Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಮೈ ಮನಗಳ ಸುಳಿಯ ಕಷ್ಟ, ಸುಖ

ಮೈ ಮನಗಳ ಸುಳಿಯ ಕಷ್ಟ, ಸುಖ

ಸಾಹಿತ್ಯ ಕೃತಿಗಳ ಮೂಲಕ ಸುತ್ತಣ ಜನರನ್ನು ಅರಿಯುವ ವ್ಯವಧಾನ ಪೂರಾ ಮಾಯವಾಗಿದೆಯೇ?

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್17 March 2024 11:53 AM IST
share
ಮೈ ಮನಗಳ ಸುಳಿಯ ಕಷ್ಟ, ಸುಖ
ಧರ್ಮದೊಳಗೆ ಸೆರೆಯಾದವರ ಅದುಮಿಟ್ಟ ವಾಂಛಲ್ಯಗಳ ಲೋಕ ನನಗೆ ಇನ್ನಷ್ಟು ಚೆನ್ನಾಗಿ ಅರ್ಥವಾಗತೊಡಗಿದ್ದು ಈಚೆಗೆ ರೂಸೋನ ನಿವೇದನೆಗಳನ್ನು ಓದಿದಾಗ; ಅಥವಾ ‘ಸ್ಕಾರ್ಲೆಟ್ ಲೆಟರ್’ ಕಾದಂಬರಿಯ ಧರ್ಮಗುರುವಿನ ತೊಳಲಾಟ ನೆನಪಾದಾಗ. ಎಷ್ಟೋ ಸಲ ನಾವು ಕಣ್ಣಾರೆ ಕಂಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವ ನಿಜಜೀವನದ ವ್ಯಕ್ತಿಗಳು ನಮ್ಮ ಬರವಣಿಗೆಯ ಪ್ರಕ್ರಿಯೆಯಲ್ಲಿ ಅಥವಾ ಮತ್ತೊಬ್ಬರ ಬರವಣಿಗೆಯಲ್ಲಿ ನಮಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗತೊಡಗುತ್ತಾರೆ. ಕಾರಣ, ನಾವು ಆಳವಾಗಿ ತೊಡಗಿ ಮಾಡುವ ಓದು, ಬರವಣಿಗೆಗಳು ಲೋಕದ ಎಲ್ಲ ಬಗೆಯ ಪಾತ್ರಗಳನ್ನು ಗಾಢ ಅನುಕಂಪದಿಂದ ಅರ್ಥ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ.

ಫ್ರೆಂಚ್ ಫಿಲಾಸಫರ್ ರೂಸೋನ ‘ಕನಫೆಶನ್ಸ್’ನ(ಆತ್ಮ ನಿವೇದನೆಗಳು) ಎರಡನೇ ಸಂಪುಟ ಓದುತ್ತಿರುವಾಗಲೇ ಕರ್ನಾಟಕದಲ್ಲಿ ಸ್ವಾಮೀಜಿಯೊಬ್ಬರು ಬಂಧನಕ್ಕೊಳಗಾದ ಸುದ್ದಿ ಕಣ್ಣಿಗೆ ಬಿತ್ತು. ಅದು ಹೇಗೋ ಇವೆರಡೂ ನನ್ನ ಮನಸ್ಸಿನಲ್ಲಿ ಕನೆಕ್ಟ್ ಆದವು. ಎಷ್ಟೋ ಸಲ ಕಣ್ಣೆದುರಿನ ಘಟನೆಗಳು ಹೆಚ್ಚು ಸ್ಪಷ್ಟವಾಗುವುದು ಗಂಭೀರವಾದ ಓದು, ಬರಹಗಳ ಬೆಳಕಿನಲ್ಲಿ ಎಂಬ ನನ್ನ ಅನುಭವ, ನಂಬಿಕೆಗಳು ಮತ್ತೆ ಗಟ್ಟಿಯಾಗತೊಡದವು.

