ಭಾರತದ ಸೇನಾ ಸಿಬ್ಬಂದಿ ಮೇ 10ರೊಳಗೆ ವಾಪಸಾಗಲಿದ್ದಾರೆ: ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು

ಮುಹಮ್ಮದ್ ಮುಯಿಝು (Photo: X/ @MMuizzu)
ಮಾಲೆ: ಸಂಸತ್ತನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ತನ್ನ ಭಾರತ ವಿರೋಧಿ ನಿಲುವನ್ನು ಪುನರುಚ್ಚರಿಸಿದ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು, ದೇಶದ ಸಾರ್ವಭೌಮತ್ವದಲ್ಲಿ ಯಾವುದೇ ಹಸ್ತಕ್ಷೇಪಕ್ಷೆ ಅವಕಾಶವಿಲ್ಲ ಎಂದಿದ್ದಾರೆ.
ತಮ್ಮ ಆಡಳಿತವು ದೇಶದಿಂದ ವಿದೇಶಿ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುತ್ತದೆ ಎಂಬ ನಿರೀಕ್ಷೆಯಿಂದ ಬಹುಪಾಲು ಮಾಲ್ದೀವ್ಸ್ ಜನತೆ ತಮ್ಮ ಸರಕಾರವನ್ನು ಬೆಂಬಲಿಸುತ್ತದೆ ಎಂದು ಭಾವಿಸುತ್ತೇವೆ. ಆದ್ದರಿಂದ ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಮುಯಿಝ್ಜು ಹೇಳಿದ್ದಾರೆ.
ಮಾಲ್ದೀವ್ಸ್ನಲ್ಲಿ ನೆಲೆಗೊಳಿಸಿರುವ ತನ್ನ ತುಕಡಿಯನ್ನು ಹಿಂದಕ್ಕೆ ಪಡೆಯುವಂತೆ ಭಾರತವನ್ನು ಅಧಿಕೃತವಾಗಿ ಕೋರಿದ್ದೇವೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದೆ. ಇತ್ತೀಚಿನ ಮಾತುಕತೆಯ ಪ್ರಕಾರ, ಒಂದು ವಾಯುಯಾನ ನೆಲೆಯಲ್ಲಿ ಇರುವ ಭಾರತದ ಸೇನಾ ಸಿಬ್ಬಂದಿ ಮಾರ್ಚ್ 10ರ ಒಳಗೆ ಭಾರತಕ್ಕೆ ವಾಪಸಾಗಲಿದ್ದಾರೆ. ಉಳಿದ ಎರಡು ನೆಲೆಗಳಲ್ಲಿ ಇರುವ ಸೇನಾ ಸಿಬ್ಬಂದಿ ಮೇ 10ರ ಒಳಗೆ ವಾಪಾಸು ತೆರಳಲಿದ್ದಾರೆ ಎಂದು ಮುಯಿಝ್ಝು ಹೇಳಿದ್ದಾರೆ.ಮಾಲ್ದೀವ್ಸ್ ಜನರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದು ಅಧ್ಯಕ್ಷನಾಗಿ ತನ್ನ ಪ್ರಥಮ ಆದ್ಯತೆಯಾಗಿದೆ ಎಂದ ಮುಯಿಝ್ಝು, ಮಾಲ್ದೀವ್ಸ್ ಮಿಲಿಟರಿಯ ವಿಶೇಷ ಆರ್ಥಿಕ ವಲಯದಲ್ಲಿ 24 ಗಂಟೆಯೂ ಗಸ್ತು ನಡೆಸಲು ಮಾಲ್ದೀವ್ಸ್ ಮಿಲಿಟರಿಯ ಸಾಮಥ್ರ್ಯವನ್ನು ವೃದ್ಧಿಸಲಾಗುವುದು ಎಂದರು. ತಮ್ಮ ಸರಕಾರದ `ಮಾಲ್ದೀವ್ಸ್ ಪರ' ಕಾರ್ಯನೀತಿಯಲ್ಲಿ ಅಡಕವಾಗಿರುವ ಜನರು ಮತ್ತು ದೇಶದ ಕಲ್ಯಾಣಕ್ಕೆ ಆದ್ಯತೆ ನೀಡುವ ಮಾರ್ಗದರ್ಶಿ ಸೂತ್ರವನ್ನು ಒತ್ತಿಹೇಳಿದರು ಎಂದು ವರದಿಯಾಗಿದೆ.
ಮಾಲ್ದೀವ್ಸ್ನಲ್ಲಿ ಸ್ಥಾಪಿಸಲಾಗಿರುವ ಭಾರತೀಯ ವಾಯುಯಾನ ನೆಲೆಗಳಲ್ಲಿರುವ ಸುಮಾರು 80 ಯೋಧರ ಸ್ಥಾನದಲ್ಲಿ ಸ್ಥಳೀಯರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಲ್ದೀವ್ಸ್ ಅಧಿಕಾರಿಗಳು ಇತ್ತೀಚೆಗೆ ಹೇಳಿದ್ದರು.
ವಿರೋಧ ಪಕ್ಷಗಳ ಬಹಿಷ್ಕಾರ
ಸಂಸತ್ತನ್ನು ಉದ್ದೇಶಿಸಿ ಅಧ್ಯಕ್ಷ ಮುಹಮ್ಮದ್ ಮುಯಿಝ್ಜು ಭಾಷಣವನ್ನು ಮಾಲ್ದೀವ್ಸ್ನ ಪ್ರಮುಖ ವಿಪಕ್ಷಗಳಾದ `ಮಾಲ್ದೀವಿಯನ್ ಡೆಮೊಕ್ರಟಿಕ್ ಪಾರ್ಟಿ(ಎಂಡಿಪಿ)' ಹಾಗೂ `ದಿ ಡೆಮೊಕ್ರಾಟ್ಸ್' ಪಕ್ಷಗಳ ಸದಸ್ಯರು ಬಹಿಷ್ಕರಿಸಿದರು.
ಕಳೆದ ವಾರ ಸಂಸತ್ತು ಅನುಮೋದಿಸಲು ನಿರಾಕರಿಸಿದ್ದ ಮೂವರು ಸಂಪುಟ ಸದಸ್ಯರು ಅಧಿವೇಶನಕ್ಕೆ ಆಹ್ವಾನಿಸಿರುವುದನ್ನು ಖಂಡಿಸುವುದಾಗಿ ವಿಪಕ್ಷ ಸದಸ್ಯರು ಹೇಳಿದ್ದಾರೆ. ಸರಕಾರದ ಪ್ರಜಾಸತ್ತಾತ್ಮಕ ವಿರೋಧಿ ನಡೆಯನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿರುವುದಾಗಿ ವಿರೋಧ ಪಕ್ಷಗಳು ಘೋಷಿಸಿವೆ. 56 ಸಂಸದರು ಅಧ್ಯಕ್ಷರ ಭಾಷಣವನ್ನು ಬಹಿಷ್ಕರಿಸಿದ್ದರೆ ಕೇವಲ 24 ಸಂಸದರು ಮಾತ್ರ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.







