Adani ವಿರುದ್ಧದ ಲಂಚ ಪ್ರಕರಣ | ಉಳಿದ ಐವರು ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲು ಅಮೆರಿಕ ಸರ್ಕಾರದ ಮನವಿ ತಿರಸ್ಕಾರ
► ಪ್ರಕರಣ ಕೈಬಿಡಲು ಸೂಕ್ತ ಪುರಾವೆ ನೀಡಿಲ್ಲ: ಫೆಡರಲ್ ನ್ಯಾಯಾಧೀಶ ►thewire. in ವರದಿ

Photo credit : thewire
ನ್ಯೂಯಾರ್ಕ್, ಸೆ.5: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಅಮೆರಿಕದ ಪ್ರಕರಣವನ್ನು ಕೈಬಿಡಲು ಮುಂದಾಗಿರುವ ಅಲ್ಲಿನ ನ್ಯಾಯಾಂಗ ಇಲಾಖೆಗೆ (DOJ) ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಉಳಿದಿರುವ ಐವರು ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಡಲು DOJ ಸಲ್ಲಿಸಿದ್ದ ಮನವಿಯನ್ನು ನ್ಯೂಯಾರ್ಕ್ನ ಫೆಡರಲ್ ನ್ಯಾಯಾಧೀಶ ನಿಕೋಲಸ್ ಗರೌಫಿಸ್ ತಿರಸ್ಕರಿಸಿದ್ದಾರೆ.
ಪ್ರಕರಣವನ್ನು ಕೈಬಿಡಲು ಸರ್ಕಾರ ನೀಡಿರುವ ಕಾರಣಗಳಿಗೆ ಅಗತ್ಯವಾದ ವಾಸ್ತವಿಕ ಪುರಾವೆಗಳನ್ನು DOJ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಈ ತೀರ್ಪಿನಿಂದ ಪ್ರಕರಣ ಅಂತ್ಯಗೊಂಡಿಲ್ಲ. ಅಗತ್ಯವಾದ ಪುರಾವೆಗಳೊಂದಿಗೆ DOJ ಮತ್ತೆ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯವನ್ನು ಕೋರಬಹುದು.
ಆಗಸ್ಟ್ ನಲ್ಲಿ ಮೂವರ ವಿರುದ್ಧದ ಆರೋಪ ವಜಾ :
ಆಗಸ್ಟ್ 10ರಂದು ನ್ಯಾಯಾಧೀಶ ಗರೌಫಿಸ್ ಅವರು ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ವಿರುದ್ಧದ ಭದ್ರತಾ ವಂಚನೆ ಹಾಗೂ ವಿದ್ಯುನ್ಮಾನ ಸಂವಹನದ ಮೂಲಕ ವಂಚನೆ ಆರೋಪಗಳನ್ನು ವಜಾಗೊಳಿಸಿದ್ದರು.
ಅದಾನಿ ಗ್ರೀನ್ ಎನರ್ಜಿಯ ಲಂಚವಿರೋಧಿ ನೀತಿಗಳಿಗೆ ಸಂಬಂಧಿಸಿದ ಹಣಕಾಸು ದಾಖಲೆಗಳಲ್ಲಿನ ಹೇಳಿಕೆಗಳು ಹೂಡಿಕೆದಾರರು ಕಂಪೆನಿಯ ಬಾಂಡ್ ಗಳನ್ನು ಖರೀದಿಸುವ ನಿರ್ಧಾರಕ್ಕೆ ಅವಲಂಬಿಸುವಷ್ಟು ನಿರ್ದಿಷ್ಟವಾಗಿರಲಿಲ್ಲ ಎಂಬುದು ಆರೋಪಗಳನ್ನು ವಜಾಗೊಳಿಸಲು DOJ ನೀಡಿದ್ದ ಕಾರಣಗಳಲ್ಲಿ ಒಂದಾಗಿತ್ತು.