ರೂಸೋಗೆ ಹದಿನಾರು ವರ್ಷವಾಗಿದ್ದಾಗ ಅವನ ಬದುಕಿನಲ್ಲಿ ಒಂದು ನಿರ್ಣಾಯಕ ತಿರುವು ಘಟಿಸಿತು. ಕನ್ವರ್ಶನ್ ಅಥವಾ ನವಧರ್ಮ ಸ್ವೀಕಾರ ಎಂದರೆ ಏನೆಂಬುದೇ ಗೊತ್ತಿಲ್ಲದ ಹುಡುಗ ರೂಸೋ ಕೆಥೊಲಿಕ್ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಬೇಕಾಯಿತು. ಇದರಿಂದ ತನಗೊಂದು ಹೊಸ ಲೋಕ ತೆರೆಯುತ್ತದೆ ಎಂದು ಹುಡುಗ ರೂಸೋ ಅಂದುಕೊಂಡಿದ್ದ. ಹಾಗಾಗಲಿಲ್ಲ. ಅವನ ಮನಸ್ಸು ಧರ್ಮವನ್ನು ಬಿಟ್ಟು ಇನ್ನೆಲ್ಲವನ್ನೂ ಯೋಚಿಸತೊಡಗಿತು. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಚಡಪಡಿಕೆ ಶುರುವಾಯಿತು. ನವ ಧರ್ಮ ಸ್ವೀಕಾರದ ಹೆಜ್ಜೆಗಳಲ್ಲಿ ರೂಸೋ ನೆರವಿಗೆ ನಿಂತ ಮೇಡಮ್ ವಾರೆನ್ಸ್ ತನಗಿಂತ ಕಿರಿಯವನಾದ ರೂಸೋ ಜೊತೆ ಪ್ರಣಯವನ್ನಾರಂಭಿಸುತ್ತಾಳೆ. ಮುಂದೆ ಆಕೆ ಕ್ಯಾನ್ಸರ್ ಆಗಿ ತೀರಿಕೊಳ್ಳುತ್ತಾಳೆ. ಮತ್ತೆ ರೂಸೋನ ಪ್ರೇಮದ ಹುಡುಕಾಟ ಶುರುವಾಗುತ್ತದೆ.

ತನ್ನ ಐವತ್ತಮೂರು-ಐವತ್ತನೆಯ ವಯಸ್ಸಿನ ನಡುವೆ ಈ ನಿವೇದನೆಗಳ ಸಂಪುಟಗಳನ್ನು ಬರೆದ ಜೆ.ಜೆ. ರೂಸೋ ಹದಿನೆಂಟನೆಯ ಶತಮಾನದ ದೊಡ್ಡ ತತ್ವಜ್ಞಾನಿ. ಫ್ರೆಂಚ್ ಕ್ರಾಂತಿಯ ನಾಯಕರನ್ನು, ರೊಮ್ಯಾಂಟಿಕ್ ಸಾಹಿತ್ಯ ಚಳವಳಿಯನ್ನು ಪ್ರಭಾವಿಸಿದವನು. ಯೂರೋಪಿನ ಜನ ಜಗತ್ತನ್ನು ನೋಡುವ ಕ್ರಮ ಅವನಿಂದಲೂ ಬದಲಾಯಿತು.

