ಪ್ರೊ.ಜಿ.ಆರ್.ರೈ ನಿಧನ

ಉಡುಪಿ, ಜು.3: ಕರಾವಳಿಯ ಶ್ರೇಷ್ಠ ವಾಸ್ತುತಜ್ಞರಾದ ಪ್ರೊ.ಜಿ. ರಘುನಾಥ್ ರೈ (97) ಅವರು ಬುಧವಾರ ಮಂಗಳೂರಿನ ಪುತ್ರನ ಮನೆಯಲ್ಲಿ ನಿಧನರಾದರು. ಪ್ರೊ.ರೈ ಅವರು ಇಬ್ಬರು ಪುತ್ರರು ಹಾಗೂ ಅಪಾರ ಶಿಷ್ಯ ಸಮುದಾಯವನ್ನು ಅಗಲಿದ್ದಾರೆ.
ಕರಾವಳಿಯ ಖ್ಯಾತ ಸಿವಿಲ್ ಇಂಜಿನಿಯರ್ ಆಗಿದ್ದ ಇವರು ಮಣಿಪಾಲದ ಎಂ.ಐ.ಟಿ.ಯಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿ ಸಿದ್ದರು. ಮೂಡುಬಿದ್ರೆಯ ಮೈಟ್ ಇಂಜಿನಿಯರಿಂಗ್ ಕಾಲೇಜಿನ ಮಾರ್ಗದರ್ಶಕ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಸಾಹಿತ್ಯಾಸಕ್ತರಾಗಿದ್ದ ಪ್ರೊ.ರೈ, ಮಣಿಪಾಲದಲ್ಲಿ ಸಾಹಿತ್ಯ ಸಂಘವನ್ನು ಸ್ಥಾಪಿಸಿ, ಎರಡು ದಶಕಗಳ ಕಾಲ ಅದರ ಅಧ್ಯಕ್ಷರಾಗಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ಸ್ಥಾಪಕ ಸದಸ್ಯರಾಗಿದ್ದ ಇವರು ದೀರ್ಘಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ದ್ದರು. ಪ್ರೊ. ರೈ ಅವರ ಕುರಿತಂತೆ ಸಂಸ್ಥೆ ‘ಗತ್ತಿಲ್ಲದ ಗುತ್ತಿನವರು’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದೆ. ಸರಳ ಸಜ್ಜನಿಕೆಯ ಸಹೃದಯಿ ಆಗಿದ್ದ ಪ್ರೊ.ಜಿ.ಆರ್.ರೈ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.