ಆದರೆ, ಉಳಿದ ಐವರು ಆರೋಪಿಗಳ ವಿರುದ್ಧದ ಎರಡು ಆರೋಪಗಳ ಬಗ್ಗೆ ಆಗಸ್ಟ್ 10ರಂದು ನ್ಯಾಯಾಧೀಶರು ತೀರ್ಪು ನೀಡಿರಲಿಲ್ಲ. ಪ್ರಕರಣವನ್ನು ಕೈಬಿಡಲು ಸರ್ಕಾರ ನೀಡುವ ಪ್ರತಿಯೊಂದು ಕಾರಣಕ್ಕೂ ಸಾಕಷ್ಟು ಪುರಾವೆ ನೀಡುವಂತೆ DOJಗೆ ಸೂಚಿಸಿದ್ದರು.
ಉಳಿದ ಐವರು ಯಾರು? :
ರಂಜಿತ್ ಗುಪ್ತಾ, ಸಿರಿಲ್ ಕ್ಯಾಬೇನ್ಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ ಮತ್ತು ರೂಪೇಶ್ ಅಗರ್ವಾಲ್ ಉಳಿದ ಐವರು ಆರೋಪಿಗಳು
ಗುಪ್ತಾ ಮತ್ತು ರೂಪೇಶ್ ಅಗರ್ವಾಲ್ ಅವರು ನವೀಕರಿಸಬಹುದಾದ ಇಂಧನ ಕಂಪೆನಿ ಅಜುರ್ ಪವರ್ ನ ಮಾಜಿ ಕಾರ್ಯನಿರ್ವಾಹಕರು.
ಕ್ಯಾಬೇನ್ಸ್, ಸೌರಭ್ ಅಗರ್ವಾಲ್ ಮತ್ತು ಮಲ್ಹೋತ್ರಾ ಅವರು ಅಜುರ್ ಪವರ್ ನಲ್ಲಿ ಪ್ರಮುಖ ಹೂಡಿಕೆ ಹೊಂದಿದ್ದ ಕೆನಡಾದ ಪಿಂಚಣಿ ನಿಧಿ ಕೈಸ್ಸೆ ಡಿ ಡೆಪೋಟ್ ಎಟ್ ಪ್ಲೇಸ್ಮೆಂಟ್ ಡು ಕ್ವಿಬೆಕ್ (CDPQ)ನ ಮಾಜಿ ಕಾರ್ಯನಿರ್ವಾಹಕರು.
ಈ ಐವರ ಮೇಲೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆಯಲ್ಲಿ ಭಾಗಿಯಾಗಿದ್ದ ಆರೋಪವಿದೆ. ಇದು ಅಮೆರಿಕದ ವಿದೇಶಿ ಭ್ರಷ್ಟಾಚಾರ ಕಾಯ್ದೆ (FCPA)ಗೆ ಸಂಬಂಧಿಸಿದ ಪ್ರಕರಣ. ಇವರಲ್ಲಿ ನಾಲ್ವರ ಮೇಲೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ ಆರೋಪವೂ ಇದೆ.
DOJ ಏನು ವಾದಿಸಿತ್ತು? :
ಪ್ರಕರಣವನ್ನು ಕೈಬಿಡಲು DOJ ಹಲವು ಕಾರಣಗಳನ್ನು ನೀಡಿತ್ತು. ಅವುಗಳಲ್ಲಿ ಭಾರತದಲ್ಲಿ ನಡೆದ ಬೆಳವಣಿಗೆಗಳನ್ನೂ ಉಲ್ಲೇಖಿಸಲಾಗಿತ್ತು.
ಅದಾನಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಭಾರತದಲ್ಲಿಯೂ ತನಿಖೆ ನಡೆದಿದ್ದು, ಯಾವುದೇ ತಪ್ಪು ನಡೆದಿರುವುದು ಪತ್ತೆಯಾಗಿಲ್ಲ ಎಂದು ಅಲ್ಲಿನ ನ್ಯಾಯಾಲಯಗಳು ಮತ್ತು ಸಂಸ್ಥೆಗಳು ನೀಡಿರುವ ಆದೇಶಗಳು ತೋರಿಸುತ್ತವೆ ಎಂಬುದು DOJ ವಾದವಾಗಿತ್ತು. ಆದರೆ, DOJ ಉಲ್ಲೇಖಿಸಿದ ಭಾರತೀಯ ಆದೇಶಗಳು ಅಮೆರಿಕದಲ್ಲಿ ಆರೋಪಿಸಲಾಗಿರುವ ಲಂಚ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಆದರೆ, ಈ ವಾದವನ್ನು ಗರೌಫಿಸ್ ಒಪ್ಪಲಿಲ್ಲ.
ಭಾರತದಲ್ಲಿ ಈ ಪ್ರಕರಣದ ಲಂಚದ ಆರೋಪದ ಬಗ್ಗೆ ತನಿಖೆ ನಡೆದು ಅಕ್ರಮ ಪತ್ತೆಯಾಗಿಲ್ಲ ಎಂಬುದಕ್ಕೆ ಭಾರತೀಯ ಆದೇಶಗಳಲ್ಲಿ ಪುರಾವೆ ಇಲ್ಲ. ವಾಸ್ತವವಾಗಿ, ಆ ಆರೋಪದ ಬಗ್ಗೆ ತನಿಖೆ ನಡೆದಿರುವುದೇ ಕಾಣುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಭಾರತದಲ್ಲಿ ನಡೆದ ವಿಚಾರಣೆಗಳು ಅಮೆರಿಕದಲ್ಲಿ ಆರೋಪಿಸಲಾಗಿರುವ ಲಂಚದ ಪ್ರಕರಣದ ಬಗ್ಗೆ ನಡೆದದ್ದಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಮೆರಿಕದ ಲಂಚದ ಆರೋಪ ಸುಳ್ಳು ಅಥವಾ ಆ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಯಾವುದೇ ಭಾರತೀಯ ನ್ಯಾಯಾಲಯದ ತೀರ್ಪು ಹೇಳಿಲ್ಲ ಎಂದು ಗರೌಫಿಸ್ ಸ್ಪಷ್ಟಪಡಿಸಿದ್ದಾರೆ.
ಭಾರತದ ಮೂರು ಆದೇಶಗಳನ್ನು ಉಲ್ಲೇಖಿಸಿದ್ದ DOJ :
ಪ್ರಕರಣವನ್ನು ಕೈಬಿಡುವಂತೆ ಕೋರಿ DOJ ಸಲ್ಲಿಸಿದ್ದ ಅರ್ಜಿಗೆ ಬೆಂಬಲವಾಗಿ ಭಾರತದ ಮೂರು ನ್ಯಾಯಾಂಗ ಮತ್ತು ನಿಯಂತ್ರಣಾತ್ಮಕ ಆದೇಶಗಳನ್ನು ಉಲ್ಲೇಖಿಸಿತ್ತು.
ಅವುಗಳಲ್ಲಿ ಮೊದಲನೆಯದು, ಅದಾನಿ ಗ್ರೀನ್ ಎನರ್ಜಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ವಿರೋಧಿ ನಡವಳಿಕೆಯ ದೂರಿನ ಬಗ್ಗೆ ತನಿಖೆ ನಡೆಸಲು ನಿರಾಕರಿಸಿದ್ದ ಭಾರತದ ಸ್ಪರ್ಧಾ ಆಯೋಗದ ಎಪ್ರಿಲ್ 2026ರ ಆದೇಶ.
ಎರಡನೆಯದು, ಅಜುರ್ ಪವರ್ ನ ಕೆಲವು ಯೋಜನಾ ಸಾಮರ್ಥ್ಯವನ್ನು ಅದಾನಿ ಗ್ರೀನ್ ಎನರ್ಜಿಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ನ ಮಾರ್ಚ್ 2026ರ ತೀರ್ಪು.
ಮೂರನೆಯದು, ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ನ ಮಾರ್ಚ್ 27ರ ತೀರ್ಪು.
