ಸಂವಿಧಾನದಿಂದ `ಜಾತ್ಯತೀತತೆ, ಸಮಾಜವಾದ' ಕೈಬಿಡುವಂತೆ ಬಾಂಗ್ಲಾ ಆಯೋಗ ಶಿಫಾರಸು

PC : PTI
ಢಾಕಾ : ಸಂವಿಧಾನ ಸುಧಾರಣಾ ಆಯೋಗವು ಬುಧವಾರ ತನ್ನ ವರದಿಯನ್ನು ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ಗೆ ಸಲ್ಲಿಸಿದ್ದು ಜಾತ್ಯತೀತತೆ, ಸಮಾಜವಾದ ಮತ್ತು ರಾಷ್ಟ್ರೀಯತೆಯ ತತ್ವಗಳನ್ನು ಬದಲಿಸಲು ಶಿಫಾರಸು ಮಾಡಿದೆ.
ಮಧ್ಯಂತರ ಸರಕಾರ ಸ್ಥಾಪಿಸಿದ ಆಯೋಗವು ದೇಶಕ್ಕೆ ಉಭಯ ಸದನಗಳ ಸಂಸತ್ತು ಮತ್ತು ಪ್ರಧಾನಮಂತ್ರಿಯ ಅಧಿಕಾರಾವಧಿಯಲ್ಲಿ ಎರಡು ಅವಧಿಯ ಮಿತಿಯನ್ನೂ ಪ್ರಸ್ತಾಪಿಸಿದೆ. ದೇಶದ ಸಂವಿಧಾನದಲ್ಲಿ `ಸಾರ್ವಜನಿಕ ನೀತಿಯ ಮೂಲತತ್ವಗಳು' ಎಂದು ಪ್ರತಿಪಾದಿಸಲಾದ ನಾಲ್ಕು ತತ್ವಗಳಾದ ಜಾತ್ಯತೀತತೆ, ಸಮಾಜವಾದ, ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವಗಳಲ್ಲಿ ಮೂರನ್ನು ಬದಲಿಸಲು ಶಿಫಾರಸು ಮಾಡಲಾಗಿದೆ.
ನಾವು 1971ರ ವಿಮೋಚನಾ ಯುದ್ಧದ ಶ್ರೇಷ್ಟ ಆದರ್ಶಗಳ ಪ್ರತಿಬಿಂಬಕ್ಕಾಗಿ ಮತ್ತು 2024ರ ಸಾಮೂಹಿಕ ದಂಗೆಯ ಸಮಯದಲ್ಲಿ ಜನರ ಆಕಾಂಕ್ಷೆಗಳಿಗಾಗಿ ` ಸಮಾನತೆ, ಮಾನವ ಘನತೆ, ಸಾಮಾಜಿಕ ನ್ಯಾಯ, ಬಹುತ್ವ ಮತ್ತು ಪ್ರಜಾಪ್ರಭುತ್ವ ಎಂಬ ಐದು ಸಾರ್ವಜನಿಕ ನೀತಿಗಳನ್ನು ಪ್ರಸ್ತಾಪಿಸುತ್ತಿದ್ದೇವೆ ಎಂದು ಆಯೋಗದ ಅಧ್ಯಕ್ಷ ಆಲಿ ರಿಯಾಝ್ ಹೇಳಿರುವುದಾಗಿ ವರದಿಯಾಗಿದೆ.





