ಕತಾರ್ ಮೇಲಿನ ಇಸ್ರೇಲ್ ದಾಳಿಗೆ ಭಾರತ ಕಳವಳ

PC: x.com/thewire_in
ಹೊಸದಿಲ್ಲಿ: ಕತಾರ್ನ ದೋಹಾ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯ ಬಗ್ಗೆ ಭಾರತ ಮಂಗಳವಾರ ತೀವ್ರ ಆತಂಕ ವ್ಯಕ್ತಪಡಿಸಿದೆ. ಎಲ್ಲ ದೇಶಗಳು ಸಂಯಮ ಸಾಧಿಸಬೇಕು ಮತ್ತು ಈ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸದಂತೆ ತಡೆಯಲು ರಾಜತಾಂತ್ರಿಕ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದೆ.
"ಇಂದು ಮುಂಜಾನೆ ದೋಹಾ ನಗರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ವರದಿಗಳನ್ನು ನಾವು ನೋಡಿದ್ದೇವೆ. ಈ ಬೆಳವಣಿಗೆಯಿಂದ ಮತ್ತು ಈ ಪ್ರದೇಶದ ಭದ್ರತಾ ಸ್ಥಿತಿಯ ಮೇಲೆ ಉಂಟಾಗುವ ಗಂಭೀರ ಪರಿಣಾಮದ ಬಗ್ಗೆ ನಮಗೆ ತೀವ್ರ ಕಳವಳವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ಹೇಳಿದೆ.
ಕತಾರ್ ರಾಜಧಾನಿಯ ಮೇಲೆ ಇಸ್ರೇಲಿ ಪಡೆಗಳು ನಡೆಸಿವೆ ಎನ್ನಲಾದ ಸರಣಿ ವಾಯುದಾಳಿಯ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಭಾರತದ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಈ ವರದಿಗಳ ಅಂಶಗಳು ಇನ್ನೂ ದೃಢಪಡಬೇಕಿವೆಯಾದರೂ, ಆರಂಭಿಕ ವರದಿಗಳ ಪ್ರಕಾರ, ನಾಗರಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ ಹಾಗೂ ಇಡೀ ಪ್ರದೇಶದಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿದೆ.
ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವಂತೆ ಭಾರತ ಒತ್ತಿಹೇಳಿದ್ದು, ಶಾಂತಿಗೆ ಅಪಾಯ ತರುವ ಕ್ರಮಗಳನ್ನು ಕೈಗೊಳ್ಳದಂತೆ ಮನವಿ ಮಾಡಿದೆ. "ತೀರಾ ಸಂಯಮ ಮತ್ತು ರಾಜತಾಂತ್ರಿಕ ಕ್ರಮಕ್ಕೆ ನಾವು ಆಗ್ರಹಿಸುತ್ತಿದ್ದೇವೆ. ಈ ಮೂಲಕ ಈ ಪ್ರದೇಶದ ಶಾಂತಿ ಹಾಗೂ ಭದ್ರತೆಗೆ ಯಾವುದೇ ಧಕ್ಕೆ ಬರಬಾರದು" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.







