Dubai : ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ ಜೂ.14 ರವಿವಾರ ದುಬೈಯ ಅಲ್ ಘಝಲ್ ಹೋಟೆಲ್ನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿ.ಕೆ. ಯೂಸುಫ್ ಅವರು ವಹಿಸಿದ್ದರು. ಬಿಸಿಎಫ್ ಸಲಹೆಗಾರರಾದ ಗಡಿಯಾರ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಗಡಿಯಾರ್, ಹಾಗೂ ನಫೀಸ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಅಬೂಸಾಲಿಹ್ ಅವರು ಉಪಸ್ಥಿತರಿದ್ದರು.
ಸಭೆಯ ಕಾರ್ಯನಿರ್ವಹಣೆಯನ್ನು ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಪ್ರೊ. ಕಾಪು ಮುಹಮ್ಮದ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿಸಿಎಫ್ ಉಪಾಧ್ಯಕ್ಷರಾದ ಎಂ.ಇ. ಮೂಳೂರು, ಅಫೀಕ್ ಹುಸೈನ್, ಅಮೀರುದ್ದೀನ್ ಎಸ್.ಐ. ಸಹಿತ ಇತರ ಬಹುತೇಕ ಎಲ್ಲ ಪದಾಧಿಕಾರಿಗಳು, ಬಿಸಿಎಫ್ ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ಅಬ್ದುಲ್ ಲತೀಫ್ ಪುತ್ತೂರು ಅವರ ಖಿರಾಅತ್ನೊಂದಿಗೆ ಸಭೆ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್ ಅವರು ಬಿಸಿಎಫ್ ಪದಾಧಿಕಾರಿಗಳನ್ನು ಪರಿಚಯಿಸುತ್ತಾ ಸ್ವಾಗತಿಸಿದರು.
ಬಿಸಿಎಫ್ ನ ಕಾರ್ಯಕ್ರಮ, ಸೇವೆ, ಬೆಳವಣಿಗೆ, ಪರಿಣಾಮ ಹಾಗೂ ಅದರಲ್ಲಿ ತಾವು ನೀಡಿದ ಪಾತ್ರಗಳ ಬಗ್ಗೆ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಮಂಡಿಸಿದರು.
ಅಧ್ಯಕ್ಷರಾದ ಡಾ. ಬಿ.ಕೆ. ಯೂಸುಫ್ ಅವರು ಕಳೆದ 28 ವರ್ಷಗಳಿಂದ ಬಿಸಿಎಫ್ ನಡೆದು ಬಂದ ದಾರಿ, ಸಾಧನೆ ಹಾಗೂ ಮುಂದೆ ನಿರೀಕ್ಷಿಸಲಾಗಿರುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತಾ, ಒಗ್ಗಟ್ಟು, ಶಿಸ್ತು, ಕ್ರಿಯಾಶೀಲತೆ ಮತ್ತು ಸಂವಹನಶೀಲತೆಯಲ್ಲಿ ಬಿಸಿಎಫ್ ನಿರ್ವಹಣಾ ಬಳಗವು ತೋರಿಸುತ್ತಿರುವ ನಿಷ್ಠೆಯನ್ನು ತಿಳಿಸಿದರು.
