ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆಘಾತ | ಯುದ್ಧ ಸಂಪುಟಕ್ಕೆ ಸಚಿವ ಬೆನ್ನೀ ಗ್ಯಾಂಟ್ಸ್ ರಾಜೀನಾಮೆ
ತಕ್ಷಣ ಸಾರ್ವತ್ರಿಕ ಚುನಾವಣೆಗೆ ಆಗ್ರಹ
![ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆಘಾತ | ಯುದ್ಧ ಸಂಪುಟಕ್ಕೆ ಸಚಿವ ಬೆನ್ನೀ ಗ್ಯಾಂಟ್ಸ್ ರಾಜೀನಾಮೆ ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆಘಾತ | ಯುದ್ಧ ಸಂಪುಟಕ್ಕೆ ಸಚಿವ ಬೆನ್ನೀ ಗ್ಯಾಂಟ್ಸ್ ರಾಜೀನಾಮೆ](https://www.varthabharati.in/h-upload/2024/06/10/1271359-ganny.webp)
ಬೆನ್ನೀ ಗ್ಯಾಂಟ್ಸ್ | PC : X/@gantzbe
ಟೆಲ್ಅವೀವ್ : ಯುದ್ಧದ ಬಳಿಕ ಗಾಝಾದ ವ್ಯವಸ್ಥೆಯ ಕುರಿತು ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದ ಇಸ್ರೇಲ್ನ ಯುದ್ಧಸಂಪುಟದ ಸಚಿವ ಬೆನ್ನೀ ಗ್ಯಾಂಟ್ಸ್, ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿಯಾಗಿರುವ ಮಾಜಿ ರಕ್ಷಣಾ ಸಚಿವ ಗ್ಯಾಂಟ್ಸ್ ರಾಜೀನಾಮೆಯಿಂದ ನೆತನ್ಯಾಹು ಸರಕಾರಕ್ಕೆ ತಕ್ಷಣಕ್ಕೆ ಯಾವುದೇ ಅಪಾಯ ಎದುರಾಗದು. ಆದರೆ, ಇದು ನೆತನ್ಯಾಹು ಅವರ ವಿರುದ್ಧದ ಒತ್ತಡವನ್ನು ಹೆಚ್ಚಿಸಲಿದ್ದು ಗಂಭೀರ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.
ಗಾಝಾದ ಬಗ್ಗೆ ಸ್ಪಷ್ಟ ಕಾರ್ಯನೀತಿ ರೂಪಿಸಲು ಜೂನ್ 8ರ ಗಡುವನ್ನು ನೀಡುವುದಾಗಿ ಕಳೆದ ತಿಂಗಳು ಗ್ಯಾಂಟ್ಸ್ ಹೇಳಿದ್ದರು. ಟಿವಿ ವಾಹಿನಿಯ ಮೂಲಕ ರಾಜೀನಾಮೆಯ ಘೋಷಣೆ ಮಾಡಿದ ಗ್ಯಾಂಟ್ಸ್, ಗಾಝಾದಲ್ಲಿ ನಿಜವಾದ ಗೆಲುವಿನತ್ತ ಮುನ್ನಡೆಯದಂತೆ ನಮ್ಮನ್ನು ನೆತನ್ಯಾಹು ತಡೆದಿದ್ದಾರೆ. ಆದ್ದರಿಂದ ಭಾರವಾದ ಹೃದಯದೊಂದಿಗೆ ನಾನು ಸರಕಾರವನ್ನು ತೊರೆಯುತ್ತಿದ್ದೇನೆ. ಇದು ಅತ್ಯಂತ ಸಂಕೀರ್ಣ ಮತ್ತು ನೋವಿನ ನಿರ್ಧಾರವಾಗಿದೆ ಎಂದರು.
