ಗದಗ: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಗದಗ : ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಯಲ್ಲಮ್ಮ ಅಲಿಯಾಸ್ ಸ್ವಾತಿ(37) ಕೊಲೆಯಾದವರು. ಅವರ ಪತಿ ರಮೇಶ್ ನರಗುಂದ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಮೇಶ್ ಬುಧವಾರ ಸಂಜೆಯ ವೇಳೆ ಯಲ್ಲಮ್ಮರ ತಲೆ ಮೇಲೆ ಒಳಕಲ್ಲು ಎತ್ತಿಹಾಕಿ ಬಳಿಕ ಚಾಕುವಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೆಎಸ್ಸಾರ್ಟಿಸಿ ಗದಗ ಡಿಪೋನಲ್ಲಿ ನಿರ್ವಾಹಕನಾಗಿರುವ ಆರೋಪಿ ರಮೇಶ್ ಮತ್ತು ಸ್ವಾತಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ರಮೇಶ್ ಕಳೆದ ಕೆಲವು ವರ್ಷಗಳಿಂದ ಪತ್ನಿ ಮೇಲೆ ಅನುಮಾನಪಡುತ್ತಿದ್ದ. ಇದೇ ಕಾರಣಕ್ಕೆ ಒಂದು ವರ್ಷದ ಹಿಂದೆಯೊಮ್ಮೆ ಯಲ್ಲಮ್ಮರ ಕೊಲೆಗೆ ಯತ್ನಸಿದ್ದನೆನ್ನಲಾಗಿದೆ. ಬಳಿಕ ಹಿರಿಯರ ಸಮ್ಮುಖದಲ್ಲಿ ಜಗಳ ಬಗೆ ಹರಿಸಲಾಗಿತ್ತು.
ರಮೇಶ್ ಇತ್ತೀಚೆಗೆ ದಿನನಿತ್ಯ ಕುಡಿದು ಬಂದು ಯಲ್ಲಮ್ಮರಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು, ಎಸ್ಪಿ ರೋಹನ್ ಜಗದೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





