ಹಜ್ ಗೆ ತೆರಳಿದ್ದ ಹಳೆಯಂಗಡಿ ಮೂಲದ ವ್ಯಕ್ತಿ ನಿಧನ

ಮುಲ್ಕಿ: ಹಜ್ ನಿರ್ವಹಿಸಲು ಮಕ್ಕಾಗೆ ತೆರಳಿದ್ದ ಹಳೆಯಂಗಡಿ ಮೂಲದ ಹಜ್ ಯಾತ್ರಿಕರೊಬ್ಬರು ನಿಧನರಾದ ಘಟನೆ ಶುಕ್ರವಾರ ಮಧ್ಯಾಹ್ನ ಮಕ್ಕಾದ ಮಿನಾದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೂಲತಃ ಹಳೆಯಂಗಡಿ ಬೊಳ್ಳೂರು, ಪ್ರಸ್ತುತ ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ಬೊಳ್ಳೂರು ಕುದ್ರೆಮಾರ್ ಮುಹಮ್ಮದ್ ( 70) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಇವರು ಕರ್ನಾಟಕ ರಾಜ್ಯ ಹಜ್ ಕಮಿಟಿಯ ಮೂಲಕ ಮೇ 13ರಂದು ಬೆಂಗಳೂರಿನಿಂದ ಹಜ್ ಯಾತ್ರೆ ಕೈಗೊಂಡಿದ್ದರು. ಇವರೊಂದಿಗೆ ಪತ್ನಿ ಝೊಹರಾ ಮುಹಮ್ಮದ್, ಪತ್ನಿಯ ತಂಗಿ ಜೈನಾಬ್ ಆಕೆಯ ಪತಿ ಫಕ್ರುದ್ದೀನ್ ಹಜ್ ಯಾತ್ರೆಗೆ ತೆರಳಿದ್ದರು.
ಹಜ್ ಕರ್ಮಗಳನ್ನು ಮುಗಿಸಿ ಮಿನಾದ ಟೆಂಟ್ ನಲ್ಲಿದ್ದ ವೇಳೆ ಗುರುವಾರ ರಾತ್ರಿ ಅಲ್ಪ ಪ್ತಮಾಣದ ಜ್ವರ ಮತ್ತು ಹೊಟ್ಟೆ ನೋವು ಕಾಣಿಸಿ ಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಿನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಮಧ್ಯಾಹ್ನ 2:30ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಮೃತರು ಐವರು ಪುತ್ರಿಯರು, ಮೂವರು ಪುತ್ರರು ಸೇರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮಕ್ಕಾದಲ್ಲೇ ದಫನ:
ಹಜ್ ಸಮಯದಲ್ಲಿ ಹಜ್ ಯಾತ್ರಿಕರು ಮರಣ ಹೊಂದಿದರೆ ಕೆಲವೇ ಗಂಟೆಗಳಲ್ಲಿ ದಫನ ಕಾರ್ಯ ನಡೆಸಬೇಕೆನ್ನುವುದು ಸೌದಿ ಸರಕಾರದ ನಿಯಮ. ಅದರಂತೆ ಶುಕ್ರವಾರ ರಾತ್ರಿಯೇ ಹರಮ್ ಮಸೀದಿಯಲ್ಲಿ ಜನಾಝ ನಮಾಝ್ ಮುಗಿಸಿ ಮಕ್ಕಾ ಮಸೀದಿಯ ವಠಾರದಲ್ಲಿ ಧಫನ ಕಾರ್ಯ ನಡೆದಿದೆ ಎಂದು ಅವರ ಅಳಿಯ ಅಸೀಶ್ ಬೊಳ್ಳೂರು ವಾರ್ತಾಭಾರತಿಗೆ ಮಾಹಿತಿ ನೀಡಿದಾರೆ.