ರೂಸೋನ ನಿವೇದನೆಗಳು ಧರ್ಮದ ಹೆಸರಿನಲ್ಲಿ ಮನುಷ್ಯರ ಮೇಲೆ ಹೇರಿರುವ ಕಟ್ಟಳೆಗಳು ಸೃಷ್ಟಿಸಿರುವ ಸಮಾಜದ ಅಸಹಜ ನೀತಿಗಳಿಗೂ ಮನುಷ್ಯನ ದೇಹಕ್ಕೂ ಏನೇನೂ ಸಂಬಂಧವಿರುವುದಿಲ್ಲ ಎಂಬ ಎಲ್ಲ ಕಾಲದ ಸತ್ಯಗಳನ್ನು ಮತ್ತೆ ನೆನಪಿಸುತ್ತವೆ. ಇದು ಎಲ್ಲ ಕಾಲದಲ್ಲೂ ಎಲ್ಲರೂ ಬಲ್ಲ ವಿಷಯ. ಆದರೂ ಧರ್ಮ, ಧಾರ್ಮಿಕ ಸಂಸ್ಥೆಗಳು ಹಾಗೂ ಸಂಪ್ರದಾಯಸ್ಥ ಸಮಾಜಗಳು ಧರ್ಮಗುರು, ಪಾದ್ರಿ, ಸ್ವಾಮೀಜಿಗಳ ಮೇಲೆ ಹಲ ಬಗೆಯ ಅಸಹಜ ಕಟ್ಟಳೆಗಳನ್ನು ಹೇರುತ್ತಾ ಬಂದಿವೆ. ಆ ಕಟ್ಟಳೆಗಳು ಸೃಷ್ಟಿಸುವ ಕಷ್ಟ, ಸುಖ, ಬಿಕ್ಕಟ್ಟು, ಉಲ್ಲಂಘನೆಗಳು ಕೂಡ ಸಮಾಜದಲ್ಲಿ ಎಲ್ಲರಿಗೂ ಗೊತ್ತಿರುತ್ತವೆ; ಆದರೂ ಜನ ಜಾಣ ಕಿವುಡು, ಜಾಣ ಕುರುಡುಗಳಲ್ಲಿ ಅವುಗಳನ್ನು ಕಡೆಗಣಿಸಿ ತಮ್ಮ ಪಾಡಿಗೆ ತಾವಿರುತ್ತಾರೆ. ಅಕಸ್ಮಾತ್ ರೂಸೋನಂಥವರು ಬರೆದದ್ದನ್ನು ಓದಿದಾಗ, ಅಥವಾ ಅಮೆರಿಕನ್ ಕಾದಂಬರಿಕಾರ ಹಾತಾನ್ ಬರೆದ ‘ಸ್ಕಾರ್ಲೆಟ್ ಲೆಟರ್’ ಥರದ ಕಾದಂಬರಿಯಲ್ಲಿ ವಿಧವೆಯೊಬ್ಬಳೊಡನೆ ತನ್ನ ಲೈಂಗಿಕ ಸಂಬಂಧದ ಹೊಣೆ ಹೊರಲಾಗದ ತಳಮಳದಲ್ಲಿರುವ ಧರ್ಮಗುರುವಿನ ತೊಳಲಾಟ ಕಂಡಾಗ, ಅರೆ! ನಮ್ಮ ಸ್ವಾಮೀಜಿಗಳಿಗೂ ಈ ಕಷ್ಟಗಳಿರಬಹುದಲ್ಲವೆ? ಎಂದುಕೊಂಡು ಸುಮ್ಮನಾಗುತ್ತಾರೆ.

ಈ ಕುರಿತು ಬರೆಯುತ್ತಿರುವಾಗ ಹದಿಹರೆಯದಲ್ಲಿ ಸ್ವಾಮೀಜಿಗಳಾಗಬೇಕಾಗಿದ್ದು, ನಂತರ ಅದನ್ನು ತಪ್ಪಿಸಿಕೊಂಡ ಗೆಳೆಯರ ನೆನಪಾಯಿತು. ಹಾಗೆ ತಪ್ಪಿಸಿಕೊಂಡ ಮೂವರು ಗೆಳೆಯರು ಮುಂದೆ ಸಾಹಿತ್ಯ, ಸಾರ್ವಜನಿಕ ಜೀವನ, ವೃತ್ತಿ, ರಂಗಭೂಮಿ, ಸಿನೆಮಾಗಳಲ್ಲಿ ತೊಡಗಿಕೊಂಡು ತಂತಮ್ಮ ಬದುಕನ್ನು ಬದುಕುತ್ತಾ ಬಂದಿದ್ದಾರೆ. ಈ ಮೂವರಲ್ಲಿ ಇಬ್ಬರು ಗೆಳೆಯರ ಅನುಭವಗಳು ಪ್ರಾತಿನಿಧಿಕವಾದ್ದರಿಂದ ಅವರ ಹೆಸರು, ಹಿನ್ನೆಲೆಗಳ ಅಗತ್ಯವಿಲ್ಲ. ಇಲ್ಲಿನ ಹೆಸರುಗಳು ಕಾಲ್ಪನಿಕ ಎಂದು ಬಿಡಿಸಿ ಹೇಳಬೇಕಾಗಿಲ್ಲ:

