ಗದಗ | ಕಾರು-ಬಸ್ ನಡುವೆ ಭೀಕರ ಅಪಘಾತ; ಮೂವರು ಮೃತ್ಯು

ಗದಗ : ಗೋವಾ ರಾಜ್ಯಕ್ಕೆ ಸೇರಿದ ಕದಂಬ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ತಾಲೂಕಿನ ಹರ್ಲಾಪೂರ ಕ್ರಾಸ್ ಬಳಿ ಗುರುವಾರ ನಡೆದಿದೆ.
ಹಾವೇರಿ ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಅರ್ಜುನ್ ನೆಲ್ಲೂರ(32), ಸಹೋದರ ಸಂಬಂಧಿ ರವಿ ನೆಲ್ಲೂರ(35), ಕೊಪ್ಪಳ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಈರಣ್ಣ ಉಪ್ಪಾರ (36) ಮೃತರು ಎಂದು ತಿಳಿದು ಬಂದಿದೆ.
ಮೃತರು ಹಾವೇರಿ ಜಿಲ್ಲೆ ಬಂಕಾಪೂರ ತಾಲೂಕಿನ ಹುನಗುಂದ ನಿವಾಸಿಗಳು ಎನ್ನಲಾಗುತ್ತಿದೆ. ಇನ್ನು ಬಸ್ ಚಾಲಕನಿಗೂ ಗಾಯಗಳಾಗಿವೆ.
ಕಾರು ಚಾಲಕನ ನಿರ್ಲಕ್ಷ್ಯದಿಂದ ರೋಡ್ ಡಿವೈಡರ್ ದಾಟಿಕೊಂಡು ಎದುರು ಬರುವ ಬಸ್ ಗೆ ಢಿಕ್ಕಿ ಹೊಡೆದ್ದಾರೆ. ಕಾರು ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್ ಮುಂದಿನ ಭಾಗ ಹಾಗೂ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಾಗೂ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





