ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ತನಿಖೆಗೆ ತೆರಳಿದ್ದ ವೇಳೆ ಹಠಾತ್ತನೆ ಬಂದ ರೈಲು; ನಾಲ್ವರು ಮುಲ್ಕಿ ಪೊಲೀಸರು ಪವಾಡ ಸದೃಶ ಪಾರು!

ಸಾಂದರ್ಭಿಕ ಚಿತ್ರ - PTI
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಕುಬೇವೂರು ರೈಲ್ವೇ ಮೇಲ್ಸೇತುವೆಯ ಕೆಳಗಡೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ತನಿಖೆಗೆ ಹೋದ ಮುಲ್ಕಿ ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ರೈಲು ಬರುವ ವೇಳೆ ಬದಿಗೆ ಹಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿರುವ ಘಟನೆ ವರದಿಯಾಗಿದೆ.
ಮುಲ್ಕಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಕುಮಾರ್ ಎಂಬವರ ಪುತ್ರನಾದ ಮೂಲತಃ ತಮಿಳುನಾಡು ನಿವಾಸಿ ವಿಘ್ನೇಶ್ (26) ಎಂಬವರು ರವಿವಾರ ರಾತ್ರಿ 8:30 ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಘ್ನೇಶ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಸುರತ್ಕಲ್ ಎನ್ ಐ ಟಿ ಕೆ ಯಲ್ಲಿ ತರಬೇತಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕೆಲಸ ಇಲ್ಲದೆ ಇರುವ ಚಿಂತೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಈ ನಡುವೆ ಯುವಕನ ಆತ್ಮಹತ್ಯೆಯ ತೀವ್ರ ಇಕ್ಕಟ್ಟಾಗಿರುವ ಕುಬೆವೂರು ರೈಲ್ವೆ ಮೇಲ್ಸೇತುವೆ ಕೆಳಗಡೆ ನಡೆದಿದ್ದು, ತನಿಖೆಗೆ ಹೋದ ನಾಲ್ವರು ಮುಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎ ಎಸ್ ಐ ಸಂಜೀವ, ಚಂದ್ರಶೇಖರ್,ಶಂಕರ್ ಬಸವರಾಜ್ ರವರು ತನಿಖೆ ನಡೆಸುತ್ತಿರುವ ಸಂದರ್ಭ ಹಠಾತ್ತನೆ ರೈಲು ಬಂದಿದ್ದು ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಬದಿಗೆ ಹಾರಿ ತಪ್ಪಿಸಿಕೊಂಡು ಪವಾಡ ಸದೃಶರಾಗಿ ಪಾರಾಗಿದ್ದಾರೆ.





