ಹುಬ್ಬಳ್ಳಿ | ಅಂಜಲಿ ಹತ್ಯೆಗೆ ಇಲ್ಲಿನ ಪೊಲೀಸ್ ಕಮಿಷನರ್ ನಿರ್ಲಕ್ಷ್ಯವೇ ಕಾರಣ : ನಿರಂಜನ ಹಿರೇಮಠ್
![ಹುಬ್ಬಳ್ಳಿ | ಅಂಜಲಿ ಹತ್ಯೆಗೆ ಇಲ್ಲಿನ ಪೊಲೀಸ್ ಕಮಿಷನರ್ ನಿರ್ಲಕ್ಷ್ಯವೇ ಕಾರಣ : ನಿರಂಜನ ಹಿರೇಮಠ್ ಹುಬ್ಬಳ್ಳಿ | ಅಂಜಲಿ ಹತ್ಯೆಗೆ ಇಲ್ಲಿನ ಪೊಲೀಸ್ ಕಮಿಷನರ್ ನಿರ್ಲಕ್ಷ್ಯವೇ ಕಾರಣ : ನಿರಂಜನ ಹಿರೇಮಠ್](https://www.varthabharati.in/h-upload/2024/05/15/1266766-screenshot-2024-05-15-205400.webp)
ಹುಬ್ಬಳ್ಳಿ : "ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ನನ್ನ ವಾರ್ಡ್ನಲ್ಲಿ ಈ ರೀತಿಯ ಘಟನೆ ಮತ್ತೆ ಆಗಿದೆ. ನನ್ನ ವಾರ್ಡ್ ನಲ್ಲಿ ಇಂತಹ ಘಟನೆಯಾಗಿರುವುದನ್ನು ನಾನು ಖಂಡಿಸುತ್ತೇನೆ" ಎಂದು ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ್ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಶವಗಾರದ ಬಳಿ ಮಾತನಾಡಿದ ಅವರು, "ನನ್ನ ಮಗಳು ಹತ್ಯೆಯಾದಾಗ ಈ ರೀತಿಯಾದ ಇನ್ನೊಂದು ಘಟನೆಯಾಗಬಾರದು ಎಂದು ಹೇಳಿದ್ದೆ. ಆದರೂ ಇಂತಹ ಘಟನೆ ನಡೆದಿದೆ. ಇದಕ್ಕೆ ಇಲ್ಲಿನ ಪೊಲೀಸ್ ಕಮಿಷನರ್ ಕಾರಣ. ಅವರನ್ನು ವರ್ಗಾವಣೆ ಮಾಡಿ ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೆ" ಎಂದು ಹೇಳಿದರು.
"ಮೃತ ಅಂಜಲಿ ಕೂಡ ನನ್ನ ಮಗಳು ಇದ್ದ ಹಾಗೇ . ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು. ಅದೇ ರೀತಿ ಅಂಜಲಿ ಹತ್ಯೆಯನ್ನು ಖಂಡಿಸಿ ಹೋರಾಟ ಮಾಡುತ್ತೇವೆ. ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲ ಕಡೆ ಯುವಕರು ಗಾಂಜಾ, ಅಫೀಮು ಎಂದು ದಾರಿ ತಪ್ಪುತಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ . ಇದರಿಂದ ಇಂತಹ ಕೊಲೆಗಳು ನಡೆಯುತ್ತಿವೆ ಎಂದು ಸರ್ಕಾರ ಹಾಗೂ ಹುಬ್ಬಳ್ಳಿ ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದರು.
ಠಾಣೆಗೆ ಹೋಗಿ ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಿಲ್ಲ : ಶಾಸಕ ಮಹೇಶ್ ಟೆಂಗಿನಕಾಯಿ
"ನೇಹಾಳನ್ನು ಕೊಂದ ಹಾಗೆ ನಿನ್ನನ್ನೂ ಕೊಲ್ಲುವೆ ಎಂದು ಆರೋಪಿ ಹೇಳಿದ್ದ. ಆ ಬಳಿಕ ಮನೆಯವರು ಪೊಲೀಸ್ ಠಾಣಡಗೆ ಹೋಗಿ ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಿಲ್ಲ. ಈ ರೀತಿಯ ವೈಫಲ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಆಗಲೇ ಕ್ರಮ ಕೈಗೊಂಡಿದ್ದರೆ ಜೀವ ಉಳಿಯುತ್ತಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲೀಸರ ದಿಕ್ಕು ತಪ್ಪಿಸುವ ಕಾರ್ಯವೂ ನಡೆಯುತ್ತಿದೆ" ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದರು.
ನಾನು ಹೊರಗಡೆ ಬಂದಿಲ್ಲದಿದ್ದರೆ ನನಗೂ ಆತ ಇರಿಯುತ್ತಿದ್ದ :
"ಅಂಜಲಿ ನನ್ನ ಮೊಮ್ಮಗಳು. ಆಕೆ ತಾಯಿ ಈಗಾಗಲೇ ಮೃತಪಟ್ಟಿದ್ದಾರೆ. ಹಾಗಾಗಿ, ಅಂಜಲಿ ನನ್ನ ಜೊತೆಗೇ ಇದ್ದಳು. ಆಕೆಗೆ ಏನೂ ಆಗಬಾರದು ಎಂದು ನಾನು ಎಲ್ಲಿಗೂ ಕಳಿಸಿ ಕೊಡಲ್ಲ. ಅಲ್ಲದೆ, ಅವಳು ಕಾಲೇಜಿಗೆ ಹೋಗಬೇಕು ಎಂದಾಗಲೂ ಬೇಡ ಎಂದಿದ್ದೆ" ಎಂದು ಹೇಳಿದರು.
"ನಾನು ಬೆಳಿಗ್ಗೆ 5 ಗಂಟೆಗೆ ಏಳುತ್ತೇನೆ. ಬೆಳಿಗ್ಗೆ 5.20ಕ್ಕೆ ಆತ ಬಂದು ಮನೆಯ ಬಾಗಿಲು ತಟ್ಟಿದ್ದ. ಅಂಜಲಿ ಹೋಗಿ ಬಾಗಿಲು ತೆರೆದಿದ್ದಾಳೆ. ಬಾಗಿಲು ತೆರೆಯುತ್ತಿದ್ದಂತೆಯೇ ನೀನು ನನ್ನ ಜೊತೆಗೆ ಬರುವುದಿಲ್ಲವೇ ಎಂದು ಕೇಳಿದ. ಅಂಜಲಿ ಬರಲ್ಲ ಎಂದು ಹೇಳಿದಳು. ಮತ್ತೆ ನಿರಂಜನ್ ಮಗಳಿಗಾದದ್ದನ್ನೇ ನನ್ನ ಕಣ್ಣೆದುರಲ್ಲೆ ಆತ ಮಾಡಿ ಮುಗಿಸಿಬಿಟ್ಟ. ನಾನು ಹೊರಗಡೆ ಬಂದಿಲ್ಲದಿದ್ದರೆ ನನಗೂ ಆತ ಇರಿಯುತ್ತಿದ್ದ"
ಗಂಗವ್ವ (ಅಂಜಲಿ ಅಜ್ಜಿ)