ಇಂಡೊ-ಕೆನಡಿಯನ್ ಸಂಸದರಿಂದ ವಿವಾದಾತ್ಮಕ ನಿರ್ಣಯ ಮಂಡನೆ
![ಇಂಡೊ-ಕೆನಡಿಯನ್ ಸಂಸದರಿಂದ ವಿವಾದಾತ್ಮಕ ನಿರ್ಣಯ ಮಂಡನೆ ಇಂಡೊ-ಕೆನಡಿಯನ್ ಸಂಸದರಿಂದ ವಿವಾದಾತ್ಮಕ ನಿರ್ಣಯ ಮಂಡನೆ](https://www.varthabharati.in/h-upload/2024/04/03/1258288-1245381-91ce31c2-c3aa-457e-929c-a796902eebca.webp)
Photo : freepik
ಟೊರಂಟೊ : ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಲಿಬರಲ್ ಪಕ್ಷದ ಭಾರತೀಯ-ಕೆನಡಿಯನ್ ಸಂಸದ ಸುಖ್ ದಯಾಲ್ ಸಂಸತ್ನಲ್ಲಿ ಮಂಡಿಸಿದ ನಿರ್ಣಯವು ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಸರಿಪಡಿಸಲಾಗದ ಹಾನಿಯುಂಟು ಮಾಡಬಹುದು ಎಂಬ ಟೀಕೆ ವ್ಯಕ್ತವಾಗಿದೆ.
` ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜಾರ್ ರನ್ನು ಕೆನಡಾದ ನೆಲದಲ್ಲಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಭಾರತ ಸರಕಾರದ ಏಜೆಂಟರ ಸಂಬಂಧದ ಬಗ್ಗೆ ವಿಶ್ವಾಸಾರ್ಹ ಆರೋಪಗಳು ಸೇರಿದಂತೆ ಇತ್ತೀಚಿನ ಘಟನೆಗಳು, ಕೆನಡಾದ ಆಂತರಿಕ ವ್ಯವಹಾರದಲ್ಲಿ ಭಾರತ, ಚೀನಾ, ರಶ್ಯ, ಇರಾನ್ ಮತ್ತು ಇತರರು ಹಸ್ತಕ್ಷೇಪ ನಡೆಸುವುದು, ಬೆದರಿಸುವುದಕ್ಕೆ ಉತ್ತಮ ನಿದರ್ಶನವಾಗಿದೆ ಎಂಬುದನ್ನು ಸಂಸತ್ ಗಮನಿಸಬೇಕು' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಈ ನಿರ್ಣಯವನ್ನು ಇತರ 6 ಭಾರತೀಯ-ಕೆನಡಿಯನ್ ಸಂಸದರು ಅನುಮೋದಿಸಿದ್ದಾರೆ.
`ಈ ನಿರ್ಣಯ ಅಂಗೀಕಾರವಾದರೆ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧವನ್ನು ಹಾಳುಮಾಡುವ ಪ್ರಚೋದನೆಗಳ ಸುದೀರ್ಘ ಪಟ್ಟಿಯಲ್ಲಿ ಮತ್ತೊಂದು ಉಪಕ್ರಮವಾಗಲಿದೆ. ನಿರ್ಣಯವು ಅಂಗೀಕಾರವಾದರೆ ಕೆನಡಾದಲ್ಲಿ ಸುಸಂಘಟಿತವಾಗಿರುವ ಮತ್ತು ಉತ್ತಮ ಆರ್ಥಿಕ ದೇಣಿಗೆ ಪಡೆಯುತ್ತಿರುವ ಭಾರತ ವಿರೋಧಿ, ಹಿಂದು ವಿರೋಧಿ ಗುಂಪುಗಳಿಗೆ ಮತ್ತಷ್ಟು ಉತ್ತೇಜನ ದೊರಕಲಿದೆ' ಎಂದು `ಕೆನಡಾ ಇಂಡಿಯಾ ಫೌಂಡೇಷನ್' ಕಳವಳ ವ್ಯಕ್ತಪಡಿಸಿದೆ.