ಬಿಸಿಎಫ್ ಮುಂದೆ ಇನ್ನಷ್ಟು ಬೃಹತ್ ಮತ್ತು ವ್ಯಾಪಕ ರೀತಿಯಲ್ಲಿ ಸಮಾಜಸೇವಾ ಕಾರ್ಯವನ್ನು ನೀಡುವ ಯೋಜನೆಯನ್ನು ಹೊಂದಿದ್ದು, ಮುಖ್ಯವಾಗಿ ಬಿಸಿಎಫ್ ಸ್ಥಾಪಕ ಪೋಷಕರಾದ ತುಂಬೆ ಗ್ರೂಪ್ ಹಾಗೂ ಗಲ್ಫ್ ಮೆಡಿಕಲ್ ಕಾಲೇಜು - ಅಜ್ಮಾನ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಹಿದೀನ್ ಅವರು ಬಿಸಿಎಫ್ ಬಗ್ಗೆ ಇಟ್ಟಿರುವ ಅಭಿಮಾನ ಮತ್ತು ಬಿಸಿಎಫ್ನ ಮುಂದಿನ ಬೃಹತ್ ಯೋಜನೆಗಳ ಬಗ್ಗೆ ಅವರು ಹೊಂದಿರುವ ಪರಿಕಲ್ಪನೆಗಳು ಅಲ್ಲಾಹುವಿನ ದಯೆಯಿಂದ ಸಾಕಾರಗೊಂಡಲ್ಲಿ, ಬಿಸಿಎಫ್ನ ಸೇವಾ ಕಾರ್ಯದ ಪರಿಧಿ ಮತ್ತಷ್ಟು ಅಗಾಧವಾಗಿ ಬೆಳೆಯುವ ಭರವಸೆ ಇದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಬಿಸಿಎಫ್ನ ಕಾರ್ಯವೈಖರಿ ಇನ್ನಷ್ಟು ಉತ್ತಮ ಮಾದರಿಯಾಗಿ ಬೆಳೆಯುವ ಅಗತ್ಯವಿರುವುದರಿಂದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ, ಶಿಸ್ತುಬದ್ಧರಾಗಿ, ಒಗ್ಗಟ್ಟಿನಿಂದ ಬಿಸಿಎಫ್ಗಾಗಿ ಸೇವೆ ಸಲ್ಲಿಸುವಂತೆ ಕರೆನೀಡಿದರು.
ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ ತಮ್ಮ ಭಾಷಣದಲ್ಲಿ ಬಿಸಿಎಫ್ನ ಪ್ರಾಮುಖ್ಯತೆ, ಅದು ಸಮಾಜಕ್ಕೆ ನೀಡುತ್ತಿರುವ ವಿವಿಧ ಸೇವಾ ಕಾರ್ಯಗಳು ಹಾಗೂ ಅದರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಿಸ್ತು ಮತ್ತು ನಿಷ್ಠೆಯ ಬಗ್ಗೆ ಪ್ರಸ್ತಾಪಿಸಿದರು. ಬಿಸಿಎಫ್ನಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವಾ ಕಾರ್ಯಗಳನ್ನು ವಿಸ್ತರಿಸಿ ಮುಂದುವರೆಯುವ ಶಕ್ತಿ ಇದೆ ಎಂದ ಅವರು, ಆ ಉದ್ದೇಶ ಸಾಧನೆಗಾಗಿ ಬಿಸಿಎಫ್ ತಂಡವು ತನ್ನ ಕ್ರಿಯಾಶೀಲತೆ, ಶಿಸ್ತು ಹಾಗೂ ವ್ಯವಸ್ಥೆಗಳನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಗೌರವ ಸಲಹೆಗಾರರಾದ ಅಬೂಸಾಲಿಹ್ ಅವರು ಕೂಡ ಶುಭ ಸಂದೇಶವನ್ನು ನೀಡಿದರು.
ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರೊ. ಕಾಪು ಮುಹಮ್ಮದ್ ಅವರು ಬಿಸಿಎಫ್ನ ಕಳೆದ 2 ವರ್ಷದ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸುತ್ತಾ, ಸಂಸ್ಥೆಯ ಸಾಧನೆಗಳು, ಸಮಾಜಕ್ಕೆ ಅರ್ಪಿಸಿದ ಸೇವೆಯ ವಿವರಗಳು ಹಾಗೂ ಬಿಸಿಎಫ್ ನಡೆದು ಬಂದ ದಾರಿಯ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದರು.
