ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ: ಶಾಸಕ ಅರವಿಂದ್ ಬೆಲ್ಲದ ಕಛೇರಿ ಬೀಗ ಹಾಕಿ ಪ್ರತಿಭಟನೆ

ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅನೂಮೊದನೆಗೆ ಆಗ್ರಹಿಸಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಐದನೆ ದಿನಕ್ಕೆ ಕಾಲಿಟ್ಟಿದ್ದು ,ಪ್ರತಿಭಟನಾಕಾರರು ಧಾರವಾಡ ಪಾಲಿಕೆಗೆ ಮುತ್ತಿಗೆ ಹಾಕಿ ಮೇಯರ್ ಜ್ಯೋತಿ ಪಾಟೀಲ್ ಕಛೇರಿ ಹಾಗು ಶಾಸಕ ಅರವಿಂದ್ ಬೆಲ್ಲದ ಕಛೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ಪಾಲಿಕೆಯನ್ನು ಪ್ರತ್ಯೇಕಪಡಿಸಬೇಕೆಂದು ಕಳೆದ ಒಂದು ದಶಕಗಳಿಂದ ಹೋರಾಟ ನಡೆಯುತ್ತಿದ್ದು. ಕಳೆದ ಆರು ತಿಂಗಳಲ್ಲಿ ಪ್ರತ್ಯೇಕ ಪಾಲಿಕೆ ವಿಷಯ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಸಿಲುಕಿದೆ.
ಹು-ಧಾ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ನಿರ್ಣಯವನ್ನು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಒಮ್ಮತದ ನಿರ್ಧಾರದ ನಿರ್ಣಯ ತೆಗೆದುಕೊಂಡಿದ್ದು. ಸದ್ಯ ಮೇಯರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಇದರ ಸಾಧಕ ಭಾದಕಗಳ ಚರ್ಚೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿದ್ದರು. ನಂತರ ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಳಿಸಿದ್ದರು. ಕಾಂಗ್ರೆಸ್ ಸರಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕಳೆದ ಆರು ತಿಂಗಳುಗಳು ಕಳೆದರೂ ರಾಜ್ಯಪಾಲರು ಅಂಕಿತ ಹಾಕಿಲ್ಲ.
ಇದೇ ವೇಳೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಹು-ಧಾ ಪಾಲಿಕೆಯನ್ನು ವಿಭಜನೆ ಬದಲು ಇದನ್ನು ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಡಲು ನಿರ್ಣಯ ಕೈಗೊಂಡಿದ್ದು, ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಈ ನಿರ್ಣಯದ ವಿರುದ್ಧ ಕಾಂಗ್ರೆಸ್ ಹಾಗು ಧಾರವಾಡ ನಗರ ಪಾಲಿಕೆ ಹೋರಾಟ ವೇದಿಕೆ ಹಾಗು ಕನ್ನಡ ಪರ ಹೋರಾಟಗಾರರು ಮತ್ತು ಪ್ರತ್ಯೇಕ ಪಾಲಿಕೆ ಹೋರಾಟಗಾರರು ಬಿಜೆಪಿಯ ದ್ವಂದ್ವ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಈ ಮೊದಲು ಪ್ರತ್ಯೇಕ ಪಾಲಿಕೆ ಮಾಡಲು ಸಹಮತ ವ್ಯಕ್ತಪಡಿಸಿದ್ದ ಬಿಜೆಪಿ ಇಂದು ಅನುಧಾನದ ತಾರತಮ್ಯ ಹಾಗು ಸೌಲಭ್ಯ ಕ್ಕಾಗಿ ಪ್ರತ್ಯೇಕ ಪಾಲಿಕೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದು ನಾಳೆ ಹೋರಾಟಗಾರರು ಬೆಂಗಳೂರಿಗೆ ಹೋಗಿ ರಾಜ್ಯಪಾಲರ ಬೇಟೆಮಾಡಲು ಸಿದ್ದತೆ ನಡೆಸಿದ್ದಾರೆ.
ಕಾಂಗ್ರೆಸ್ಗೆ ಸ್ಥಳೀಯ ಸಂಘ-ಸಂಸ್ಥೆಗಳ ಬೆಂಬಲ ನೀಡಿದ್ದು, ಪ್ರತ್ಯೇಕ ಪಾಲಿಕೆ ಬೇಕೇ ಬೇಕೆಂದು ಹೋರಾಟ ಆರಂಭಿಸಿದ್ದಾರೆ. ಇದರ ಹಿಂದೆ ಬಿಜೆಪಿಯ ರಾಜಕೀಯವಿದೆ ಎಂದು ಧರಣಿನಿರತರು ಆರೋಪ ಮಾಡುತ್ತಿದ್ದಾರೆ. ಐದು ದಿನದೊಳಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.






