ದಾವಣಗೆರೆ | ತಾಯಿಯೊಂದಿಗೆ ಹೊಲಕ್ಕೆ ತೆರಳಿದ್ದ ವೇಳೆ ಹಾವು ಕಡಿತ; ಬಾಲಕಿ ಮೃತ್ಯು

ವರ್ಷ(13)
ಜಗಳೂರು : ತಾಯಿ ಜೊತೆಗೆ ಜಮೀನಿಗೆ ತೆರಳಿದ ಬಾಲಕಿಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ದಾವಣಗರೆ ಜಿಲ್ಲೆಯ ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ರವಿವಾರ ನಡೆದಿದೆ.
ಗ್ರಾಮದ ಮಲಿಯಪ್ಪ ಮತ್ತು ಮಮತಾ ದಂಪತಿಯ ಪುತ್ರಿ ವರ್ಷ(13) ಹಾವು ಕಚ್ಚಿ ಮೃತಪಟ್ಟ ಬಾಲಕಿ. ರವಿವಾರ ಬೆಳಗ್ಗೆ ಬಾಲಕಿ ತಾಯಿಯೊಂದಿಗೆ ಹೊಲಕ್ಕೆ ತೆರಳಿದ್ದಳು. ಹೊಲದಲ್ಲಿ ಬಾಲಕಿಗೆ ನಾಗರಹಾವು ಕಚ್ಚಿದೆ. ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಸೊಕ್ಕೆ ಸರಕಾರಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿ. ರವಿವಾರ ರಜೆ ಆಗಿದ್ದರಿಂದ ವೈದ್ಯರು ಇರಲಿಲ್ಲ. ನರ್ಸ್ವೊಬ್ಬರು ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಜಗಳೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿ ವರ್ಷ ದಾವಣಗೆರೆಯ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಶನಿವಾರ ಮತ್ತು ರವಿವಾರ ಶಾಲೆಗೆ ರಜೆ ಇದ್ದಿದ್ದರಿಂದ ಸ್ವಗ್ರಾಮಕ್ಕೆ ಮರಳಿದ್ದಳು. ಸೋಮವಾರ ಬೆಳಗ್ಗೆ ದಾವಣಗೆರೆಗೆ ಹೋಗಬೇಕು ಎನ್ನುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.