ಬಿಸಿಎಫ್ ಸಾಧಿಸಿ ತೋರಿಸಿದ ಪ್ರತಿಯೊಂದು ಮೈಲಿಗಲ್ಲುಗಳ ಮೂಲಕ ಸಂಸ್ಥೆಯ ಸ್ಪಷ್ಟ ಚಿತ್ರಣವನ್ನು ನೀಡಿದರು. ಬಿಸಿಎಫ್ ಸ್ಥಾಪಕ ಪೋಷಕರಾದ ಡಾ. ತುಂಬೆ ಮೊಹಿದೀನ್ ಅವರು ಬಿಸಿಎಫ್ ಮೇಲೆ ಇಟ್ಟಿರುವ ಅಭಿಮಾನ ಮತ್ತು ಭರವಸೆಯನ್ನು ಪ್ರಸ್ತಾಪಿಸುತ್ತಾ, ಬಿಸಿಎಫ್ ಬಗ್ಗೆ ಅವರು ಹೊಂದಿರುವ ಪರಿಕಲ್ಪನೆಗೆ ಧಕ್ಕೆಯಾಗದಂತೆ ನಾವು ಸುವ್ಯವಸ್ಥೆ ಮತ್ತು ಕ್ರಿಯಾಶೀಲತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಎಂ.ಇ. ಮೂಳೂರು ಅವರು ತಮ್ಮ ಭಾಷಣದಲ್ಲಿ ಬಿಸಿಎಫ್ನ ಯಶಸ್ಸಿನ ಗುಟ್ಟು ಅದರ ನಾಯಕರಾದ ಡಾ. ತುಂಬೆ ಮೊಹಿದೀನ್ ಅವರು ಬಿಸಿಎಫ್ ಮೇಲಿಟ್ಟಿರುವ ಅಭಿಮಾನ ಹಾಗೂ ಡಾ. ಬಿ.ಕೆ. ಯೂಸುಫ್ ಅವರ ನೇತೃತ್ವದಲ್ಲಿ ಬಿಸಿಎಫ್ ಗೌರವ ಸಲಹೆಗಾರರು ಮತ್ತು ಕಾರ್ಯಕಾರಿ ಸಮಿತಿಯಲ್ಲಿ ಇರುವ ಐಕ್ಯತೆ ಹಾಗೂ ವ್ಯಾವಹಾರಿಕ ಕುಶಲತೆಯಾಗಿದೆ ಎಂದು ಹೇಳಿದರು.
“ಪ್ರತಿ ಕತ್ತಲೆಯ ಹಿಂದೆ ಬೆಳಕು ಖಂಡಿತ ಇದೆ” ಎಂಬ ಪವಿತ್ರ ಕುರ್ಆನ್ ವಚನವನ್ನು ಉಲ್ಲೇಖಿಸಿದ ಅವರು, ವೈಯಕ್ತಿಕವಾಗಿ ಎಲ್ಲರಿಗೂ ಕಷ್ಟಗಳು ಬರುವುದು ಸಹಜ. ಆದರೆ ಅದರ ನಂತರ ಅಲ್ಲಾಹುವಿನ ದಯೆ ಖಂಡಿತ ಇರುತ್ತದೆ. ಆದ್ದರಿಂದ ಬಿಸಿಎಫ್ ಮುಖಾಂತರ ನಾವು ಮಾಡುತ್ತಿರುವ ಸೇವಾ ಕಾರ್ಯವನ್ನು ನಿರಂತರವಾಗಿ ಮುಂದುವರಿಸೋಣ ಎಂದು ಕರೆ ನೀಡಿದರು.
ಇನ್ನೋರ್ವ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ ಅವರು ಕಾರಣವಶಾತ್ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಬಿಸಿಎಫ್ನ ವಿಶೇಷತೆಗಳ ಬಗ್ಗೆ ವಿವರಿಸುತ್ತಾ ಸರ್ವರಿಗೂ ಶುಭ ಕೋರಿದರು.
ಅವರೊಂದಿಗೆ ಇದ್ದ ಬಿಸಿಎಫ್ ಖಜಾಂಚಿ ಅಸ್ಲಾಂ ಕಾರಾಜೆ ಅವರೂ ತಮ್ಮ ಹಾರ್ದಿಕ ಶುಭಾಶಯಗಳನ್ನು ಬಿಸಿಎಫ್ಗೆ ಕೋರಿದರು.
ಬಿಸಿಎಫ್ ಮಹಿಳಾ ಬಳಗದ ಅಧ್ಯಕ್ಷರಾದ ಮುಮ್ತಾಜ್ ಕಾಪು ಅವರು ಮಾತನಾಡುತ್ತಾ, ಬಿಸಿಎಫ್ನ ಕಾರ್ಯಚಟುವಟಿಕೆಗಳ ಬಗ್ಗೆ ತಾವು ಅನುಭವಿಸಿದ ಸಂತೋಷದ ಘಟನೆಗಳನ್ನು ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಮಾಜಸೇವೆಯನ್ನು ಬಿಸಿಎಫ್ ಮೂಲಕ ಮಾಡುವ ಆಶಯವನ್ನು ವ್ಯಕ್ತಪಡಿಸಿದರು.
