ಗದಗ | ಎಸ್ಐಆರ್ ಕರ್ತವ್ಯನಿರತ ಬಿಎಲ್ಒ ಹೃದಯಾಘಾತದಿಂದ ಮೃತ್ಯು

ಗದಗ : ಎಸ್ಐಆರ್ ಕಾರ್ಯದಲ್ಲಿ ತೊಡಗಿದ್ದ ಬಿಎಲ್ಒ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತರನ್ನು ರತ್ನಮ್ಮ ಬಳಿಗಾರ (43) ಎಂದು ಗುರುತಿಸಲಾಗಿದೆ.
ಅವರು ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿದ್ದು, ಎಸ್ಐಆರ್ ಕಾರ್ಯಕ್ಕಾಗಿ ಬೂತ್ ಲೆವೆಲ್ ಅಧಿಕಾರಿ (ಬಿಎಲ್ಒ) ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಬಾಗೇವಾಡಿ ಗ್ರಾಮದಲ್ಲಿ ಎಸ್ಐಆರ್ ಪ್ರಗತಿ ಪರಿಶೀಲನೆಗಾಗಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಪ್ರಮುಖರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಶಾಸಕರು ಸ್ಥಳೀಯ ಆಪ್ತರೊಬ್ಬರ ಮನೆಯಲ್ಲಿ ಸಭೆ ನಡೆಸಿ, ಎಸ್ಐಆರ್ ಕಾರ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಇದೇ ವೇಳೆ ರತ್ನಮ್ಮ ಬಳಿಗಾರ ತಮ್ಮ ಕರ್ತವ್ಯ ನಿರ್ವಹಣೆಯ ಬಗ್ಗೆ ಶಾಸಕರಿಂದ ಮೆಚ್ಚುಗೆಗೂ ಸಹ ಪಾತ್ರರಾಗಿದ್ದರು ಎನ್ನಲಾಗ್ತಿದೆ. ಕೆಲವೇ ನಿಮಿಷಗಳ ಬಳಿಕ ಚಹಾ ಕುಡಿಯುತ್ತಿದ್ದ ವೇಳೆ ರತ್ನಮ್ಮ ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದರೂ ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.




