ಅಬುಧಾಬಿಯಲ್ಲಿ SKSSF ಕರ್ನಾಟಕ ಸಮಿತಿ ವತಿಯಿಂದ 5ನೇ ರಕ್ತದಾನ ಶಿಬಿರ

ಅಬುಧಾಬಿ (ಯುಎಇ): ಎಸ್ಕೆಎಸೆಸ್ಸೆಫ್ ಅಬುಧಾಬಿ ಕರ್ನಾಟಕ ಘಟಕದ ಆಶ್ರಯದಲ್ಲಿ ಐದನೇ ಬಾರಿಗೆ ಆಯೋಜಿಸಲಾದ ಸಾರ್ವಜನಿಕ ರಕ್ತದಾನ ಶಿಬಿರ ಮೇ.17ರಂದು ಅಬುಧಾಬಿಯ ಖಾಲಿದಿಯ್ಯದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್ನಲ್ಲಿ ನಡೆಯಿತು.
ರಕ್ತದಾನ ಶಿಬಿರದ ಮುಖ್ಯ ಸಂಯೋಜಕ ಮುನೀರ್ ಬೆಳ್ಳಾರೆ ಅವರ ಅನುಪಸ್ಥಿತಿಯಲ್ಲಿ ಸಹ ಸಂಯೋಜಕ ಬಶೀರ್ ಕೊಡ್ಲಿಪೇಟೆ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು. ಶಂಸುಲ್ ಉಲಮಾರ ಹೆಸರಿನಲ್ಲಿ ಫಾತಿಹಾ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಎಸ್ಕೆಎಸೆಸ್ಸೆಫ್ ಅಬುಧಾಬಿ ಕರ್ನಾಟಕ ಸಮಿತಿಯ ಹಿರಿಯ ನಾಯಕ ಶಾಫಿ ಹಾಜಿ ಪೆರುವಾಯಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಅಧಿಕೃತ ಚಾಲನೆ ನೀಡಿದರು.
ಸುಮಾರು 56 ಮಂದಿ ರಕ್ತದಾನಕ್ಕೆ ನೋಂದಾಯಿಸಿ, ನಾಲ್ಕು ಗಂಟೆಗಳ ಕಾಲ ನಡೆದ ಶಿಬಿರದಲ್ಲಿ ಅನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಅನಸ್ ಕರಾಯ ಅವರು ಸಿಂಗಲ್ ಡೋನರ್ ಪ್ಲೇಟ್ಲೆಟ್ ದಾನ ಮಾಡಿ ವಿಶೇಷ ಗಮನ ಸೆಳೆದರು.
ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ :
ಸಮಾರೋಪ ಸಮಾರಂಭವು SKSSF ಅಬುಧಾಬಿ ಕರ್ನಾಟಕ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಮುಂಡೋಳೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಹಾಫಿಝ್ ಝೈನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಸಂಘಟನಾ ಕೋಶಾಧಿಕಾರಿ, ಶಿಬಿರ ಸಹ ಸಂಯೋಜಕರಾದ ಬಶೀರ್ ಕೊಡ್ಲಿಪೇಟೆ ಶಿಬಿರದ ಮಹತ್ವ ವಿವರಿಸಿ, SKSSFನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಅಬೂಬಕ್ಕರ್ ಮುಂಡೋಳೆ ಅವರು ರಕ್ತದಾನದ ಮಹತ್ವವನ್ನು ವಿವರಿಸಿ, ಯುಎಇಯಲ್ಲಿರುವ ಕನ್ನಡಿಗರ ಸಮಾಜಮುಖಿ ಸೇವೆಗಳನ್ನು ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಿನ್ನೆಸ್ ದಾಖಲೆ ಪುರಸ್ಕೃತ ಸಮಾಜಸೇವಕ ಡಾ.ಅಬ್ದುಲ್ ಆರಿಸ್ ಪುತ್ತಿಲ್ ಮಾತನಾಡಿ, ಒಂದು ಜೀವ ಉಳಿಸುವ ಕಾರ್ಯಕ್ಕಿಂತ ಶ್ರೇಷ್ಠವಾದ ಸೇವೆ ಮತ್ತೊಂದಿಲ್ಲ. SKSSF ಆಯೋಜಿಸಿರುವ ಈ ರಕ್ತದಾನ ಶಿಬಿರ ಶ್ಲಾಘನೀಯವಾಗಿದ್ದು, ಮುಂದಿನ ಸಮಾಜಮುಖಿ ಕಾರ್ಯಗಳಿಗೂ ನನ್ನ ಸಂಪೂರ್ಣ ಸಹಕಾರವಿರಲಿದೆ ಎಂದು ಹೇಳಿದರು.
SKSSFನ ಶಾರ್ಜಾ ಕರ್ನಾಟಕ ಸಮಿತಿ ಅಧ್ಯಕ್ಷ ಶಂಸುದ್ದೀನ್ ಹಾಜಿ ಸೂರಲ್ಪಾಡಿ, ಉಪಾಧ್ಯಕ್ಷ ರಫೀಕ್ ಸುರತ್ಕಲ್, ಯಹ್ಯಾ ಕೊಡ್ಲಿಪೇಟೆ, ಅಲ್ ಸಾಹಿಬ್ ಮಾಸ್ತಿಕುಂಡ್, ಇಬ್ರಾಹಿಂ ಆತೂರು ಸೇರಿದಂತೆ ಹಲವರು ಶಿಬಿರವನ್ನು ಪ್ರಶಂಸಿಸಿ ಸಂಘಟನೆಯ ಸೇವಾ ಚಟುವಟಿಕೆಗಳಿಗೆ ಶುಭ ಹಾರೈಸಿದರು.
ಈ ವೇಳೆ ಸಂಘಟನಾ ನೇತಾರರಾದ ಹಸನ್ ದಾರಿಮಿ ಕಬಕ, ಹಾರಿಸ್ ಮಖ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ರಕ್ತದಾನ ಶಿಬಿರದ ಉಸ್ತುವಾರಿ ಹಂಝ ನಾಳ, ಅಬುಧಾಬಿ SKSSF ಸಂಘಟನಾ ಕಾರ್ಯದರ್ಶಿ ತ್ವಾಹ ಉಪ್ಪಿನಂಗಡಿ, ಅನಸ್ ಕರಾಯ, ಹಿದಾಯತ್ತ್ ರಹ್ಮಾನ್ ಆತೂರು, ಶಾಫಿ ಕಿನ್ಯ, ಸಫ್ವಾನ್ ಕೊಡಾಜೆ, ಸಾದಿಕ್ ಬೆಳ್ಳಾರೆ, ಉಮರ್ ಪಾಂಡವರಕಲ್ಲು, ಹಫೀಲ್ ಆತೂರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಹಸನ್ ದಾರಿಮಿ ಕಬಕ ದುಆ ನೆರವೇರಿಸಿದರು. SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಝೈನ್ ಸಖಾಫಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿ, ಶಿಬಿರದ ಉಸ್ತುವಾರಿ ಹಂಝ ನಾಳ ವಂದಿಸಿದರು.
ರಕ್ತದಾನ ಪ್ರಕ್ರಿಯೆಯಲ್ಲಿ ಸೇವಾ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸಂಪೂರ್ಣ ಸಹಕಾರ ನೀಡಿದರು.