ಅಫೀಕ್ ಹುಸೈನ್, ಇಕ್ಬಾಲ್ ಮೇಫ, ನಿಯಾಝ್, ಸಮದ್ ಬೀರಾಲಿ, ಅಬ್ದುಲ್ ಲತೀಫ್ ಪುತ್ತೂರು ಸೇರಿದಂತೆ ಹಲವಾರು ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) -2026ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ
• ಡಾ. ತುಂಬೆ ಮೊಹಿದೀನ್ - ಸ್ಥಾಪಕ ಪೋಷಕರು
• ಮೊಯ್ದೀನ್ ಬಾವ - ಪೋಷಕರು (ಮಂಗಳೂರು)
• ಇಬ್ರಾಹಿಂ ಗಡಿಯಾರ್ - ಸ್ಥಾಪಕ ಸಲಹೆಗಾರರು
• ಅಬೂಸಾಲಿಹ್ - ಸ್ಥಾಪಕ ಸಲಹೆಗಾರರು
1. ಡಾ. ಬಿ.ಕೆ. ಯೂಸುಫ್ - ಅಧ್ಯಕ್ಷರು
2. ಎಂ.ಇ. ಮೂಳೂರು - ಉಪಾಧ್ಯಕ್ಷರು
3. ಅಬ್ದುಲ್ ಲತೀಫ್ ಮುಲ್ಕಿ - ಉಪಾಧ್ಯಕ್ಷರು
4. ಅಮೀರುದ್ದೀನ್ ಎಸ್.ಐ. - ಉಪಾಧ್ಯಕ್ಷರು
5. ಅಫೀಕ್ ಹುಸೈನ್ - ಉಪಾಧ್ಯಕ್ಷರು
6. ಅಬ್ದುಲ್ ರಹಿಮಾನ್ - ಉಪಾಧ್ಯಕ್ಷರು
7. ಡಾ. ಕಾಪು ಮುಹಮ್ಮದ್ - ಪ್ರಧಾನ ಕಾರ್ಯದರ್ಶಿ
8. ಯಾಕೂಬ್ ದೇವ - ಜೊತೆ ಕಾರ್ಯದರ್ಶಿ
9. ಅಬ್ದುಲ್ ಲತೀಫ್ ತಿಂಗಳಾಡಿ ಪುತ್ತೂರು - ಜೊತೆ ಕಾರ್ಯದರ್ಶಿ
10. ಮೊಹಮ್ಮದ್ ಅಸ್ಲಾಂ ಕಾರಾಜೆ - ಖಜಾಂಚಿ
11. ಸುಲೈಮಾನ್ ಮೂಳೂರು - ಲೆಕ್ಕ ಪರಿಶೋಧಕರು
12. ಇಕ್ಬಾಲ್ ಮೇಫ - ಸಂಚಾಲಕರು
13. ಸಮದ್ ಬೀರಾಲಿ – ಸಹ. ಸಂಚಾಲಕರು
14. ಅಶ್ರಫ್ ಸತ್ತಿಕಲ್ - ಸಂಯೋಜಕರು SHARJAH/Ajman/UAQ/RAK/FUJ
15. ಉಸ್ಮಾನ್ ಮೂಳೂರು - ಕಾರ್ಯಕಾರಿ ಸದಸ್ಯರು
16. ರಫೀಕ್ ಮುಲ್ಕಿ - ಕಾರ್ಯಕಾರಿ ಸದಸ್ಯರು
17. ರಫೀಕ್ ಸತ್ತಿಕಲ್ - ಕಾರ್ಯಕಾರಿ ಸದಸ್ಯರು
18. ಹುಸೈನ್ ಸತ್ತಿಕಲ್ - ಕಾರ್ಯಕಾರಿ ಸದಸ್ಯರು
19. ರಫೀಕ್ ಗುರಪುರ - ಕಾರ್ಯಕಾರಿ ಸದಸ್ಯರು
20. ಅಮೀರ್ ಹಳೆಯಂಗಡಿ - ಕಾರ್ಯಕಾರಿ ಸದಸ್ಯರು