ನೆತನ್ಯಾಹು ಅವರ ಪ್ರಮುಖ ರಾಜಕೀಯ ಎದುರಾಳಿ ಎನಿಸಿರುವ ಗ್ಯಾಂಟ್ಸ್, ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ರಚಿಸಲಾದ ಯುದ್ಧಸಂಪುಟದ ಸಚಿವರಾಗಿ ಸೇರ್ಪಡೆಗೊಂಡಿದ್ದರು. `ದೇಶದ ಪರಿಸ್ಥಿತಿ ಮತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಬದಲಾದ್ದರಿಂದ ರಾಜೀನಾಮೆ ನೀಡಬೇಕಾಗಿದೆ. ಗಾಝಾ ಪಟ್ಟಿಯಲ್ಲಿ ಯುದ್ಧಾನಂತರದ ಕಾರ್ಯತಂತ್ರ ರೂಪಿಸುವಲ್ಲಿ ನೆತನ್ಯಾಹು ತನ್ನ ವೈಯಕ್ತಿಕ ರಾಜಕೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ. ರಾಜಕೀಯ ಲಾಭದ ನಿರ್ಧಾರದ ಎದುರು ರಾಷ್ಟ್ರನಿಷ್ಟೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸಲ್ಪಡುತ್ತಿದೆ' ಎಂದು ಪ್ರತಿಪಾದಿಸಿದ ಅವರು, ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಕ್ಷಣ ಚುನಾವಣೆಯ ದಿನಾಂಕ ಘೋಷಿಸುವಂತೆ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
ಸರಕಾರದಲ್ಲಿ ಮುಂದುವರಿಯುವಂತೆ ಗ್ಯಾಂಟ್ಸ್ರನ್ನು ಪ್ರಧಾನಿ ನೆತನ್ಯಾಹು ಒತ್ತಾಯಿಸಿದ್ದಾರೆ. `ಇದು ಒಗ್ಗಟ್ಟು ಪ್ರದರ್ಶಿಸುವ ಸಮಯ, ವಿಭಜನೆಯ ಸಮಯವಲ್ಲ. ಇದು ಅಭಿಯಾನವನ್ನು ತೊರೆಯುವ ಸಮಯವಲ್ಲ. ನಮ್ಮ ಪಡೆಗಳ ಜತೆ ಕೈಜೋಡಿಸುವ ಸಮಯ' ಎಂದು `ಎಕ್ಸ್' ಮಾಡಿರುವ ಅವರು, ನಿಲುವು ಬದಲಾಯಿಸುವಂತೆ ಆಗ್ರಹಿಸಿದ್ದಾರೆ. `ಹಮಾಸ್ ಎದುರಿಗಿನ ಯುದ್ಧದ ಹೊರೆಯನ್ನು ಹಂಚಿಕೊಳ್ಳಲು ಸಿದ್ಧವಿರುವ ಯಾವುದೇ ಪಕ್ಷಕ್ಕೆ ತನ್ನ ಬಾಗಿಲು ಸದಾ ತೆರೆದಿರುತ್ತದೆ. ಗೆಲುವು ಮತ್ತು ಯುದ್ಧದ ಎಲ್ಲಾ ಉದ್ದೇಶಗಳೂ ಈಡೇರುವವರೆಗೆ ನಾವು ಮುಂದುವರಿಯಲಿದ್ದೇವೆ' ಎಂದು ನೆತನ್ಯಾಹು ಹೇಳಿದ್ದಾರೆ.
ಯುದ್ಧ ಸಂಪುಟ:
ಗಾಝಾ ಯುದ್ಧಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲು ಕಳೆದ ವರ್ಷದ ಅಕ್ಟೋಬರ್ 11ರಂದು ನೆತನ್ಯಾಹು ಯುದ್ಧಸಂಪುಟವನ್ನು ರಚಿಸಿದ್ದರು. ಇದು ಇಸ್ರೇಲ್ ಸರಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಸಂಪುಟಕ್ಕೆ ಸೇರ್ಪಡೆಯಾಗಲು ವಿಪಕ್ಷ ಮುಖಂಡ ಬೆನ್ನೀ ಗ್ಯಾಂಟ್ಸ್ರನ್ನು ಪ್ರಧಾನಿ ಆಹ್ವಾನಿಸಿದ್ದರು.
ಯುದ್ಧ ಸಂಪುಟದಲ್ಲಿ ಬಲಪಂಥೀಯ ಸದಸ್ಯರೊಂದಿಗೆ ಸಮತೋಲನ ಸಾಧಿಸಲು, ಅಜಾಗರೂಕ ನಿರ್ಧಾರಗಳನ್ನು ಕೈಗೊಳ್ಳದಂತೆ ತಡೆಯಲು ಸಂಪುಟ ಸೇರುವುದಾಗಿ ಬೆನ್ನೀ ಗ್ಯಾಂಟ್ಸ್ ಹೇಳಿದ್ದರು.
ಆದರೆ ಯುದ್ಧ ನಿರೀಕ್ಷೆಗೂ ಮೀರಿದ ಅವಧಿಗೆ ಮುಂದುವರಿದಿದ್ದರಿಂದ, ಒತ್ತೆಯಾಳುಗಳು ಇನ್ನೂ ಗಾಝಾದಲ್ಲಿ ಬಂಧನಲ್ಲಿರುವ ಹಿನ್ನೆಲೆಯಲ್ಲಿ, ಸಂಪುಟದಲ್ಲಿ ಮುಂದುವರಿದರೆ ತನ್ನ ಜನಪ್ರಿಯತೆಗೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಗ್ಯಾಂಟ್ಸ್ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.