Dharawad | ಪುತ್ರನ ಆತ್ಮಹತ್ಯೆಯಿಂದ ಆಘಾತಗೊಂಡ ತಾಯಿ ಕುಸಿದುಬಿದ್ದು ಮೃತ್ಯು

ಧಾರವಾಡ: ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಘಾತಗೊಂಡು ತಾಯಿ ಕುಸಿದುಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡದ ತೇಜಸ್ವಿನಗರದಲ್ಲಿ ಬುಧವಾರ ನಡೆದಿದೆ.
ಮೆಹಬೂಬ್ ಸಾಬ್ ನದಾಫ್(47) ಆತ್ಮಹತ್ಯೆ ಮಾಡಿಕೊಂಡವರು. ಮಗನ ಸಾವಿನ ಸುದ್ದಿ ತಿಳಿದು ತಾಯಿ ಮುಗುಟಬಿ ನದಾಫ್ (68) ಕುಸಿದುಬಿದ್ದು ಕೊನೆಯುಸಿರೆಳದಿದ್ದಾರೆ.
ತೀವ್ರ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮೆಹಬೂಬ್ ಸಾಬ್ ನದಾಫ್ ಬುಧವಾರ ಬೆಳಗ್ಗೆ ಧಾರವಾಡದ ರಾಜೀವ್ ಗಾಂಧಿ ನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಸಂಜೆಯ ವೇಳೆ ರೈಲ್ವೆ ಪೊಲೀಸರು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಸಂಜೆ ಏಳು ಗಂಟೆ ಸುಮಾರಿಗೆ ಮೆಹಬೂಬ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿತ್ತು. ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಮನೆಯಿಂದ ಹೊರಗೆ ಕೊಂಡೊಯ್ಯುತ್ತಿದ್ದಂತೆ ಮುಗುಟಬಿ ನದಾಫ್ ಕುಸಿದುಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಳಿಕ ಸಂಬಂಧಿಕರು ಮತ್ತು ಸ್ಥಳೀಯರು ಸೇರಿ ಮೊದಲು ಮಗನ ಅಂತ್ಯಕ್ರಿಯೆ ಪೂರೈಸಿ, ತಡರಾತ್ರಿ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದರು.