ಮಠವೊಂದರ ಶಾಲೆಯಲ್ಲಿ ಓದುತ್ತಿದ್ದ ಚುರುಕು ಹುಡುಗ ರಾಮು ಸ್ವಾಮಿಯಾಗಲು ತಕ್ಕವನೆಂದು ಹಿರಿಯರು ತೀರ್ಮಾನಿಸಿದರು; ಹತ್ತನೆಯ ತರಗತಿಯಲ್ಲಿ ಓದುವ ಕಾಲಕ್ಕಾಗಲೇ ರಾಮು ಧರ್ಮ, ಅಧ್ಯಾತ್ಮಗಳ ಬಗ್ಗೆ ಬ್ರೇಕಿಲ್ಲದೆ ಮಾತಾಡುವುದನ್ನು ಕಲಿತ. ಒಳ್ಳೆಯ ಊಟೋಪಚಾರ, ಭಕ್ತರ ಅಯಾಚಿತ ಗೌರವ, ತನ್ನ ಮಾತಿನ ಕಿಕ್... ಎಲ್ಲವನ್ನೂ ಆನಂದಿಸತೊಡಗಿದ. ವರ್ಷದ ನಂತರ ರಾಜು ಪೂರ್ಣ ಪ್ರಮಾಣದ ಸ್ವಾಮಿಯಾಗುವ ಕಾಲ ಬಂತು. ‘ಸ್ವಾಮೀಜಿಯಾಗುವುದು ಅವನ ಪಾಲಿಗೆ ಬಂದಿದ್ದರೆ ಆಗಲಿ’ ಎಂದು ಅಪ್ಪ ನಿರ್ಲಿಪ್ತನಾದ. ತಾಯಿ ಮಾತ್ರ ‘ಮಗ ಯಾವ ಕಾರಣಕ್ಕೂ ಸ್ವಾಮಿಯಾಗಬಾರದು’ ಎಂದು ಪಟ್ಟು ಹಿಡಿದಳು. ರಾಮು ಮಠದ ಹಾದಿ ಬಿಟ್ಟು, ಓದಿ, ಕೆಲಸ ಹಿಡಿದು ಸಂಸಾರಿಯಾದ.

ಎರಡನೆಯದು, ರಾಜುವಿನ ಕತೆ: ‘ಮಗ ಧರ್ಮಕಾರ್ಯಕ್ಕೆ ಮುಡಿಪಾಗಿರಲಿ’ ಎಂಬ ನಿಜವಾದ ಶ್ರದ್ಧೆಯಿಂದಲೇ ಅಪ್ಪ ರಾಜುವನ್ನು ಮಠಕ್ಕೆ ಬಿಟ್ಟರು. ಸುಮಾರು ಹತ್ತು ವರ್ಷ ಸ್ವಾಮಿಯಾಗಲು ತಯಾರಾದ ರಾಜುವಿಗೆ ಧರ್ಮ, ಪ್ರವಚನಗಳ ಜೊತೆಜೊತೆಗೆ ಲೋಕದ ವಾಂಛಲ್ಯಗಳೂ ಕಾಡುತ್ತಿದ್ದವು. ಅಕಸ್ಮಾತ್ ಓದಿದ ಪುಸ್ತಕಗಳು, ಕಣ್ಣಿಗೆ ಬಿದ್ದ ಚಿತ್ರಗಳು ಬೇರೆಯ ಲೋಕವನ್ನೇ ಕಾಣಿಸುತ್ತಿದ್ದವು. ರಂಗಭೂಮಿಯ ನಿರ್ದೇಶಕರೊಬ್ಬರ ಮಾತುಗಳ ಜೀವಂತಿಕೆ ರಾಜುವನ್ನು ಹೆಚ್ಚು ಸೆಳೆಯತೊಡಗಿತು. ಸ್ವಾಮಿಯಾಗುವ ಗೊಡವೆ ಬಿಟ್ಟು ಓದು ಮುಂದುವರಿಸಿದ. ರಂಗಭೂಮಿಗೆ ಹೊರಳಿದ; ‘ಇಲ್ಲಿನ ಏಳು ಬೀಳುಗಳು ಏನೇ ಇದ್ದರೂ ಕಲೆಯ ಲೋಕದಲ್ಲೇ ಆರಾಮಾಗಿರುವೆ’ ಎಂದು ರಾಜು ಹೇಳುತ್ತಾನೆ.

