ಪತ್ತುಮುಡಿ ಸೂರ್ಯನಾರಾಯಣ ರಾವ್

ಮಂಗಳೂರು, ಅ.10: ನಗರದ ಜನತಾ ಡಿಲಕ್ಸ್ ಹೊಟೇಲ್ ಮಾಲಕ, ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ (72) ಶುಕ್ರವಾರ ನಿಧನರಾದರು. ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.
ಸಣ್ಣ ವಯಸ್ಸಿನಲ್ಲೇ ಪಾಕ ವಿದ್ಯೆಯಲ್ಲಿ ಪ್ರಾವಿಣ್ಯತೆ ಪಡೆದ ಸೂರ್ಯನಾರಾಯಣ ರಾವ್ ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಅಡುಗೆ ಸಹಾಯಕರಾಗಿ, ಸಣ್ಣ ಅಂಗಡಿ ವ್ಯವಹಾರ ನಡೆಸಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ನಂತರ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಯಶಸ್ಸು ಕಂಡರು.
ಆರಂಭದಲ್ಲಿ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಜನತಾ ಡಿಲಕ್ಸ್ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಅವರು ಬಳಿಕ ತನ್ನ ಉದ್ಯಮವನ್ನು ವಿಸ್ತರಿಸಿದರು. ಬಳ್ಳಾಲ್ಬಾಗ್ ಸಮೀಪ ಪತ್ತುಮುಡಿ ಸೌಧ ಎಂಬ ಸಮುಚ್ಚಯ ನಿರ್ಮಿಸಿ ಅಲ್ಲಿಯೂ ಹೋಟೆಲ್ ಉದ್ಯಮ ಹಾಗೂ ಕ್ಯಾಟರಿಂಗ್ ವ್ಯವಹಾರ ಆರಂಭಿಸಿದರು. ಉದ್ಯಮದೊಂದಿಗೆ ಧಾರ್ಮಿಕ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ರಾಜ್ಯ ಹೊಟೇಲ್ ಮಾಲಕರ ಸಂಘದ ಆತಿಥ್ಯ ರತ್ನ ಪುರಸ್ಕಾರ, ಸಾಹಿತ್ಯ ಸಮ್ಮೇಳನದಲ್ಲಿ ಅತ್ಯುತ್ಯಮ ಹೊಟೇಲ್ ಮತ್ತು ಕ್ಯಾಟರರ್ಸ್ ಪುರಸ್ಕಾರ ಪಡೆದಿದ್ದಾರೆ. ಲಯನ್ಸ್ ಸೇವಾ ಸಂಸ್ಥೆ ಮಂಚಿ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಹೊಟೇಲ್ ಮಾಲಕರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದರು.





