ನಮ್ಮ ವಾಯು ರಕ್ಷಣಾ ನೆಲೆಗಳನ್ನು ಗೌಪ್ಯವಾಗಿಡಲು ಭಾರತದ ಡ್ರೋನ್ ಹೊಡೆದುರುಳಿಸಿಲ್ಲ: ಪಾಕ್ ರಕ್ಷಣಾ ಸಚಿವ

ಖ್ವಾಜಾ ಆಸಿಫ್ | PC : PTI
ಇಸ್ಲಾಮಾಬಾದ್: ಪಾಕಿಸ್ತಾನದ ಸೇನೆ ಉದ್ದೇಶಪೂರ್ವಕವಾಗಿ ಭಾರತದ ಡ್ರೋನ್ಗಳನ್ನು ಹೊಡೆದುರುಳಿಸಲಿಲ್ಲ. ಹೀಗೆ ಮಾಡಿದ್ದರೆ ನಮ್ಮ ರಕ್ಷಣಾ ಸ್ಥಾನಗಳ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಂತಾಗುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ವಾಯು ರಕ್ಷಣಾ ಘಟಕದ ನೆಲೆಗಳನ್ನು ಪತ್ತೆ ಹಚ್ಚುವುದು ಡ್ರೋನ್ ದಾಳಿಯ ಉದ್ದೇಶವಾಗಿತ್ತು. ಪಾಕಿಸ್ತಾನದ ಸೈನ್ಯವು ವಾಯು ರಕ್ಷಣಾ ಘಟಕದ ನೆಲೆಗಳು ಸೋರಿಕೆಯಾಗುವುದನ್ನು ಬಯಸುವುದಿಲ್ಲ. ಆದ್ದರಿಂದ ಡ್ರೋನ್ಗಳನ್ನು ಹೊಡೆದುರುಳಿಸಿಲ್ಲ. ಇದು ನನಗೆ ವಿವರಿಸಲು ಸಾಧ್ಯವಾಗದ ತಾಂತ್ರಿಕ ವಿಷಯ. ನಾವು ಡ್ರೋನ್ ದಾಳಿಯನ್ನು ತಡೆಯಲಿಲ್ಲ. ಇದರಿಂದ ನಮ್ಮ ವೈಮಾನಿಕ ರಕ್ಷಣಾ ಘಟಕದ ಸ್ಥಳ ಸೋರಿಕೆಯಾಗಿಲ್ಲ' ಎಂದು ಶುಕ್ರವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಆಸಿಫ್ ಹೇಳಿರುವುದಾಗಿ ವರದಿಯಾಗಿದೆ.
ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮದರಸಾ ವಿದ್ಯಾರ್ಥಿಗಳು ನಿರ್ಣಾಯಕ ಎರಡನೇ ಸಾಲಿನ ರಕ್ಷಣೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇದೇ ಸಂದರ್ಭ ಆಸಿಫ್ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. `ಮದರಸಾ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ, ಅವರು ನಮ್ಮ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ. ಮದರಸಾದಲ್ಲಿ ಅಧ್ಯಯನ ಮಾಡುತ್ತಿರುವ ಯುವಕರನ್ನು ಸಮಯ ಬಂದಾಗ ಶೇ.100ರಷ್ಟು ಬಳಸಲಾಗುತ್ತದೆ' ಎಂದು ರಕ್ಷಣಾ ಸಚಿವರು ಹೇಳಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಸ್ಥಳಗಳ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಭಯೋತ್ಪಾದಕರ ಮೂಲಸೌಕರ್ಯಗಳನ್ನು ಮಾತ್ರ ಗುರಿಯಾಗಿಸಲಾಗಿದೆ ಎಂದು ಭಾರತ ಹೇಳಿದೆ.