ಮತ್ತೊಬ್ಬ ಗೆಳೆಯ ಚೆನ್ನಪ್ಪನನ್ನು ಬಡತನದ ಕಾರಣದಿಂದ ಮನೆಯವರು ಸ್ವಾಮಿಯಾಗಲು ಮಠವೊಂದಕ್ಕೆ ಸೇರಿಸಿದರು. ಚೆನ್ನಪ್ಪ ಒಂದು ದಿನ ಮಠ ಬಿಟ್ಟು ಓಡಿ ಹೋಗಿ ಕಾಲೇಜು ಸೇರಿಕೊಂಡ; ಮುಂದೆ ಮೇಷ್ಟರೂ ಆದ.

ಈ ಕತೆಗಳೆಲ್ಲ ನಮಗೆ ಪರಿಚಿತವೇ. ಇವರಂತೆ ಧಾರ್ಮಿಕ ಆವರಣದಿಂದ ಓಡಿ ಹೋಗದೆ, ಅದೇ ಆವರಣದಲ್ಲಿ ಅರ್ಥಪೂರ್ಣ ಕೆಲಸ ಮಾಡಿಕೊಂಡಿರುವವರೂ ಇದ್ದಾರೆ. ವಿದ್ವಾಂಸರೂ, ಜ್ಞಾನಿಗಳೂ ಆಗಿ ವಿಕಾಸಗೊಂಡವರಿದ್ದಾರೆ; ಎಲ್ಲ ವಲಯಗಳಂತೆ ಇಲ್ಲೂ ಲೋಕಕಂಟಕರೂ ಇದ್ದಾರೆ! ಆದರೂ ಹನಿಟ್ರ್ಯಾಪ್, ಪೊಕ್ಸೊ ಪ್ರಕರಣ ಮುಂತಾದವು ಶುರುವಾದ ಮೇಲೆ ಸ್ವಾಮೀಜಿಗಳ ಆತ್ಮಹತ್ಯೆ, ಬಂಧನಗಳ ಪ್ರಕರಣಗಳೂ ಶುರುವಾಗಿವೆ; ಅವರ ಭಕ್ತರು ಕೂಡ ಈ ರೋಚಕ ಸುದ್ದಿಗಳನ್ನು ಜಗಿಯುತ್ತಿರುತ್ತಾರೆ ಅಥವಾ ಬೆಚ್ಚುತ್ತಾರೆ; ಆದರೆ ಇದಕ್ಕೆ ಪರಿಹಾರ ಹುಡುಕುವ ಕಾಳಜಿಯನ್ನಂತೂ ಅವರು ತೋರಲಾರರು. ಸಾಮಾನ್ಯವಾಗಿ ಯಾವ ವಲಯಗಳು ಸಮಸ್ಯೆ ಎದುರಿಸುತ್ತವೆಯೋ ಅವು ಆ ಸಮಸ್ಯೆಯನ್ನು ಚರ್ಚಿಸಿದಾಗ ಮಾತ್ರ ಆ ಚರ್ಚೆಗೆ ಅಧಿಕೃತತೆ ಬರುತ್ತದೆ. ಆದರೆ ಎಲ್ಲವನ್ನೂ ಸಾರ್ವಜನಿಕ ಭಾಷೆಯಲ್ಲೇ ಮಾತಾಡಬೇಕಾದ ನೈತಿಕ ಒತ್ತಡವಿರುವ ಧರ್ಮಗುರುಗಳ ವಲಯದಲ್ಲಿ ಈ ಮಾತನ್ನು ಕೊನೆಯ ಪಕ್ಷ ಚರ್ಚಿಸಲಾದರೂ ತಕ್ಕ ಭಾಷೆಯಾಗಲೀ, ಅವಕಾಶವಾಗಲೀ ಇದ್ದಂತಿಲ್ಲ.

