ಹಾಸನ : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲ್ಲಲು ಯತ್ನಿಸಿದ ಪತ್ನಿ; ಪ್ರಕರಣ ದಾಖಲು
ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು; ಆರೋಪಿ ಪ್ರವೀಣ್ ಪರಾರಿ

ಹಾಸನ, ಜುಲೈ 23: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಯತ್ನಿಸಿದ್ದ ಭಯಾನಕ ಘಟನೆ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ದ್ರಾಕ್ಷಾಯಿಣಿ ಎಂಬ ಮಹಿಳೆಗೆ ಇತ್ತೀಚಿನ ದಿನಗಳಲ್ಲಿ ಪ್ರವೀಣ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತೆನ್ನಲಾಗಿದ್ದು, ಈ ಸಂಬಂಧಕ್ಕೆ ಪತಿ ಪ್ರತಾಪ್ ಅಡ್ಡಿಯಾದ ಹಿನ್ನೆಲೆಯಲ್ಲಿ, ಆತನನ್ನೇ ಕೊಲ್ಲುಲು ದ್ರಾಕ್ಷಾಯಿಣಿ ಹಾಗೂ ಪ್ರವೀಣ್ ತಂತ್ರ ರೂಪಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಮೂಲಗಳ ಮಾಹಿತಿ ಪ್ರಕಾರ, ಆರೋಪಿಗಳು ಮದ್ಯ ಮತ್ತು ಊಟದಲ್ಲಿ ವಿಷ ಹಾಕುತ್ತಾ ಪ್ರತಾಪ್ ನನ್ನು ನಿಧಾನವಾಗಿ ಕೊಲ್ಲುವ ಯೋಜನೆ ರೂಪಿಸಿದ್ದರು. ಪ್ರತಾಪ್ ದೇಹದಲ್ಲಿ ವಿಷದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧವಾಗಿ ಪ್ರತಾಪ್ ತನ್ನ ಪತ್ನಿಯ ಮೇಲೆ ಅನುಮಾನ ಹೊಂದಿ, ಒಂದು ತಿಂಗಳ ಕಾಲ ಮನೆಯಲ್ಲೇ ವಾಯ್ಸ್ ರೆಕಾರ್ಡರ್ ಇಟ್ಟು ಪತ್ನಿಯ ಮಾತುಕತೆಗಳನ್ನು ರೆಕಾರ್ಡ್ ಮಾಡುತ್ತಿದ್ದ.ಇದರಿಂದಾಗಿ ಪತ್ನಿಯ ದುಷ್ಕೃತ್ಯ ಹಾಗೂ ಪ್ರವೀಣ್ನ ಸಹಕಾರದ ವಿಷಯಗಳು ಬಯಲಾಗಿವೆ. ಪ್ರತಾಪ್ ತನ್ನದೇ ದೂರು ಆಧಾರವಾಗಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ದ್ರಾಕ್ಷಾಯಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಪ್ರವೀಣ್ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಈ ಬಗ್ಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