ಈ ಮೂರು ಆದೇಶಗಳನ್ನು ಆಧರಿಸಿ, ಭಾರತದಲ್ಲಿಯೂ ಈ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ತಪ್ಪು ಪತ್ತೆಯಾಗಿಲ್ಲ ಎಂದು DOJ ವಾದಿಸಿತ್ತು.
ಆದರೆ, ಅಮೆರಿಕದಲ್ಲಿ ಅದಾನಿ ವಿರುದ್ಧ ಮಾಡಲಾಗಿರುವ ಲಂಚದ ಆರೋಪದ ಬಗ್ಗೆ ಈ ಮೂರು ಭಾರತೀಯ ಪ್ರಕರಣಗಳಲ್ಲಿಯೂ ತನಿಖೆ ನಡೆದಿರಲಿಲ್ಲ ಎಂದು ಗರೌಫಿಸ್ ಹೇಳಿದ್ದಾರೆ. ಹೀಗಾಗಿ, ಆ ಆದೇಶಗಳನ್ನು ಆಧರಿಸಿ ಅಮೆರಿಕದ ಲಂಚದ ಪ್ರಕರಣದಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
‘ಹೊಸ ಪುರಾವೆ ನೀಡಿಲ್ಲ’ :
ನ್ಯಾಯಾಲಯದ ಸೂಚನೆಯ ಬಳಿಕ DOJ ಪರವಾಗಿ ಪ್ರಧಾನ ಅಸೋಸಿಯೇಟ್ ಡೆಪ್ಯೂಟಿ ಅಟಾರ್ನಿ ಜನರಲ್ ಟ್ರೆಂಟ್ ಮೆಕ್ಕಾಟರ್ ಅವರು ಆಗಸ್ಟ್ 11 ಮತ್ತು 14ರಂದು ಪತ್ರಗಳನ್ನು ಸಲ್ಲಿಸಿದ್ದರು.
ಆದರೆ, ಈ ಪತ್ರಗಳಲ್ಲಿ ನ್ಯಾಯಾಲಯ ಕೇಳಿದ್ದ ಹೊಸ ಪುರಾವೆಗಳನ್ನು ನೀಡಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಬದಲಾಗಿ, ಹಿಂದೆ ನೀಡಿದ್ದ ಕಾರಣಗಳನ್ನೇ ಮತ್ತೆ ಮಂಡಿಸಲಾಗಿತ್ತು. ಈ ಕಾರಣಗಳನ್ನು ಮರುಪರಿಶೀಲಿಸುವಂತೆ DOJ ಕೋರಿತ್ತು. ಆಗಸ್ಟ್ 25ರೊಳಗೆ ಪ್ರಕರಣವನ್ನು ವಜಾಗೊಳಿಸದಿದ್ದರೆ ಮೇಲ್ಮನವಿ ಕೋರುವುದಾಗಿ ಸರ್ಕಾರ ತಿಳಿಸಿತ್ತು.
ಆದರೆ, ಸರ್ಕಾರ ನೀಡಿರುವ ಕಾರಣಗಳು ನಿಜವೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಸಾಕಷ್ಟು ಪುರಾವೆ ಬೇಕು. ಸರ್ಕಾರದ ಅಧಿಕಾರಿಯೊಬ್ಬರು ತಮ್ಮ ಹೇಳಿಕೆಯಲ್ಲಿ ಆ ಕಾರಣಗಳು ಸರಿಯೆಂದು ಹೇಳಿರುವುದಷ್ಟೇ ಸಾಕಾಗುವುದಿಲ್ಲ ಎಂದು ಗರೌಫಿಸ್ ಹೇಳಿದ್ದಾರೆ.
