ಮುಸ್ಲಿಮರಿಗೆ ಟಿಕೆಟ್ ನೀಡದೆ ಅನ್ಯಾಯ ಆರೋಪ; ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಸಮುದಾಯದವರು ರವಿವಾರ ಇಲ್ಲಿನ ಅಖ್ತರ್ ರಝಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಎಸ್,ಮಲ್ಲಿಕಾರ್ಜುನ, ಅಹಿಂದ ವಿರೋಧಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಸರಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಹಿಂದುಳಿದ ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದ ರಾಜ್ಯ ಸರಕಾರ ಹಿಂದುಳಿದ ಸಮುದಾಯದ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಖ್ತರ್ ರಝಾ ವೃತ್ತದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ 2 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಸ್ಥಳದಲ್ಲಿ ಭದ್ರತೆ ಕೈಗೊಂಡರು.
ಬಿಜೆಪಿಗೆ ಮತ ಹಾಕ್ತೀವಿ: ‘ಈ ಬಾರಿ ಬಿಜೆಪಿಗಾದರೂ ಮತ ಹಾಕುತ್ತೇವೆ. ಆದರೆ, ಕಾಂಗ್ರೆಸ್ ಗೆ ಮತ ನೀಡಲ್ಲ. ಚುನಾವಣೆ ದಿನದಂದು ಟೀ, ನೀರು ಕೊಟ್ಟು ಬಿಜೆಪಿ ಪರ ಮತ ಹಾಕುವಂತೆ ಕೇಳುತ್ತೇವೆ. ಒಟ್ಟಿನಲ್ಲಿ ಕಾಂಗ್ರೆಸ್ನ್ನು ಸೋಲಿಸುವುದು ನಮ್ಮ ಉದ್ದೇಶ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಸಿಗುವ ವಿಶ್ವಾಸವಿತ್ತು. ಆದರೆ, ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದೆ ವಿಶ್ವಾಸ ದ್ರೋಹ ಮಾಡಿದೆ. ಕಳೆದ 2 ತಿಂಗಳುಗಳಿಂದ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವಂತೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ, ಕಾಂಗ್ರೆಸ್ ನೀಡದೆ ನಮಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.