ಈ ನಡುವೆ ಸಮಾಜದ ಇತರ ವಲಯಗಳಲ್ಲಿನ ಬಲಾಢ್ಯರು ತಾವು ಮಾಡಿದ ಅನಾಚಾರಗಳನ್ನು ದಕ್ಕಿಸಿಕೊಳ್ಳುವಂತೆ ಧಾರ್ಮಿಕ ವಲಯದ ಬಲಾಢ್ಯರು ಕೂಡ ತಮ್ಮ ದುರಾಚಾರಗಳನ್ನು ದಕ್ಕಿಸಿಕೊಳ್ಳುವಷ್ಟು ಪ್ರಭಾವಿಗಳಾಗಿದ್ದಾರೆ. ಅಂಥವರು ತಮ್ಮ ಬಲಿಪಶುಗಳನ್ನೇ ಆತ್ಮಹತ್ಯೆಗೆ ತಳ್ಳುತ್ತಿರುತ್ತಾರೆ. ಕೆಲವರ ವಿಚಾರಣೆಯಿಂದ ನ್ಯಾಯಮೂರ್ತಿಗಳೇ ಹಿಂಜರಿದ ಪ್ರಸಂಗಗಳಿವೆ. ಇಂಥ ಬಲಾಢ್ಯರ ಬಗ್ಗೆ ಕೂಗುಮಾರಿ ಮಾಧ್ಯಮಗಳು ಸೊಲ್ಲೆತ್ತುವುದಿಲ್ಲ; ಆದರೆ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ, ಅಷ್ಟಿಷ್ಟು ಅಳುಕಿನ ಸ್ವಾಮಿಗಳು ಮಾತ್ರ ಮಾಧ್ಯಮಗಳ ಹಲ್ಲಿಗೆ ಸಿಕ್ಕಿ ಬೀಳುತ್ತಾರೆ.

ಇವೆಲ್ಲವನ್ನೂ ಚರ್ಚೆಗೆ ತಂದಿರುವ ಉದ್ದೇಶವಿಷ್ಟೆ: ಧರ್ಮಗುರು ಎನ್ನಿಸಿಕೊಂಡ ವ್ಯಕ್ತಿ ಕೂಡ ಮೂಳೆ ಮಾಂಸಗಳ ಮನುಷ್ಯ ಎಂಬುದನ್ನು ಕ್ಷಿಪ್ರ ಮಾಧ್ಯಮ ಸಂಸ್ಕೃತಿಯ ಮಂಪರಿನಲ್ಲಿ ನಾವು ಮರೆತಿದ್ದೇವೆ. ಧರ್ಮಗುರು ಕೂಡ ಸಾಮಾನ್ಯರು ಮಾಡುವ ಸರಿ, ತಪ್ಪುಗಳನ್ನು ಮಾಡುತ್ತಿರುತ್ತಾನೆ. ಪರಮ ಅಧಿಕಾರವಿರುವಂತೆ ಕಾಣುವ ಈತನಿಗೂ ಮಠೀಯ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿರುತ್ತವೆ. ಇವನ ಕುರ್ಚಿಯೂ ಅಲುಗಾಡುತ್ತಿರುತ್ತದೆ. ಧಾರ್ಮಿಕ ಸಂಸ್ಥೆಗಳಿಗೆ ಹರಿದು ಬರುವ ಹಣದ ವಾರಸುದಾರರಿಂದಾಗಿ ಅವು ಅಧಿಕಾರದ ತಿಕ್ಕಾಟದ ರಣರಂಗಗಳಾಗತೊಡಗುತ್ತವೆ.

