ಎಲ್ಲ ಕ್ಷೇತ್ರಗಳಿಗೂ ಆವರಿಸಿದ ಮನಸ್ಸಿನ ಅಸ್ಪೃಶ್ಯತೆ : ದಿನೇಶ್ ಅಮಿನ್ ಮಟ್ಟು
‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ

ದಾವಣಗೆರೆ: ಮನಸ್ಸಿನ ಅಸ್ಪೃಶ್ಯತೆ ಎಲ್ಲ ಕ್ಷೇತ್ರಗಳಲ್ಲಿ ಆವರಿಸಿದ್ದು, ಇದರಿಂದ ಹೆಚ್ಚು ಬಳಲುತ್ತಿರುವವರು ಮಹಿಳೆಯರು ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬೀ ಕಲ್ಚರ್ ಪ್ರಕಾಶನ-ಬೆಂಗಳೂರು ವತಿಯಿಂದ ಡಾ.ಬಿ.ಎಂ.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ನೇತ್ರ ತಜ್ಞ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರ ಬದುಕಿನ ಕುರಿತು ಲೇಖಕಿ ಬಿ.ಟಿ.ಜಾಹ್ನವಿ ಅವರ ಸಂಪಾದಿತ ಕೃತಿ ‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎರಡು ರೀತಿಯ ಅಸ್ಪೃಶ್ಯತೆ ಇದೆ. ಒಂದು ಮುಟ್ಟುವುದು, ಇನ್ನೊಂದು ಮುಟ್ಟದೇ ಇರುವುದು. ಈಗ ಊಟ, ತಿಂಡಿ ಸೇವನೆಯಲ್ಲಿ ಯಾವುದೇ ಜಾತಿ ಲೆಕ್ಕಿಸದೆ ಎಲ್ಲರೂ ಒಬ್ಬರನ್ನೊಬ್ಬರು ಬೆರೆಯುವುದನ್ನು ಕಾಣಬಹುದು. ಆದರೆ, ಮನಸ್ಸಿನ ಒಳಗಡೆ ಇರುವ ಅಸ್ಪೃಶ್ಯತೆ ಹೆಚ್ಚಾಗಿದೆ. ಅಂದರೆ ಮಾನಸಿಕವಾಗಿ ಅವರನ್ನು ಸೀಮಿತಗೊಳಿಸುವುದು. ಇದು ಎಲ್ಲ ಕ್ಷೇತ್ರದಲ್ಲಿಯೂ ವ್ಯಾಪಿಸಿದ್ದು, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಇದಕ್ಕೆ ತುತ್ತಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಶಾಸಕ, ನೇತ್ರತಜ್ಞ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರು ಸಹ ಅಂಬೇಡ್ಕರ್ ಮಾದರಿಯಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ದೌರ್ಜನ್ಯ, ನಿರ್ಲಕ್ಷ್ಯ, ಅವಮಾನವನ್ನು ಸಹಿಸಿ ಸಾಧಿಸುವುದು ಬಹಳ ಕಷ್ಟ. ಹಾಗಿದ್ದರೂ ಅವರು ಭಿನ್ನವಾಗಿ ನಿಂತು ಸಾಧನೆ ಮಾಡಿ ತೋರಿಸಿದರು. ತಿಪ್ಪೇಸ್ವಾಮಿ ಅವರಲ್ಲಿ ವೃತ್ತಿ ಧರ್ಮ ಇತ್ತು ಎಂದು ಪ್ರಶಂಸಿಸಿದರು.
ದಲಿತರನ್ನು ಸಮಾಜದ ಮುನ್ನೆಲೆಗೆ ತರಲು ಎರಡೇ ದಾರಿಗಳಿವೆ. ಒಂದು ಸಂಧಾನ, ಇನ್ನೊಂದು ಸಂಘರ್ಷ. ಆದರೆ, ಬಹಳಷ್ಟು ಮಂದಿ ದಲಿತರಿಗೆ ಸಮಾನ ಅವಕಾಶ ಕಲ್ಪಿಸಲು ಸಂಘರ್ಷವನ್ನು ಆಯ್ಕೆ ಮಾಡಿಕೊಂಡರೆ, ತಿಪ್ಪೇಸ್ವಾಮಿ ಅವರು ಸಂಧಾನವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದರು.
ಪತ್ರಕರ್ತೆ ಪ್ರೀತಿ ನಾಗರಾಜ್ ಮಾತನಾಡಿ, ಒಬ್ಬ ಮಗಳು ತಂದೆಗೆ ಕೊಡುವ ಗಿಫ್ಟ್ ಎಂದರೆ ಅವರನ್ನು ಸದಾ ಸ್ಮರಣೆಯಲ್ಲಿಡುವುದು. ಅದನ್ನು ಜಾಹ್ನವಿ ಮಾಡಿದ್ದಾರೆ. ಭ್ರಷ್ಟತೆಗಾಗಿ, ಹಣಕ್ಕಾಗಿ ಎಂದೂ ಕೈಚಾಚದ ಅವರ ತಂದೆ ತಿಪ್ಪೇಸ್ವಾಮಿ ಅವರನ್ನು ಪುಸ್ತಕದ ಮೂಲಕ ಜೀವಂತವಿಟ್ಟಿರುವುದು ಶ್ಲಾಘನೀಯ ಎಂದರು.
ನೇತ್ರ ತಜ್ಞ ಹಾಗೂ ಸಿದ್ಧ ಕೃಷಿ ಪ್ರಚಾರಕ ಡಾ.ಆರ್.ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಟಿ. ಜಾಹ್ನವಿ ಪ್ರಾಸ್ತಾವಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ಲೇಖಕರು ಮತ್ತು ಸಾಮಾಜಿಕ ಹೋರಾಟಗಾರಾದ ವಿ.ಎಲ್. ನರಸಿಂಹಮೂರ್ತಿ, ಎಸ್. ವಿಷ್ಣುಕುಮಾರ್ ಉಪಸ್ಥಿತರಿದ್ದರು.
ದಲಿತರಿಗೆ ಸಮಾನ ಮೀಸಲಾತಿ ಸಿಕ್ಕಿಲ್ಲ :
ತಿಪ್ಪೇಸ್ವಾಮಿ ಅವರು ಮೀಸಲಾತಿಗೆ ಮಿತಿಯಿರಬೇಕು, ಒಂದು ತಲೆಮಾರಿನ ನಂತರ ಮುಂದುವರಿಸಬಾರದು ಎಂದು ಹೇಳಿ ಅವರು ವಿವಾದ ಮಾಡಿಕೊಂಡಿದ್ದರು. ಈ ವಿಚಾರವಾಗಿ ನನಗೂ ವಿರೋಧವಿದೆ. ಏಕೆಂದರೆ ಶಿಕ್ಷಣ ಮತ್ತು ರಾಜಕೀಯದಲ್ಲಿ ಇಂದಿನವರೆಗೂ ದಲಿತರಿಗೆ ಸಮಾನ ಮೀಸಲಾತಿ ಸಿಕ್ಕಿಲ್ಲ ಎಂದು ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.