ಭಾರತವು ಭಯೋತ್ಪಾದಕರೊಂದಿಗೆ ಯುದ್ಧದಲ್ಲಿದೆ: ಭಾರತದ ರಾಯಭಾರಿ ವಿನಯ್ ಕ್ವಾತ್ರ

ವಿನಯ್ ಕ್ವಾತ್ರ | PC : PTI
ನ್ಯೂಯಾರ್ಕ್: ಭಾರತವು ಭಯೋತ್ಪಾದಕರೊಂದಿಗೆ ಯುದ್ಧದಲ್ಲಿದೆ ಮತ್ತು ಪಹಲ್ಗಾಮ್ ದಾಳಿಯ ಬಲಿಪಶುಗಳಿಗೆ ನ್ಯಾಯ ಒದಗಿಸಲಿದೆ ಎಂದು ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಕ್ವಾತ್ರ ಹೇಳಿದ್ದಾರೆ.
ಎಪ್ರಿಲ್ 22ರಂದು ನಡೆದಿರುವುದು ಅತ್ಯಂತ ಘೋರ ಭಯೋತ್ಪಾದಕ ಕೃತ್ಯವಾಗಿತ್ತು. ಈ ಉಗ್ರರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಯಾರೂ ಹೇಳಲಾರರು. ನಮ್ಮ ಕಾರ್ಯಾಚರಣೆಯ ಉದ್ದೇಶವೂ ಇದೇ ಆಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಹೊಣೆಗಾರರನ್ನು ಗುರುತಿಸಿ ಶಿಕ್ಷಿಸುವುದು. ಈ ಉಗ್ರರಿಗೆ, ಅವರನ್ನು ತಯಾರಿಸುವ ಫ್ಯಾಕ್ಟರಿಗಳಿಗೆ, ಅವರ ಸಮಗ್ರ ವ್ಯವಸ್ಥೆಗಳಿಗೆ ನಿಖರವಾದ ಪ್ರಹಾರ ನೀಡಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಪಾಕ್ ಸರಕಾರ ಸ್ಪಷ್ಟಪಡಿಸಿರುವ ಕುರಿತ ಪ್ರಶ್ನೆಗೆ ವಿನಯ್ ಕ್ವಾತ್ರ ` ನಿರಾಕರಣೆ ಮತ್ತು ಅಸ್ಪಷ್ಟತೆ ಯಾವಾಗಲೂ ಪಾಕಿಸ್ತಾನದ ಕಾರ್ಯತಂತ್ರದ ಮೊದಲ ಭಾಗವಾಗಿದೆ. ಅಮೆರಿಕದ ಮೇಲೆ ಸೆಪ್ಟಂಬರ್ 11ರಂದು ನಡೆದಿದ್ದ ದಾಳಿಯ ರೂವಾರಿ, ಅಲ್ಖೈದಾ ಮುಖಂಡ ಒಸಾಮಾ ಬಿನ್ ಲಾದೆನ್ ಯಾವ ದೇಶದಲ್ಲಿದ್ದ? ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.