ಈ ನಡುವೆ ಎಲ್ಲ ಹುಲುಮಾನವರಂತೆ ಧರ್ಮಗುರುವಿಗೆ ಕೂಡ ವಾಂಛಲ್ಯಗಳಿರುತ್ತವೆ; ಅದುಮಿಟ್ಟ ಪ್ರೇಮ, ಕಾಮಗಳು ಸ್ಫೋಟಗೊಳ್ಳುತ್ತಿರುತ್ತವೆ. ಅವು ಇನ್ನೊಬ್ಬರ ಬದುಕಿಗೆ ಧಕ್ಕೆ ತಂದಾಗ ಮಾತ್ರ ಅವಕ್ಕೂ ಸಮಾಜಕ್ಕೂ ಸಂಬಂಧವಿರಬಲ್ಲದೇ ಹೊರತು, ಸ್ವಾಮೀಜಿಯೊಬ್ಬ ಜಿತೇಂದ್ರಿಯನಾಗಿರಲೇಬೇಕು ಎಂದು ಇತರರು ಕಿರುಚುವುದು ಬರ್ಬರವಾಗಿರಬಲ್ಲದು.

ಧರ್ಮಗುರುಗಳ, ಸ್ವಾಮಿಗಳ ಲೋಕದ ಸಂಕೀರ್ಣತೆ ಹೆಚ್ಚು ನನ್ನ ಅರಿವಿಗೆ ಬರತೊಡಗಿದ್ದು ನನ್ನ ಕಾದಂಬರಿ ‘ಕಾಮನ ಹುಣ್ಣಿಮೆ’ಯಲ್ಲಿ ಸ್ವಾಮೀಜಿಯ ಪಾತ್ರವೊಂದು ತಂತಾನೇ ಸೃಷ್ಟಿಯಾದಾಗ; ಏಳೆಂಟು ವರ್ಷ ಕಾಲ ಬರೆದ ಈ ಕಾದಂಬರಿಯೊಳಕ್ಕೆ ಯಾವುದೋ ಗಳಿಗೆಯಲ್ಲಿ ಸ್ವಾಮೀಜಿಯ ಪಾತ್ರ ಪ್ರವೇಶಿಸಿತು. ಕಾದಂಬರಿ ಬರೆಯುತ್ತಾ ಹೋದಂತೆ ಸ್ವಾಮೀಜಿಯ ಪಾತ್ರ ನನ್ನ ಪ್ರಿಯ ಪಾತ್ರಗಳಲ್ಲೊಂದಾಯಿತು. ಸ್ವಾಮೀಜಿಯೊಬ್ಬ ನಮ್ಮಂತೆಯೇ ಸರಿ, ತಪ್ಪು ಮಾಡುವ ವ್ಯಕ್ತಿ; ಅಥವಾ ನಮ್ಮಂತೆಯೇ ಸೋಲಬಲ್ಲ, ದಿಟ್ಟನಾಗಿ ನಿಲ್ಲಬಲ್ಲ ವ್ಯಕ್ತಿ ಎಂಬ ಸತ್ಯವನ್ನು ಬರವಣಿಗೆಯ ಅಪ್ರಜ್ಞಾಪೂರ್ವಕ ಪ್ರಕ್ರಿಯೆಯೇ ನನಗೆ ಹೇಳಿಕೊಡತೊಡಗಿತು.

ಆದರೂ ಧರ್ಮದೊಳಗೆ ಸೆರೆಯಾದವರ ಅದುಮಿಟ್ಟ ವಾಂಛಲ್ಯಗಳ ಲೋಕ ನನಗೆ ಇನ್ನಷ್ಟು ಚೆನ್ನಾಗಿ ಅರ್ಥವಾಗತೊಡಗಿದ್ದು ಈಚೆಗೆ ರೂಸೋನ ನಿವೇದನೆಗಳನ್ನು ಓದಿದಾಗ; ಅಥವಾ ‘ಸ್ಕಾರ್ಲೆಟ್ ಲೆಟರ್’ ಕಾದಂಬರಿಯ ಧರ್ಮಗುರುವಿನ ತೊಳಲಾಟ ನೆನಪಾದಾಗ. ಎಷ್ಟೋ ಸಲ ನಾವು ಕಣ್ಣಾರೆ ಕಂಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವ ನಿಜಜೀವನದ ವ್ಯಕ್ತಿಗಳು ನಮ್ಮ ಬರವಣಿಗೆಯ ಪ್ರಕ್ರಿಯೆಯಲ್ಲಿ ಅಥವಾ ಮತ್ತೊಬ್ಬರ ಬರವಣಿಗೆಯಲ್ಲಿ ನಮಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗತೊಡಗುತ್ತಾರೆ. ಕಾರಣ, ನಾವು ಆಳವಾಗಿ ತೊಡಗಿ ಮಾಡುವ ಓದು, ಬರವಣಿಗೆಗಳು ಲೋಕದ ಎಲ್ಲ ಬಗೆಯ ಪಾತ್ರಗಳನ್ನು ಗಾಢ ಅನುಕಂಪದಿಂದ ಅರ್ಥ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ.

