ದಸರಾ ಉದ್ಘಾಟನೆಗೆ ವಿರೋಧ | ಬಾನು ಮುಷ್ತಾಕ್ ಪ್ರತಿಕ್ರಿಯಿಸಿದ್ದೇನು?

ಬಾನು ಮುಷ್ತಾಕ್
ಹಾಸನ : ಮೈಸೂರು ದಸರಾ ಉದ್ಘಾಟನೆಗೆ ತಮ್ಮ ಹೆಸರು ಘೋಷಣೆಯಾದ ನಂತರ ವ್ಯಕ್ತವಾದ ವಿರೋಧಕ್ಕೆ ಸಂಬಂಧಿಸಿದಂತೆ ʼಬೂಕರ್ ಪ್ರಶಸ್ತಿʼ ವಿಜೇತ ಲೇಖಕಿ ಬಾನು ಮುಷ್ತಾಕ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈ ವಿಷಯದಲ್ಲಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಕೋಟ್ಯಾಂತರ ಕನ್ನಡಿಗರು ತೋರಿಸುತ್ತಿರುವ ಪ್ರೀತಿ, ಅಭಿಮಾನವೇ ಸಾಕು. ಒಬ್ಬರೂ ಇಬ್ಬರ ನೆಗೆಟಿವಿಟಿಗೆ ಪ್ರತಿಕ್ರಿಯೆ ಕೊಡಬೇಕಾದ ಅಗತ್ಯವಿಲ್ಲ. ರಾಜಕೀಯ ಮಾಡಬೇಕಾದ ವಿಷಯಕ್ಕೂ, ಮಾಡಬಾರದ ವಿಷಯಕ್ಕೂ ರಾಜಕಾರಣಿಗಳು ಜವಾಬ್ದಾರರಾಗಿರಬೇಕು" ಎಂದು ಹೇಳಿದರು.
ಕನ್ನಡವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸಿದ್ದೇನೆ :
“ಬೂಕರ್ ಪ್ರಶಸ್ತಿ ಸುಲಭವಾಗಿ ಸಿಗುವುದಿಲ್ಲ. ಅದನ್ನು ಅಗ್ಗವಾಗಿ ನೋಡಬೇಡಿ. ಕನ್ನಡವನ್ನು ನಾನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸಿದ್ದೇನೆ. ಅಲ್ಲಿಯ ಜನರು ಕನ್ನಡದ ಒಂದೊಂದು ಪುಟ ಓದಿ ಆಶ್ಚರ್ಯ ಪಡುತ್ತಾರೆ. ಇಷ್ಟು ಸಾಧನೆ ಮಾಡಿದ ನನಗೆ ಕೆಸರು ಎರಚಲು ಯಾರಿಗೂ ಹಕ್ಕಿಲ್ಲ” ಎಂದರು.
“ಕನ್ನಡವನ್ನು ನಾನು ದೇವತೆಯಾಗಿ ಮಾಡುವುದಲ್ಲ, ಬದುಕಿನ ಭಾಷೆಯಾಗಿ ಬಳಸಿದ್ದೇನೆ. ನನ್ನ ಮೂವರು ಹೆಣ್ಣುಮಕ್ಕಳನ್ನೂ ಕನ್ನಡ ಶಾಲೆಯಲ್ಲಿ ಓದಿಸಿದ್ದೇನೆ. ಕನ್ನಡದ ಜೊತೆಗಿನ ನನ್ನ ನಂಟು ಸಂದೇಹಾಸ್ಪದವಲ್ಲ” ಎಂದು ಹೇಳಿದರು.
ವಿರೋಧಕ್ಕೆ ತಿರುಗೇಟು: “2023ರ ಜನಸಾಹಿತ್ಯ ಸಮ್ಮೇಳನದಲ್ಲಿ ನಾನು ಹೇಳಿದ ಮಾತುಗಳನ್ನು ಕೆಲವರು ತಿರುಚಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ. ಅದನ್ನೇ ನನ್ನ ವಿರುದ್ಧ ಬಳಸಿದ್ದಾರೆ. ಆದರೆ ಕನ್ನಡ ನನ್ನಷ್ಟಾಗಿ ಪ್ರೀತಿಸಿದವರು, ಕನ್ನಡವನ್ನು ನನ್ನಷ್ಟಾಗಿ ಅಂತರರಾಷ್ಟ್ರೀಯ ವೇದಿಕೆಯವರೆಗೆ ಕೊಂಡೊಯ್ದವರು ಯಾರು?” ಎಂದು ಪ್ರಶ್ನಿಸಿದರು. “ನನ್ನ ಸಾಧನೆಯೇ ಸಾಕ್ಷಿ ? ನಂಬಿದವರನ್ನು ಕನ್ನಡ ಎಂದಿಗೂ ಕೈಬಿಡುವುದಿಲ್ಲ” ಎಂದು ಹೇಳಿದರು







