ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆ ಸಂಪೂರ್ಣ ಪ್ರಹಸನ : ಭಾರತ ಟೀಕೆ

ರಣಧೀರ್ ಜೈಸ್ವಾಲ್ | Photo Credit : PTI
ಹೊಸದಿಲ್ಲಿ, ಆ. 5: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಡೆದ ತಥಾಕಥಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ‘‘ಸಂಪೂರ್ಣ ಪ್ರಹಸನ’’ವಾಗಿದೆ. ಇಂತಹ ಟೊಳ್ಳು ಚುನಾವಣಾ ಕಸರತ್ತುಗಳ ಮೂಲಕ ಆ ಪ್ರದೇಶದ ವಾಸ್ತವವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಮಾನವ ಹಕ್ಕುಗಳ ಕುರಿತು ಪಾಕಿಸ್ತಾನದ ಬೂಟಾಟಿಕೆಯ ಉಪದೇಶದ ನಾಟಕವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು ಎಂದಿದೆ.
‘‘ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಒಂದು ಸಂಪೂರ್ಣ ಪ್ರಹಸನ. ಅಲ್ಲಿ ನಡೆಯುತ್ತಿರುವ ನಿಜವಾದ ಸಂಗತಿಯೆಂದರೆ ಸಾರ್ವಜನಿಕರ ಪ್ರತಿಭಟನೆ ಮತ್ತು ಪಾಕಿಸ್ತಾನಿ ಪಡೆಗಳಿಂದ ನಡೆಯುತ್ತಿರುವ ನಿರಪರಾಧಿಗಳ ಹತ್ಯೆ. ಆದುದರಿಂದ ಇಂತಹ ಟೊಳ್ಳು ಚುನಾವಣಾ ಕಸರತ್ತುಗಳ ಮೂಲಕ ವಾಸ್ತವವನ್ನು ಮುಚ್ಚಿಡಲು ಸಾಧ್ಯವಿಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಜೂನ್ನಿಂದ ಆರಂಭವಾದ ನಿರಂತರ ನಿಗ್ರಹ ಕಾರ್ಯಾಚರಣೆಯಲ್ಲಿ ಕನಿಷ್ಠ 90 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಆಡಳಿತ ವ್ಯವಸ್ಥೆ ಸಾರ್ವಜನಿಕರ ಅಸಮಾಧಾನಕ್ಕೆ ಬಂದೂಕಿನ ಗುಂಡುಗಳು, ವಿದ್ಯುತ್ ಕಡಿತ, ಬೆದರಿಕೆ ಮತ್ತು ನಿಗ್ರಹದ ಮೂಲಕ ಉತ್ತರಿಸಿದೆ. ಈಗ ಈ ಟೊಳ್ಳು ಚುನಾವಣಾ ಕಸರತ್ತಿನ ಮೂಲಕ ತನ್ನ ಸಿಂಧುತ್ವವನ್ನು ಸಾಬೀತುಪಡಿಸಲು ಹೊರಟಿದೆ ಎಂದು ಜೈಸ್ವಾಲ್ ಹೇಳಿದರು.