21. ನಿಯಾಝ್ - ಮಾಧ್ಯಮ ಮತ್ತು ಡಿಜಿಟಲ್ ಸಂಯೋಜಕರು
2026ನೇ ಸಾಲಿನ ಮಹಿಳಾ ವಿಭಾಗದ ಸಮಿತಿ
1. ಮುಮ್ತಾಜ್ - ಅಧ್ಯಕ್ಷರು / ನಗದು ನಿರ್ವಹಣಾಧಿಕಾರಿ
2. ಶನಾಝ್ ಸುಲೈಮಾನ್ - ಉಪಾಧ್ಯಕ್ಷರು
3. ಆಸಿಯಾ ಎಂ.ಇ. - ಕಾರ್ಯದರ್ಶಿ
4. ಝೈನಬ್ ಉಸ್ಮಾನ್ ಮೂಳೂರು - ಜಂಟಿ ಕಾರ್ಯದರ್ಶಿ
5. ಆಯಿಷಾ ಅಮೀರ್ - ಖಜಾಂಚಿ
6. ಫರ್ಝಾನಾ ಲತೀಫ್ - ಕಾರ್ಯಕಾರಿ ಸದಸ್ಯರು
7. ಖೈರುನ್ನಿಸಾ - ಕಾರ್ಯಕಾರಿ ಸದಸ್ಯರು
8. ಆಶೀನ್ ಕಾಪು - ಕಾರ್ಯಕಾರಿ ಸದಸ್ಯರು
9. ಹಸೀನಾ ಅಬ್ದುಲ್ ರಹಿಮಾನ್ - ಕಾರ್ಯಕಾರಿ ಸದಸ್ಯರು
ಉಪಾಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾದ ಯುವ ಉದ್ಯಮಿ, ವೈಟ್ ಎಲೆಕ್ಟ್ರಾನಿಕ್ಸ್ ಎಲ್ಎಲ್ಸಿ ಸಂಸ್ಥೆಯ ಸಹ-ಸಂಸ್ಥಾಪಕ ಅಬ್ದುಲ್ ರಹಿಮಾನ್, ತಮ್ಮ ಭಾಷಣದಲ್ಲಿ ಬಿಸಿಎಫ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲಾಹು ಯಾರಿಗೂ ಹೊರಲು ಸಾಧ್ಯವಾಗದ ಜವಾಬ್ದಾರಿಯನ್ನು ಕೊಡುವುದಿಲ್ಲ ಎಂಬ ಪವಿತ್ರ ಕುರ್ಆನ್ ವಚನವನ್ನು ಉಲ್ಲೇಖಿಸುತ್ತಾ, ಬಿಸಿಎಫ್ನ ಮುಂದಿನ ಕಾರ್ಯಗಳಲ್ಲಿ ತಾವು ಸಾಧ್ಯವಾದಷ್ಟು ಹೆಚ್ಚಿನ ರೀತಿಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.
ಆಗಸ್ಟ್ 16ರಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿರುವ ಬಿಸಿಎಫ್ ಸ್ಕಾಲರ್ಶಿಪ್ ಮೀಟ್-2026 ಕುರಿತು ಅದರ ಅಧ್ಯಕ್ಷರಾದ ಎಂ.ಇ. ಮೂಳೂರು ಸಂಕ್ಷಿಪ್ತ ವಿವರ ನೀಡಿದರು. ಈ ಕಾರ್ಯಕ್ರಮಕ್ಕೆ ಎಲ್ಲರನ್ನು ಮುಂಗಡವಾಗಿ ಆಹ್ವಾನಿಸುತ್ತಾ, ಎಲ್ಲರ ಸಹಕಾರವನ್ನು ಕೋರಿದರು.
ಅಫೀಕ್ ಹುಸೈನ್ ಅವರು ಧನ್ಯವಾದ ಸಲ್ಲಿಸಿದರು.