FCPA ಆರೋಪಕ್ಕೂ ಸಾಕಷ್ಟು ಆಧಾರವಿಲ್ಲ :
FCPA ಆರೋಪವನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು DOJ ವಾದಿಸಿತ್ತು. ಇದಕ್ಕೆ ಬೆಂಬಲವಾಗಿ, ಆಗಿನ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಹೊರಡಿಸಿದ್ದ ಜ್ಞಾಪಕ ಪತ್ರದಲ್ಲಿರುವ ಇಲಾಖೆಯ ಜಾರಿ ನೀತಿಯನ್ನು DOJ ಉಲ್ಲೇಖಿಸಿತ್ತು.
ಮೆಕ್ಕಾಟರ್ ಅವರು ಆ ಜ್ಞಾಪಕ ಪತ್ರವನ್ನು ಹೇಗೆ ಅರ್ಥೈಸಬೇಕು ಮತ್ತು ಅನ್ವಯಿಸಬೇಕು ಎಂಬುದು ಸರ್ಕಾರದ ನಿರ್ಧಾರ ಎಂದು ವಾದಿಸಿದ್ದರು.
ಆದರೆ, ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸುವುದು ನ್ಯಾಯಾಲಯದ ಕರ್ತವ್ಯ ಎಂದು ಗರೌಫಿಸ್ ಹೇಳಿದ್ದಾರೆ. ಜ್ಞಾಪಕ ಪತ್ರವನ್ನೇ ಪ್ರಕರಣ ಕೈಬಿಡಲು ಮುಖ್ಯ ಪುರಾವೆಯಾಗಿ ನೀಡಲಾಗುತ್ತಿರುವಾಗ ನ್ಯಾಯಾಲಯ ಅದನ್ನು ಪರಿಶೀಲಿಸಲೇಬೇಕು ಎಂದು ಅವರು ತಿಳಿಸಿದ್ದಾರೆ.
ಆದರೂ, FCPA ಆರೋಪವನ್ನು ಮುಂದುವರಿಸಬೇಕೇ ಅಥವಾ ಕೈಬಿಡಬೇಕೇ ಎಂಬ ಅಂತಿಮ ಪ್ರಶ್ನೆಗೆ ತಾವು ಇನ್ನೂ ಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಗತ್ಯವಾದ ಪುರಾವೆಗಳನ್ನು ಒದಗಿಸುವಲ್ಲಿ DOJ ವಿಫಲವಾಗಿರುವುದೇ ಈ ಹಂತದ ತೀರ್ಪಿಗೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಡಚಣೆ ಆರೋಪವೂ FCPA ಪ್ರಕರಣಕ್ಕೆ ಸಂಬಂಧಿಸಿದೆ :
ಐವರಲ್ಲಿ ನಾಲ್ವರ ವಿರುದ್ಧದ ಅಡಚಣೆ ಪಿತೂರಿ ಆರೋಪವನ್ನು ಕೈಬಿಡುವಂತೆ DOJ ಕೇಳಿತ್ತು.
ಮೂಲ FCPA ಆರೋಪವೇ ಇಲ್ಲದಿದ್ದರೆ, ಅಡಚಣೆ ಆರೋಪದ ಮೇಲೆ ಸರ್ಕಾರ ಸಂಪನ್ಮೂಲ ವ್ಯಯಿಸುವ ಅಗತ್ಯವಿಲ್ಲ ಎಂಬುದು DOJಯ ವಾದವಾಗಿತ್ತು.
ಆದರೆ, FCPA ಆರೋಪವನ್ನು ಕೈಬಿಡಲು ಬೇಕಾದ ಪುರಾವೆಗಳನ್ನು ಸರ್ಕಾರ ಒದಗಿಸದ ಕಾರಣ ಅಡಚಣೆ ಆರೋಪವನ್ನು ಕೈಬಿಡುವ ವಾದಕ್ಕೂ ಆಧಾರವಿಲ್ಲ ಎಂದು ನ್ಯಾಯಾಧೀಶರ ಆದೇಶದಿಂದ ಸ್ಪಷ್ಟವಾಗುತ್ತದೆ.
