Saudi Arabia | 20 ವರ್ಷಗಳ ಬಳಿಕ ಕೇರಳಂನ ಅಬ್ದುಲ್ ರಹೀಮ್ ಬಿಡುಗಡೆಗೆ ಆದೇಶ

ರಿಯಾದ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಫೆರೋಕ್ ಸಮೀಪದ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಬಿಡುಗಡೆಗೆ ಸಂಬಂಧಿಸಿದ ಅಧಿಕೃತ ಆದೇಶಕ್ಕೆ ಸೌದಿ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಅಬ್ದುಲ್ ರಹೀಮ್ ಕಾನೂನು ಸಹಾಯ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಈ ವಿಷಯವನ್ನು ತಿಳಿಸಿದ್ದು, ಅವರ Exit Visa ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಈಗ ವಲಸೆ ಸಂಬಂಧಿತ ಅಂತಿಮ ಕಾರ್ಯವಿಧಾನಗಳು ಮಾತ್ರ ಬಾಕಿ ಉಳಿದಿದ್ದು, ಅವು ಪೂರ್ಣಗೊಂಡ ತಕ್ಷಣ ಅವರು ಭಾರತಕ್ಕೆ ಮರಳಲಿದ್ದಾರೆ.
ಬಿಡುಗಡೆಯಾದ ಬಳಿಕ ರಹೀಮ್ ಅವರನ್ನು ಗಡೀಪಾರು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಭಾರತಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಹೀಮ್ ಅವರಿಗೆ ವಿಧಿಸಲಾಗಿದ್ದ 20 ವರ್ಷಗಳ ಜೈಲು ಶಿಕ್ಷೆ ಮೇ 19ರ ಮಧ್ಯರಾತ್ರಿ ಅಂತ್ಯಗೊಂಡಿತ್ತು. ಆದರೆ ಈದ್ ರಜೆಯ ಹಿನ್ನೆಲೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ವಿಳಂಬ ಉಂಟಾಗಿತ್ತು. ಬಳಿಕ ತುರ್ತು ಕಾನೂನು ಕ್ರಮಗಳ ಅಡಿಯಲ್ಲಿ ಬಿಡುಗಡೆ ಪ್ರಕ್ರಿಯೆಯನ್ನು ಸೌದಿ ಅಧಿಕಾರಿಗಳು ವೇಗಗೊಳಿಸಿದ್ದಾರೆ ಎನ್ನಲಾಗಿದೆ.
2006ರಲ್ಲಿ ತಮ್ಮ ಉದ್ಯೋಗದಾತರ 14 ವರ್ಷದ ವಿಶೇಷ ಚೇತನ ಮಗನ ಸಾವಿನ ಪ್ರಕರಣದಲ್ಲಿ ರಹೀಮ್ ಬಂಧಿತರಾಗಿದ್ದರು. ಮಗುವಿನ ಆರೈಕೆಯ ಜವಾಬ್ದಾರಿ ಅವರಿಗೇ ನೀಡಲಾಗಿತ್ತು. ಈ ಸಾವು ಅಪಘಾತದಿಂದ ಸಂಭವಿಸಿದೆ ಎಂದು ರಹೀಮ್ ವಾದಿಸಿದ್ದರೂ, ಉದ್ಯೋಗದಾತರ ವಾದಕ್ಕೆ ನ್ಯಾಯಾಂಗದಲ್ಲಿ ಹೆಚ್ಚಿನ ಮಾನ್ಯತೆ ದೊರಕಿತ್ತು.
ಈ ಪ್ರಕರಣದಲ್ಲಿ 2012ರಲ್ಲಿ ಸೌದಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಬಳಿಕ ಈ ಸಾವು ಉದ್ದೇಶಪೂರ್ವಕ ಕೃತ್ಯವಲ್ಲ, ಅಪಘಾತದ ಪರಿಣಾಮ ಎಂಬ ಅಂಶಕ್ಕೂ ನ್ಯಾಯಾಂಗದಲ್ಲಿ ಉಲ್ಲೇಖ ಸಿಕ್ಕಿತ್ತು.
2024ರಲ್ಲಿ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿತ್ತು. ಕೇರಳದ ವಲಸೆ ಸಮುದಾಯದ ನೇತೃತ್ವದಲ್ಲಿ ನಡೆದ ಜಾಗತಿಕ ಕ್ರೌಡ್ಫಂಡಿಂಗ್ ಅಭಿಯಾನದಲ್ಲಿ, ಸಂತ್ರಸ್ತ ಕುಟುಂಬ ಬೇಡಿಕೆ ಇಟ್ಟಿದ್ದ 15 ಮಿಲಿಯನ್ ಸೌದಿ ರಿಯಾಲ್ ಗಳಷ್ಟು ದಿಯಾ (ರಕ್ತದ ಹಣ) ಸಂಗ್ರಹಿಸಲಾಗಿತ್ತು. ಭಾರತೀಯ ಮೌಲ್ಯದಲ್ಲಿ ಇದು 34 ಕೋಟಿ ರೂಪಾಯಿಗೂ ಅಧಿಕವಾಗಿತ್ತು.
ಪರಿಹಾರದ ಮೊತ್ತ ಸ್ವೀಕರಿಸಿದ ಬಳಿಕ ಸಂತ್ರಸ್ತರ ಕುಟುಂಬ ಮರಣದಂಡನೆ ರದ್ದುಪಡಿಸಲು ಒಪ್ಪಿಕೊಂಡಿತ್ತು. ಅದರಂತೆ ಜುಲೈ 2024ರಲ್ಲಿ ಸೌದಿ ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸಿತ್ತು. ಆದರೆ 2025ರಲ್ಲಿ ರಿಯಾದ್ ಕ್ರಿಮಿನಲ್ ನ್ಯಾಯಾಲಯವು ಸಾರ್ವಜನಿಕ ಹಕ್ಕುಗಳ ಕಾಯ್ದೆಯಡಿಯಲ್ಲಿ ರಹೀಮ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
2006ರಲ್ಲಿ ಬಂಧನಕ್ಕೊಳಗಾದ ರಹೀಮ್ ಸುಮಾರು 20 ವರ್ಷಗಳ ಕಾಲ ಸೌದಿ ಜೈಲಿನಲ್ಲಿ ಕಳೆದಿದ್ದು, ಇದೀಗ ಅವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಸೌಜನ್ಯ: thehindu.com, keralakaumudi.com






