"ಉಮ್ರಾಗೆ ಬಂದು ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಆಗಲಿ"

ಝಕರಿಯಾ ಜೋಕಟ್ಟೆ
ದುಬೈ: ಉಮ್ರಾ ಯಾತ್ರೆಗೆ ಸೌದಿ ಅರೇಬಿಯಾಗೆ ಬಂದು ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಮೊದಲು ಸುರಕ್ಷಿತವಾಗಿ ವಾಪಾಸು ದೇಶಕ್ಕೆ ಕಲಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಸೌದಿಯ ಖ್ಯಾತ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
'ವಾರ್ತಾ ಭಾರತಿ' ಚಾನೆಲ್ ನಡೆಸಿದ 'Iran- Israel, America ಸಂಘರ್ಷ | ಗಲ್ಫ್ ದೇಶಗಳಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ ?' ಎಂಬ ಚರ್ಚಾ ವಿಷಯದಲ್ಲಿ ಅವರು, ಉಮ್ರಾಕ್ಕೆ ಬಂದ ಕನ್ನಡಿಗರು ವಿಮಾನ ಯಾನ ಸ್ಥಗಿತಗೊಂಡ ಕಾರಣ ಇಲ್ಲಿಯೇ ಸಿಲುಕಿಹಾಕಿಕೊಂಡಿದ್ದಾರೆ. ಅವರಿಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ನಾವೆಲ್ಲಾ ಸೇರಿಕೊಂಡು ಮಾಡುತ್ತಿದ್ದೇವೆ. ಜೊತೆಗೆ ನಮ್ಮ ರಾಯಭಾರಿ ಕಚೇರಿಯವರು ಕೂಡ ಸಹಕರಿಸುತ್ತಿದ್ದಾರೆ ಎಂದರು.
ಉಮ್ರಾಕ್ಕೆ ಬಂದ ಕನ್ನಡಿಗರಿಗೆ ಹೆಚ್ಚು ದಿನ ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಅವರಿಗೆ ಬೇಕಾದ ವೈದ್ಯಕೀಯ ಶುಶ್ರೂಷೆ ಮಾಡಿ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಮೊದಲು ಆಗಬೇಕು ಎಂದರು.
ಅಮೇರಿಕ, ಇಸ್ರೇಲ್ ಹಾಗು ಇರಾನ್ ಮಧ್ಯೆ ನಡೆಯುತ್ತಿರುವ ಸಂಘರ್ಷದಿಂದ ಸೌದಿಯಲ್ಲಿ ಯಾವುದೇ ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಇಲ್ಲಿನ ಸರಕಾರ, ಸೇನೆ ಎಲ್ಲ ರೀತಿಯಿಂದಲೂ ಜಾಗರೂಕರಾಗಿರುವುದರಿಂದ ಸಣ್ಣಪುಟ್ಟ ದಾಳಿ ಆದರೂ ಅದನ್ನು ಎಲ್ಲ ರೀತಿಯಿಂದಲೂ ನಿಭಾಯಿಸಲಾಗುತ್ತಿದೆ.
ಜಿದ್ದಾ ವಿಮಾನ ನಿಲ್ದಾಣ ಪುನರಾರಂಭಗೊಂಡಿದೆ. ದಮಾಮ್ ವಿಮಾನ ನಿಲ್ದಾಣ ನಾಳೆ ಆರಂಭವಾಗಲಿದೆ ಎಂಬ ಸುದ್ದಿ ಇದೆ. ಆದರೆ ಭಾರತದಲ್ಲಿ ಮಾಧ್ಯಮಗಳೇ ಇಲ್ಲಸಲ್ಲದ ಸುದ್ದಿ ಮಾಡಿ ಜನರಲ್ಲಿ ಭಯವನ್ನುಂಟು ಮಾಡುತ್ತಿದ್ದಾರೆ. ಕನ್ನಡಿಗರಿಗೆ ಹಾಗು ಭಾರತೀಯರಿಗೆ ಯಾವುದೇ ರೀತಿಯ ಸಮಸ್ಯೆಯಾದರೂ ಎಲ್ಲ ರೀತಿಯ ಸಹಾಯ, ಸಹಕಾರ ಕೊಡಲು ನಾವೆಲ್ಲಾ ಭಾರತೀಯರು ಸಂಘಟಿತರಾಗಿದ್ದೇವೆ ಎಂದರು.







