ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: ಅಂಜುಮನ್ ಚುನಾವಣೆ ವಿರೋಧಿಸಿ ಕುಟುಂಬಸ್ಥರ ಆಕ್ರೋಶ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಯುವಕರನ್ನು ಬಿಡುಗಡೆಗೊಳಿಸುವ ಜವಾಬ್ದಾರಿ ಹೊತ್ತಿರುವ ಅಂಜುಮನ್ ಸಂಸ್ಥೆಯ ಚುನಾವಣೆ ನಡೆಸದಂತೆ ಬಂಧಿತ ಯುವಕರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದೇ 18 ರಂದು ನಡೆಯುವ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಅಂಜುಮನ್ ಸಂಸ್ಥೆ ಚುನಾವಣೆ ನಡೆಸದಂತೆ ಜೈಲು ಸೇರಿರುವ ಯುವಕರ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ಅಡ್ಡಗಟ್ಟಿ ಆಕ್ರೋಶ ಹೊರಹಾಕುತ್ತಿರುವ ಪಾಲಕರು ಕೂಡಲೇ ಬಿಡುಗಡೆ ಮಾಡಿಸುವಂತೆ ಆಗ್ರಹಿಸಿದ್ದಾರೆ.
ಅಭ್ಯರ್ಥಿಗಳು ಮತ್ತು ಪಾಲಕರ ನಡುವೆ ವಾಗ್ವಾದ ನಡೆದಿದ್ದು, ಮೊದಲು ನಮ್ಮ ಮಕ್ಕಳನ್ನು ಜೈಲಿನಿಂದ ಮುಕ್ತಿಗೊಳಿಸಿ. ಆಮೇಲೆ ಅಂಜುಮನ್ ಸಂಸ್ಥೆಯ ಚುನಾವಣೆ ನಡೆಸಿ. ನಮ್ಮ ಮಕ್ಕಳಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಇನ್ನೂ ಎರಡೂ ತಿಂಗಳು ಕಳೆದರೆ ನಮ್ಮ ಮಕ್ಕಳು ಬಂಧನವಾಗಿ ಎರಡೂ ವರ್ಷ ಕಳೆಯುತ್ತೆ. ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಆದರೂ ಪೊಲೀಸರು ನಮ್ಮ ಮಕ್ಕಳನ್ನ ಅರೆಸ್ಟ್ ಮಾಡಿದ್ದಾರೆ. ಈಗ ಮಕ್ಕಳನ್ನು ಮೊದಲು ಬಿಡುಗಡೆ ಮಾಡಲು ಕಾನೂನು ಹೋರಾಟ ಮಾಡಿ. ಆಮೇಲೆ ಚುನಾವಣೆ ಮಾಡಿ ಎಂದು ಒತ್ತಯಿಸಿದ್ದಾರೆ.
ಎಪ್ರಿಲ್ 16 2022 ರಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ, ಆಸ್ಪತ್ರೆ, ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. 7 ಜನ ಪೊಲೀಸರು ಗಾಯಗೊಂಡರೆ, ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದವು. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 13 ಎಫ್ಐಆರ್ ದಾಖಲಾಗಿದ್ದವು.







