ಆಡಿಯೊ ವೈರಲ್ ಪ್ರಕರಣ | ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ : ಸಮರ್ಥ್ ಶಾಮನೂರು

ದಾವಣಗೆರೆ : ಝಮೀರ್ ಅಹ್ಮದ್ ಖಾನ್ ಹಾಗೂ ಮುಖಂಡ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ವೈರಲ್ ಆಗಿರುವ ಆಡಿಯೊ ಕ್ಲಿಪ್ನ ಸತ್ಯಾಸತ್ಯತೆಯನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ ಎಂದು ಶಾಸಕ ಸಮರ್ಥ್ ಶಾಮನೂರು ಮನವಿ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಆಡಿಯೊದಲ್ಲಿನ ಧ್ವನಿ ಯಾರದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ನೆರವು ಪಡೆದು ವಾಯ್ಸ್ ವೆರಿಫಿಕೇಶನ್ (ಧ್ವನಿ ಪರೀಕ್ಷೆ) ನಡೆಸಿ ಸತ್ಯವನ್ನು ಹೊರತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ: ಷಡ್ಯಂತ್ರಗಳಿಂದ ಸದಾ ಕಾಲ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ನಾವು ಬಸವಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಲೆಗಳ ಕೊಠಡಿಗಳ ಉದ್ಘಾಟನೆ, ಎಲ್ಕೆಜಿ-ಯುಕೆಜಿ ತರಗತಿಗಳ ಆರಂಭದಂತಹ ಜನಪರ ಕೆಲಸಗಳನ್ನು ಮಾಡಿದ್ದೇವೆ. ಗ್ರಾಮೀಣ ಭಾಗದ ಜನ ನಮ್ಮ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಮತ ನೀಡುತ್ತಾರೆಯೇ ಹೊರತು, ಇಂತಹ ಕುತಂತ್ರಗಳಿಗೆ ಮಣಿಯುವುದಿಲ್ಲ ಎಂದು ಸಮರ್ಥ್ ಹೇಳಿದರು.
‘ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು’
ಸದ್ಯಕ್ಕೆ ವೈರಲ್ ಆಗಿರುವ ಆಡಿಯೊ ವಿಚಾರವನ್ನು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದೇವೆ. ತನಿಖೆ ನಡೆಸಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಮರ್ಥ್ ಶಾಮನೂರು ಆಗ್ರಹಿಸಿದರು.