ಸರ್ಕಾರದ ಮನವಿಯನ್ನು ನ್ಯಾಯಾಲಯ ಪರಿಶೀಲಿಸಬಹುದು :
ಆರೋಪಪಟ್ಟಿಯನ್ನು ಹಿಂಪಡೆಯಲು ಸರ್ಕಾರಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ಹೀಗಾಗಿ, ಪ್ರಕರಣವನ್ನು ಕೈಬಿಡಲು ಸರ್ಕಾರ ನೀಡುವ ಕಾರಣಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಗರೌಫಿಸ್ ಹೇಳಿದ್ದಾರೆ.
ಗ್ರ್ಯಾಂಡ್ ಜ್ಯೂರಿ ಅಂಗೀಕರಿಸಿರುವ ಆರೋಪಪಟ್ಟಿಯನ್ನು ಸರ್ಕಾರ ಏಕೆ ಹಿಂಪಡೆಯಲು ಬಯಸುತ್ತಿದೆ ಎಂಬುದಕ್ಕೆ ಸ್ಪಷ್ಟ ಕಾರಣ ಮತ್ತು ಅದನ್ನು ಸಮರ್ಥಿಸುವ ಪುರಾವೆಗಳನ್ನು ಸರ್ಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
ಈ ಹಿಂದೆ 1977ರ ಪ್ರಕರಣವೊಂದರಲ್ಲಿಯೂ ಸರ್ಕಾರ ವಿದೇಶಿ ಆರೋಪಿಗಳು ಅಮೆರಿಕಕ್ಕೆ ಬಂದು ವಿಚಾರಣೆ ಎದುರಿಸುವ ಸಾಧ್ಯತೆ ಕಡಿಮೆ ಎಂಬ ಕಾರಣ ನೀಡಿ ಪ್ರಕರಣವನ್ನು ಕೈಬಿಡಲು ಮನವಿ ಮಾಡಿತ್ತು. ಆದರೆ, ಆ ಕಾರಣವನ್ನು ನ್ಯಾಯಾಲಯ ಒಪ್ಪಿರಲಿಲ್ಲ.
ಪ್ರಸ್ತುತ ಪ್ರಕರಣದಲ್ಲಿಯೂ DOJ ನೀಡಿರುವ ಕಾರಣಗಳು ಸಾಕಷ್ಟು ಸ್ಪಷ್ಟವಾಗಿಲ್ಲ ಎಂದು ಗರೌಫಿಸ್ ಹೇಳಿದ್ದಾರೆ. ಪ್ರಕರಣ ಮುಂದುವರಿಸಲು ಹೆಚ್ಚಿನ ಹಣ ಮತ್ತು ಸಿಬ್ಬಂದಿ ಬೇಕಾಗುತ್ತದೆ, ಆರೋಪಿಗಳ ವಿರುದ್ಧದ ಸಾಕ್ಷ್ಯದಲ್ಲಿ ಅನುಮಾನಗಳಿವೆ, ಆರೋಪಿಗಳನ್ನು ಮುಂದೆ ಬಂಧಿಸಲು ಸಾಧ್ಯವಾಗದಿರಬಹುದು ಹಾಗೂ ಬಹಿರಂಗಪಡಿಸದ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಕಾರಣಗಳನ್ನು DOJ ನೀಡಿತ್ತು.
ಆದರೆ, ಇಂತಹ ಕಾರಣಗಳನ್ನು ಹೇಳುವುದಷ್ಟೇ ಸಾಕಾಗುವುದಿಲ್ಲ. ಅವುಗಳನ್ನು ಬೆಂಬಲಿಸುವ ಪುರಾವೆಗಳನ್ನೂ ಸರ್ಕಾರ ನ್ಯಾಯಾಲಯಕ್ಕೆ ನೀಡಬೇಕು ಎಂಬುದು ಗರೌಫಿಸ್ ಅವರ ನಿಲುವಾಗಿದೆ.
