ್ದು ಯಾಕೆ ? ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನೀವು ಆಮಂತ್ರಣ ಕೊಟ್ಟದ್ದರಿಂದಲೇ ಇದೀಗ ಅವರ ಟ್ಯೂಬ್ ಲೈಟ್ ಒಡೆದಿದ್ದಾರೆ" ಎಂದು ಹರೀಶ್ ಪೂಂಜಾ ಆರೋಪಿಸಿದ್ದಾರೆ.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಮುಸ್ಲಿಮರಿಗೂ ಆಮಂತ್ರಣ ನೀಡಲಾಗಿತ್ತು. ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಿ ಮುಸ್ಲಿಮರು ಬ್ಯಾನರ್ ಗಳನ್ನೂ ಹಾಕಿದ್ದರು. ಈ ರೀತಿ ಸೌಹಾರ್ದವಾಗಿ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರು ದ್ವೇಷ ಭಾಷಣ ಮಾಡಿರುವುದಕ್ಕೆ ಸಾರ್ಜಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.
ಅತ್ಯಂತ ಸೂಕ್ಷ್ಮವಾದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ದ್ವೇಷ ಭಾಷಣ ಮಾಡುವ ಮೂಲಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.







