ಸಿಜೆಐ ಮೇಲೆ ಶೂ ಎಸೆತ ಪ್ರಕರಣ | ವಕೀಲ ರಾಕೇಶ್ ಕಿಶೋರ್ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ, ಅ.10: ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ವಕೀಲ ರಾಕೇಶ್ ಕಿಶೋರ್ ವಿರುದ್ಧ ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳ ಜೊತೆ ವಿವಿಧ ಪ್ರಗತಿಪರ ಸಂಘಟನೆಗಳು ಭಾಗಿಯಾಗಿ ಸನಾತನ ಧರ್ಮದ ಹೆಸರಲ್ಲಿ ರಾಕೇಶ್ ಕಿಶೋರ್ ಎಂಬ ಮನುವಾದಿ ನಡೆಸಿದ ಅಪಮಾನಕರ ಕೃತ್ಯದ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರರು, ಸ್ವಾತಂತ್ರ್ಯ ಪೂರ್ವದ, ಸಂವಿಧಾನ ಜಾರಿಯ ಪೂರ್ವದ ಭಾರತದ ಮನುವಾದಿಗಳ ಮನಸ್ಥಿತಿ ಇಂದೂ ಬದಲಾಗಿಲ್ಲ ಎಂಬುದು ಈ ಹೀನ ಕೃತ್ಯದಿಂದ ಬಯಲಾಗಿದ್ದು, ಸಂವಿಧಾನದ ಮೇಲಿನ ಇಂತಹ ಆಕ್ರಮಣವನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಪ್ರೇಮನಾಥ್ ಚಿಕ್ಕತುಂಬಳ, ರೇವಣಸಿದ್ದಪ್ಪ, ರಾಜಶೇಖರ ಮೆಣಸಿನಕಾಯಿ, ಆರೀಫ್ ಭದ್ರಾಪುರ, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.
ಬಿಜೆಪಿಯ ಭಾಸ್ಕರ್ ರಾವ್ ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲಿ ಸರಕಾರಿ ಕೆಲಸ ಪಡೆದು ನಿವೃತ್ತಿ ನಂತರ ನೀಚ ಹೇಳಿಕೆ ನೀಡಿರುವುದು ಇವರ ಕೊಳಕು ಮನಸ್ಥಿತಿ ತೋರಿಸುತ್ತದೆ. ಭಾಸ್ಕರ ರಾವ್ ಹುಬ್ಬಳ್ಳಿಗೆ ಬಂದರೆ ನಾವು ಚಪ್ಪಲಿ ಸೇವೆ ಮಾಡಿ ಸ್ವಾಗತ ಮಾಡಿಕೊಳ್ಳುವುದರ ಮುಖಾಂತರ ತಕ್ಕ ಉತ್ತರ ಕೊಡುತ್ತೇವೆ.
ಗುರುನಾಥ ಉಳ್ಳಿಕಾಶಿ, ದಲಿತ ಸಂಘಟನೆ ಮುಖಂಡ