‘ದಾಖಲೆಗಳಲ್ಲಿನ ಕೊರತೆಯನ್ನು ನಿರ್ಲಕ್ಷಿಸಲಾಗದು’ :
ನ್ಯಾಯಾಲಯ ಕೇಳಿದ್ದ ಹೆಚ್ಚುವರಿ ಪುರಾವೆಗಳನ್ನು ನೀಡುವ ಬದಲು, DOJ ಈ ಹಿಂದೆ ನೀಡಿದ್ದ ಕಾರಣಗಳನ್ನೇ ಮತ್ತೆ ಮುಂದಿಟ್ಟಿದೆ ಎಂದು ನ್ಯಾಯಾಧೀಶ ಗರೌಫಿಸ್ ಹೇಳಿದ್ದಾರೆ.
DOJ ನೀಡಿರುವ ಕಾರಣಗಳನ್ನು ಸಮರ್ಥಿಸುವಂತಹ ಸಾಕ್ಷ್ಯಗಳು ಪ್ರಕರಣದ ದಾಖಲೆಗಳಲ್ಲಿ ಇಲ್ಲ. ಇರುವ ಸಾಕ್ಷ್ಯಗಳೂ DOJ ಹೇಳಿರುವ ಕಾರಣಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಏಕೆ ಪ್ರಕರಣವನ್ನು ಕೈಬಿಡಲು ಬಯಸುತ್ತಿದೆ ಎಂಬುದಕ್ಕೆ ಸೂಕ್ತ ಪುರಾವೆ ಇಲ್ಲದಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಹೀಗಾಗಿ, ಸರ್ಕಾರದ ನಿರ್ಧಾರ ಮತ್ತು ಅದಕ್ಕೆ ನೀಡಿರುವ ಕಾರಣಗಳ ನಡುವೆ ಸ್ಪಷ್ಟವಾದ ಹೊಂದಾಣಿಕೆಯೇ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸಾಕ್ಷ್ಯಗಳು ಬೆಂಬಲಿಸದ ಕಾರಣಗಳನ್ನು ಒಪ್ಪಿಕೊಂಡು ಪ್ರಕರಣವನ್ನು ಕೈಬಿಟ್ಟರೆ, ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂಬ ನಿಯಮ 48(a)ಯ ಉದ್ದೇಶವೇ ವಿಫಲವಾಗುತ್ತದೆ ಎಂದು ಗರೌಫಿಸ್ ತಿಳಿಸಿದ್ದಾರೆ.
ಮತ್ತೆ ಮನವಿ ಸಲ್ಲಿಸಬಹುದು :
ಸೆ.3ರ ನ್ಯಾಯಾಲಯದ ಆದೇಶದಿಂದ ಪ್ರಕರಣ ಶಾಶ್ವತವಾಗಿ ಮುಕ್ತಾಯಗೊಂಡಿಲ್ಲ. ಅಗತ್ಯವಾದ ವಾಸ್ತವಿಕ ಪುರಾವೆಗಳನ್ನು ಒದಗಿಸಿ ಉಳಿದ ಐವರು ಆರೋಪಿಗಳ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ DOJ ಮತ್ತೊಮ್ಮೆ ಮನವಿ ಸಲ್ಲಿಸಬಹುದು.
ಪ್ರಕರಣವನ್ನು ಕೈಬಿಡಲು ಸರ್ಕಾರ ನೀಡಿರುವ ಕಾರಣಗಳು ವಾಸ್ತವವಾಗಿ ಸಾಕಷ್ಟು ಬಲವಾಗಿವೆಯೇ ಎಂಬ ಅಂತಿಮ ತೀರ್ಪನ್ನು ನ್ಯಾಯಾಧೀಶರು ನೀಡಿಲ್ಲ. ಈ ಹಂತದಲ್ಲಿ DOJ ಅಗತ್ಯವಾದ ಪುರಾವೆ ಒದಗಿಸಿಲ್ಲ ಎಂಬ ಕಾರಣಕ್ಕೆ ಮಾತ್ರ ಅದರ ಮನವಿಯನ್ನು ತಿರಸ್ಕರಿಸಲಾಗಿದೆ.
ಸೌಜನ್ಯ: thewire.in






