ನೇಪಾಳ| ಪ್ರವಾಹದಲ್ಲಿ ಕೊಚ್ಚಿಹೋದ ಬ್ಯಾಂಕ್ ಲಾಕರ್ನಿಂದ ಹಣ ದೋಚಿದ ಆರೋಪ: 29 ಮಂದಿ ವಶಕ್ಕೆ

Photo Credit: ndtv
ಕಠ್ಮಂಡು: ನೇಪಾಳದ ಭೀಕರ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಬ್ಯಾಂಕ್ ಸೇಫ್ ಲಾಕರ್ ಒಂದನ್ನು ಒಡೆದು, ಅದರಲ್ಲಿದ್ದ ಹಣವನ್ನು ಕದ್ದ ಆರೋಪದ ಮೇಲೆ ಪೊಲೀಸರು 29 ಜನರನ್ನು ವಶಕ್ಕೆ ಪಡೆದಿದ್ದಾರೆ.
ರಸುವಾ ಜಿಲ್ಲೆಯ ಭೋಟೇಕೋಶಿ ಪ್ರದೇಶದಿಂದ ಈ ಲಾಕರ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದು, ನಂತರ ಧಾಡಿಂಗ್ ಜಿಲ್ಲೆಯ ಗಾಲ್ಛಿ ಗ್ರಾಮೀಣ ನಗರಪಾಲಿಕೆ-4ರ ಬೆಲ್ಖುಖೋಲಾ ಬಳಿ ತ್ರಿಶೂಲಿ ನದಿ ದಂಡೆಗೆ ತೇಲಿಬಂದಿತ್ತು. ನದಿ ದಂಡೆಯಲ್ಲಿ ಸಿಕ್ಕ ಲಾಕರ್ ಅನ್ನು ಸ್ಥಳೀಯರು ಬಲವಂತವಾಗಿ ತೆರೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಎಂಬ ಮಾಹಿತಿ ದೊರೆತ ನಂತರ ಪೊಲೀಸರು ತನಿಖೆ ಆರಂಭಿಸಿ 29 ಜನರನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದ ವ್ಯಕ್ತಿಗಳಿಂದ 92,68,505 ನೇಪಾಳಿ ರೂಪಾಯಿಗಳನ್ನು (ಭಾರತೀಯ ಮೌಲ್ಯದ ಸುಮಾರು 57 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಹಣದ ಮೂಲ ಯಾವುದು ಮತ್ತು ಈ ಕೃತ್ಯದಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.




