ಮಂಗಳೂರು ವಿವಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪರಿಸರ ವಿಜ್ಞಾನ ಕಾರ್ಯಕ್ರಮ ಮತ್ತು 'ಬಯೋನೆಕ್ಸಸ್' ವತಿಯಿಂದ, ಲೋಬೋ ಫೌಂಡೇಶನ್ ಸಹಭಾಗಿತ್ವದೊಂದಿಗೆ 2026ರ ವಿಶ್ವ ಪರಿಸರ ದಿನಾಚರಣೆಯು ಡಾ.ಯು.ಆರ್.ರಾವ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಿಶ್ರಾಂತ ಡೀನ್ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್. ಎಂ.ಶಿವಪ್ರಕಾಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಜೀವವೈವಿಧ್ಯತೆ ಮತ್ತು ಸುಸ್ಥಿರ ಬದುಕಿನ ಮಹತ್ವವನ್ನು ಒತ್ತಿ ಹೇಳಿದರು. ಮಾನವಕುಲದ ಉಗಮಕ್ಕಿಂತ ಮುಂಚೆಯೇ ಭೂಮಿಯು ಜೀವವೈವಿಧ್ಯತೆ ಮತ್ತು ಪರಿಸರ ಸಮತೋಲನದಿಂದ ಶ್ರೀಮಂತವಾಗಿತ್ತು. ಆದರೆ, ಸ್ವಾರ್ಥ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿಪರೀತ ಶೋಷಣೆಯಿಂದಾಗಿ ಮಾನವನ ಚಟುವಟಿಕೆಗಳು ಪರಿಸರಕ್ಕೆ ಅಪಾರ ಹಾನಿಯನ್ನುಂಟುಮಾಡಿವೆ ಎಂದು ಅವರು ವಿಷಾದಿಸಿದರು
ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ.ಎನ್.ಸಿ.ತಾರಾವತಿ ಅವರು ವಿಶ್ವ ಪರಿಸರ ದಿನದ ಮಹತ್ವ ಹಾಗೂ ಪರಿಸರ ಜಾಗೃತಿ ಮತ್ತು ಕ್ರಿಯೆಯ ಅಗತ್ಯತೆಯ ಬಗ್ಗೆ ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ಡಾ.ಪ್ರಶಾಂತ ನಾಯ್ಕ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರದ ಕುರಿತು ಸಭಿಕರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಚಂದ್ರ ಎಂ., ಪ್ರೊ.ರಾಜು ಕೃಷ್ಣ ಚಲನ್ನವರ್, ಡಾ.ನರಸಿಂಹಯ್ಯ ಎನ್., ಪ್ರೊ.ಎಮ್.ಎಸ್. ಮುಸ್ತಾಕ್ ಮತ್ತು ಯಮುನಾ ಅವರು ಉಪಸ್ಥಿತರಿದ್ದರು.
ಬಯೋನೆಕ್ಸಸ್ ವಿದ್ಯಾರ್ಥಿ ಸಂಯೋಜಕಿ ದಕ್ಷ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಅನುಷಾ ಪ್ರಭು ಅವರು ನಿರೂಪಿಸಿದರು.