ಆದರೆ ತೆರೆಯುಗದ ವಾಚಾಳಿ ಸಮಾಜದ ಚೀರಾಟದಲ್ಲಿ ಇತರರನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ಕ್ಷಿಪ್ರವಾಗಿ ಕಣ್ಮರೆಯಾಗತೊಡಗಿದೆ; ವರ್ಷಗಟ್ಟಲೆ ಧ್ಯಾನಿಸಿ ಬರೆದ ಸಾಹಿತ್ಯ ಕೃತಿಗಳ ಮೂಲಕ ನಮ್ಮ ಸುತ್ತಣ ಗಂಡು, ಹೆಣ್ಣುಗಳ ಸಂಕೀರ್ಣ ಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಮಾಯವಾಗತೊಡಗಿದೆ; ಚಕಚಕ ಬೆರಳಿನಾಟದ ಮೊಬೈಲ್ ಸ್ಕ್ರೀನ್‌ನಲ್ಲಿ ಕೂಡ ರೂಸೋ ನಿವೇದನೆ, ‘ಸ್ಕಾರ್ಲೆಟ್ ಲೆಟರ್’ ಕಾದಂಬರಿ ಎಲ್ಲವೂ ಸಿಗುತ್ತವೆ. ಆದರೆ ಅವನ್ನು ಓದಲಾಗದಂಥ ಧಾವಂತವನ್ನು ತೆರೆಯ ಮೇಲಿನ ಇನ್ನಿತರ ‘ಸ್ಟೋರಿ’ಗಳು ಸೃಷ್ಟಿಸುತ್ತಿರುತ್ತವೆ. ಆದ್ದರಿಂದಲೇ ಸ್ವಾಮೀಜಿಯೊಬ್ಬನ ಬ್ರೇಕಿಂಗ್ ಸ್ಟೋರಿಯನ್ನು ಚೀರುವವನ ಜೊತೆಗೆ ನೋಡುಗರ ಕೊರಳು, ಬೆರಳುಗಳೂ ಅವರಿಗೆ ಅರಿವಿಲ್ಲದೆಯೇ ಸೇರಿಕೊಳ್ಳತೊಡಗುತ್ತವೆ. ಇಂಥ ಅರ್ಥಹೀನ ಧಾವಂತದಲ್ಲಿ ಸುತ್ತಣ ಜನರಿರಲಿ, ಸ್ವತಃ ನಾವೇ ಏಕೆ ಹೀಗೆ ರಕ್ತದೊತ್ತಡ ಏರಿದವರಂತೆ ಏನನ್ನೋ ಬಡಬಡಿಸುತ್ತಿದ್ದೇವೆ, ಬರೆಯುತ್ತಿದ್ದೇವೆ ಎಂಬುದು ಕೂಡ ನಮಗೆ ಅರ್ಥವಾಗುವುದಿಲ್ಲ. ಇನ್ನು ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಅಥವಾ ‘ಸ್ಕಾರ್ಲೆಟ್ ಲೆಟರ್’ ಥರದ ಸಾಹಿತ್ಯ ಕೃತಿಗಳ ಮೂಲಕ ಮೈಮನಗಳ ಕಷ್ಟ ಸುಖಗಳನ್ನು ಅರಿಯಬಲ್ಲ ಗಾಢ ಅನುಕಂಪ ಎಲ್ಲಿಂದ ತಾನೇ ಹುಟ್ಟೀತು!

https://natarajhuliyar.com

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X